
ನವೆಂಬರ್ 2ರ ಮಂಗಳವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಪಂದ್ಯಗಳ ಫಲಿತಾಂಶ ಸೇರಿದಂತೆ ಇನ್ನೂ ಕೆಲ ಪ್ರಮುಖ ವಿದ್ಯಮಾನಗಳು ಜರುಗಿವೆ. ಹೀಗೆ ನವೆಂಬರ್ 2ರ ಮಂಗಳವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದಿರುವ ಪ್ರಮುಖ ಘಟನೆಗಳ ಕಿರು ನೋಟ ಈ ಕೆಳಕಂಡಂತಿದೆ.
* ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಈ ಬಾರಿಯ ಆವೃತ್ತಿಯಲ್ಲಿ ಇಂದು ( ನವೆಂಬರ್ 2 ) 2 ಪಂದ್ಯಗಳು ನಡೆದಿದ್ದು ಮೊದಲನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿ ಆಸ್ಟ್ರೇಲಿಯಾವನ್ನು ತೃತೀಯ ಸ್ಥಾನಕ್ಕೆ ತಳ್ಳಿದೆ. ಹಾಗೂ ಇದೇ ದಿನದ ದ್ವಿತೀಯ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸೆಣಸಾಡಿದ ಪಾಕಿಸ್ತಾನ 45 ರನ್ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವನ್ನು ದಾಖಲಿಸಿ ಸೆಮಿಫೈನಲ್ ಹಂತಕ್ಕೆ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿದೆ.
* ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 2019ರಲ್ಲಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಈ ಮೂಲಕ ಕಮ್ಬ್ಯಾಕ್ನ ಸೂಚನೆ ಕೊಟ್ಟಿದ್ದಾರೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ ಮತ್ತೊಮ್ಮೆ ಮೈದಾನಕ್ಕೆ ಇಳಿಯುವ ಸಾಧ್ಯತೆಯಿದೆ ಎಂದಿದ್ದಾರೆ ಯುವರಾಜ್ ಸಿಂಗ್.
* "ಇಂಥಾ ಪಿಚ್ನಲ್ಲಿ ಆರಂಭದಲ್ಲಿ ಬ್ಯಾಟಿಂಗ್ ನಡೆಸುವುದು ಸುಲಭವಿಲ್ಲ. ಮೊದಲಿಗೆ ಬ್ಯಾಟಿಂಗ್ ನಡೆಸಿದ ಯಾವ ತಂಡವಾದರೂ ಇಲ್ಲಿ ಸಂಕಷ್ಟವನ್ನು ಎದುರಿಸಿದೆ. ನಾವು ದೊಡ್ಡ ಹೊಡೆತಗಳನ್ನು ಬಾರಿಸುವಾಗ ಎಡವಿದೆವು ನಿಜ. ಆದರೆ ಇಲ್ಲಿನ ಪಿಚ್ನಲ್ಲಿ ಅದು ಬಹಳ ಕಷ್ಟವಿತ್ತು" ಎಂದು ಹೇಳಿಕೆಯನ್ನು ನೀಡುವುದರ ಮೂಲಕ ಭಾರತದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ನ್ಯೂಜಿಲೆಂಡ್ ವಿರುದ್ಧದ ಟೀಮ್ ಇಂಡಿಯಾದ ಸೋಲಿಗೆ ದುಬೈ ಪಿಚ್ ಕಾರಣವಾಯಿತು ಎಂದಿದ್ದಾರೆ.
* ಟೀಮ್ ಇಂಡಿಯಾ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿತು, ತದನಂತರ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಕೂಡ ಸೋಲುಂಡಿತು. ಹೀಗೆ ಟೀಂ ಇಂಡಿಯಾದ ಸತತ 2 ಸೋಲಿನ ಕುರಿತು ಮಾತನಾಡಿರುವ ವಿಕ್ರಂ ರಾಥೋರ್ ಆ ಸೋಲುಗಳಿಗೆ ಕಾರಣವಾದ ಅಂಶವನ್ನು ಕೂಡ ಬಿಚ್ಚಿಟ್ಟಿದ್ದಾರೆ. "ಕೊನೆಯ 2 ಪಂದ್ಯಗಳಲ್ಲಿ ತಂಡದ ಕಳಪೆ ಪ್ರದರ್ಶನಕ್ಕೆ ಕಾರಣವಾದದ್ದು ನಾವು ನಮ್ಮ ಯೋಜನೆಗಳನ್ನು ಜಾರಿಗೆ ತರದೇ ಇದ್ದದ್ದೇ ಹೊರತು ನಮ್ಮ ತಂಡದ ತಯಾರಿಯಲ್ಲ" ಎಂದು ವಿಕ್ರಂ ರಾಥೋರ್ ಅಭಿಪ್ರಾಯಪಟ್ಟಿದ್ದಾರೆ.
* "ಭಾರತ ತಂಡ ಹೊಡೆದು ಇಬ್ಬಾಗವಾದಂತೆ ಕಾಣಿಸುತ್ತಿದೆ. ಹೀಗೆ ಇಬ್ಭಾಗವಾಗಿರುವ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಪರ 1 ತಂಡವಿದ್ದರೆ, ವಿರಾಟ್ ಕೊಹ್ಲಿ ವಿರುದ್ಧ ಮತ್ತೊಂದು ತಂಡವಿದೆ. ಹೀಗೆ 2 ತಂಡಗಳಾಗಿ ಭಾರತ ತಂಡ ಹೊಡೆದು ಹೋಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಈ ರೀತಿಯ ಬೆಳವಣಿಗೆಗಳು ತಂಡದ ಒಳಗೆ ಯಾಕೆ ಆಗುತ್ತಿದೆ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ. ಬಹುಶಃ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸುವುದು ಇದೇ ಕೊನೆಯ ಟೂರ್ನಿಯಲ್ಲಿ ಎಂಬ ಕಾರಣಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಸಂಶಯ ಮೂಡುತ್ತಿದೆ. ಆದರೂ ಕೊಹ್ಲಿ ಓರ್ವ ಅತ್ಯದ್ಭುತ ಆಟಗಾರ, ಆತನಿಗೆ ಇತರ ಆಟಗಾರರು ಗೌರವವನ್ನು ನೀಡಬೇಕು" ಎಂದು ಶೋಯೆಬ್ ಅಖ್ತರ್ ಟೀಮ್ ಇಂಡಿಯಾ ಹೊಡೆದು ಇಬ್ಭಾಗವಾಗಿದೆ ಎಂಬ ಸಂಶಯವನ್ನು ಹೊರಹಾಕಿದ್ದಾರೆ.