
ನವದೆಹಲಿ, ಫೆಬ್ರವರಿ 20: 2019ರ ಐಸಿಸಿ ವಿಶ್ವಕಪ್ ನಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ ಪಂದ್ಯವನ್ನಾಡಲಿದೆಯೋ ಇಲ್ಲವೋ ಎಂಬ ಬಗ್ಗೆ ಭಾರತದ ಲೆಗ್ ಸ್ಪಿನ್ನರ್ ಚಾಹಲ್ ಅವರಿಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ ದಾಳಿಗೆ ನಾವು ತಿರುಗೇಟು ಕೊಡಲೇಬೇಕು ಎಂದವರು ಹೇಳಿದ್ದಾರೆ.
ಪುಲ್ವಾಮಾದಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರು ಸಾವನ್ನಪ್ಪಿದ ಘಟನೆ ಇಡೀ ಭಾರತೀಯರನ್ನು ಘಾಸಿಗೊಳಿಸಿದೆ. ಭಾರತದ ಕ್ರೀಡಾ ವಿಭಾಗದಿಂದಲೂ ಇದಕ್ಕೆ ತೀವ್ರ ಆಕ್ರೋಷ ವ್ಯಕ್ತವಾಗಿದೆ. ಪಾಕಿಸ್ತಾನ ಕ್ರೀಡಾ ವಿಭಾಗಕ್ಕೆ ದಾಳಿಯ ಬಿಸಿ ತಾಗತೊಡಗಿದೆ.
ಇಂಡಿಯಾ ಟುಡೇ ಜೊತೆ ಬುಧವಾರ (ಫೆಬ್ರವರಿ 20) ಮಾತನಾಡುತ್ತ ಯುಜುವೇಂದ್ರ ಚಾಹಲ್, 'ವಿಶ್ವಕಪ್ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡಬೇಕೋ ಬೇಡವೋ ಎಂಬ ನಿರ್ಧಾರವನ್ನು ಬಿಸಿಸಿಐ ಮತ್ತು ಸರ್ಕಾರ ಕೈಗೊಳ್ಳಲಿದೆ. ಆದರೆ ಭಯೋತ್ಮಾದನೆಗೆ ಸಂಬಂಧಿಸಿ ಭಾರತ ಕಠಿಣ ಕ್ರಮವನ್ನಂತೂ ತೆಗೆದುಕೊಳ್ಳಲೇಬೇಕು' ಎಂದಿದ್ದಾರೆ.
'ವಿಶ್ವಕಪ್ ನಲ್ಲಿ ಆಡುವ ಬಗ್ಗೆ ನಾವು ಒಬ್ಬರು ಅಥವಾ ಇಬ್ಬರು ಆಟಗಾರರು ನಿರ್ಧರಿಸುವಂತಲ್ಲ. ದಾಳಿಕೋರರಿಗೆ ಭಾರತ ತಕ್ಕಪಾಠ ಕಲಿಸಿಯೇ ತೀರಬೇಕು. ಈ ವಿಚಾರವಾಗಿ ನಾವು ಇನ್ನೂ ಹೆಚ್ಚುಕಾಲ ಸಹಿಷ್ಣರಾಗುವುದು ಸಾಧ್ಯವೇ ಇಲ್ಲ' ಎಂದು ದಾಳಿಗೆ ಸಂಬಂಧಿಸಿ ಪಾಕ್ ವಿರುದ್ಧ ಚಾಹಲ್ ಕಿಡಿಕಾರಿದ್ದಾರೆ.