ಮುಂಬರುವ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಪೂರ್ವ ತಯಾರಿ ಎಂಬಂತೆ, ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ 2023ರ ಏಷ್ಯಾ ಕಪ್ ಪಂದ್ಯಾವಳಿ ನಡೆಯುತ್ತಿದೆ. ಈ ವೇಳೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಣ್ಣರಳಿಸಿ ಕಾಯುತ್ತಿದ್ದಾರೆ.
ಶನಿವಾರ, ಸೆಪ್ಟೆಂಬರ್ 2ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ 2023ರ ಏಷ್ಯಾ ಕಪ್ ಪಂದ್ಯಾವಳಿಯ ಅತಿದೊಡ್ಡ ಹಣಾಹಣಿಗೆ ಮಳೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ಇದೆ.

ಮುಂದಿನ ಕೆಲವು ದಿನಗಳಲ್ಲಿ ಶ್ರೀಲಂಕಾದ ದಕ್ಷಿಣ ಭಾಗದಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ಈ ಮೊದಲೇ ಈ ಸತ್ಯವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ)ಗೆ ತಿಳಿಸಲಾಗಿತ್ತು ಮತ್ತು ಪರಿಣಾಮವಾಗಿ ಕ್ಯಾಂಡಿ ಬದಲಾಗಿ ಡಂಬುಲ್ಲಾವನ್ನು ಪರ್ಯಾಯ ಸ್ಥಳವಾಗಿ ನೀಡಲಾಯಿತು.
ಆದಾಗ್ಯೂ, ಏಷ್ಯಾ ಕಪ್ನಲ್ಲಿ ಭಾರತ ತಂಡದ ಮುಂದಿನ ಎರಡು ಪಂದ್ಯಗಳು, ಪಾಕಿಸ್ತಾನ ಮತ್ತು ನೇಪಾಳ ವಿರುದ್ಧ ಶನಿವಾರ ಮತ್ತು ಸೋಮವಾರ ಕ್ಯಾಂಡಿಯಲ್ಲೇ ನಡೆಯಲಿವೆ.

ಯುಕೆ ಮೂಲದ ಮೆಟ್ ಆಫೀಸ್ ಪ್ರಕಾರ, ಕ್ಯಾಂಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆಯು ಪ್ರಸ್ತುತ ಶೇಕಡಾ 70ರಷ್ಟಿದೆ. ಮಳೆಯು 2:30ಕ್ಕೆ (ಪಂದ್ಯ ಪ್ರಾರಂಭವಾಗುವ ಅರ್ಧ ಗಂಟೆ ಮೊದಲು) ಬರುವ ಸಾಧ್ಯತೆ ಇದ್ದು, ಹೀಗಾಗಿ ಟಾಸ್ ಮತ್ತು ಅಂತಿಮವಾಗಿ ಪಂದ್ಯದ ಆರಂಭ ವಿಳಂಬವಾಗುವ ಮುನ್ಸೂಚನೆ ನೀಡಿದೆ.
ಶನಿವಾರ ಸಂಜೆ 5.30ರ ವೇಳೆಗೆ ಮಳೆಯ ಸಾಧ್ಯತೆಯು ಶೇಕಡಾ 60ಕ್ಕೆ ಇಳಿಯಲಿದೆ. ಶ್ರೀಲಂಕಾದ ಹವಾಮಾನ ಇಲಾಖೆಯು ಮುಂದಿನ ಕೆಲವು ದಿನಗಳಲ್ಲಿ ದೇಶದ ಹಲವು ಪ್ರಾಂತ್ಯಗಳಲ್ಲಿ ಮಳೆಯ ಮುನ್ಸೂಚನೆ ನೀಡಿದೆ. ಕ್ಯಾಂಡಿ ಮಧ್ಯ ಪ್ರಾಂತ್ಯದ ಅಡಿಯಲ್ಲಿ ಬರುವುದರಿಂದ, ಶುಕ್ರವಾರ ಮತ್ತು ಶನಿವಾರ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ.
"ಪಶ್ಚಿಮ, ಸಬರಗಾಮುವಾ, ಮಧ್ಯ ಮತ್ತು ವಾಯುವ್ಯ ಪ್ರಾಂತ್ಯಗಳು ಮತ್ತು ಗಾಲೆ ಮತ್ತು ಮಾತಾರಾ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುತ್ತದೆ," ಎಂದು ಶ್ರೀಲಂಕಾ ಹವಾಮಾನ ಇಲಾಖೆ ಬುಧವಾರ ತಿಳಿಸಿದೆ.
"ಪಶ್ಚಿಮ ಮತ್ತು ಸಬರಗಾಮುವಾ ಪ್ರಾಂತ್ಯಗಳಲ್ಲಿ ಹಾಗೂ ಗಾಲೆ, ಮಾತಾರಾ ಜಿಲ್ಲೆಗಳು ಸೇರಿದಂತೆ ಕೆಲವು ಸ್ಥಳಗಳಲ್ಲಿ 75 ಮಿ.ಮೀ ಗಿಂತ ಹೆಚ್ಚು ಭಾರೀ ಮಳೆಯನ್ನು ನಿರೀಕ್ಷಿಸಬಹುದು," ಎಂದು ಮುನ್ಸೂಚನೆ ನೀಡಿದೆ.
ಏಕದಿನ ಕ್ರಿಕೆಟ್ನಲ್ಲಿ ಈವರೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು 132 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಭಾರತ ತಂಡ 55 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಪಾಕಿಸ್ತಾನವು 73 ಪಂದ್ಯಗಳನ್ನು ಗೆದ್ದಿದೆ. ಈ ಪಂದ್ಯಗಳ ಪೈಕಿ ಇದುವರೆಗೆ ಕೇವಲ 4 ಪಂದ್ಯಗಳು ಫಲಿತಾಂಶ ರಹಿತವಾಗಿವೆ.
ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಗ್ರೂಪ್ 1ರಲ್ಲಿ ನೇಪಾಳ ತಂಡದ ವಿರುದ್ಧ ಬುಧವಾರ ನಡೆದ ತನ್ನ ಮೊದಲ ಪಂದ್ಯವನ್ನು ಗೆದ್ದಿದೆ. ನೇಪಾಳ ವಿರುದ್ಧ 238 ರನ್ಗಳ ದಾಖಲೆ ಅಂತರದಿಂದ ಗೆಲುವು ಸಾಧಿಸಿತು. ಶನಿವಾರದ ಭಾರತ ವಿರುದ್ಧದ ಪಂದ್ಯವು ಮಳೆಯಿಂದ ರದ್ದಾದರೆ, ಪಾಕಿಸ್ತಾನ ತಂಡವು ಸೂಪರ್ 4 ಹಂತದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ.
ಮತ್ತೊಂದೆಡೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಶನಿವಾರದ ಪಾಕಿಸ್ತಾನ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾದರೆ, ಸೂಪರ್ 4ಕ್ಕೆ ಅರ್ಹತೆ ಪಡೆಯಲು ಸೋಮವಾರ, ಸೆಪ್ಟೆಂಬರ್ 4ರಂದು ನೇಪಾಳ ತಂಡವನ್ನು ಸೋಲಿಸಬೇಕಾಗುತ್ತದೆ.