
ಜೋಹಾನ್ಸ್ಬರ್ಗ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ಗೂ ಕೆಲ ಹೊತ್ತಿನ ಮುನ್ನ ನಾಯಕ ವಿರಾಟ್ ಕೊಹ್ಲಿ ಬದಲಿಗೆ, ಕೆ.ಎಲ್ ರಾಹುಲ್ ತಂಡವನ್ನ ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿತು. ವಿರಾಟ್ ಕೊಹ್ಲಿ ಬೆನ್ನು ಮೂಳೆಯ ನೋವಿನ ಸೆಳೆತದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ರಾಹುಲ್ ಟಾಸ್ ಸಂದರ್ಭದಲ್ಲಿ ಹೇಳಿದ್ರು.
ವಿರಾಟ್ ಕೊಹ್ಲಿ ದ್ವಿತೀಯ ಟೆಸ್ಟ್ ಆಡುತ್ತಿಲ್ಲ ಎಂದು ಸುದ್ದಿ ತಿಳಿದಿದ್ದೇ ತಡ ಎದುರಾಳಿ ತಂಡವೂ ಸೇರಿದಂತೆ, ಅಭಿಮಾನಿಗಳು ಆಶ್ಚರ್ಯಗೊಂಡ್ರು. ಟಾಸ್ ವೇಳೆವರೆಗೂ ವಿರಾಟ್ ಕೊಹ್ಲಿ ಈ ಪಂದ್ಯ ಆಡುತ್ತಿಲ್ಲ ಎಂಬ ಯಾವುದೇ ಸುಳಿವು ಕೂಡ ಸಿಕ್ಕಿರಲಿಲ್ಲ. ಫಿಸಿಯೋಗಳು ಕೊಹ್ಲಿ ಚೇತರಿಕೆಗೆ ಪ್ರಯತ್ನಿಸುತ್ತಿದ್ರು, ಹೀಗಾಗಿ 99 ಟೆಸ್ಟ್ ಪಂದ್ಯವನ್ನಾಡಬೇಕಿದ್ದ ವಿರಾಟ್ ಕಣದಿಂದ ಹೊರಗುಳಿದರು.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಹನುಮ ವಿಹಾರಿ ಅವಕಾಶ ಪಡೆದರು. ಆದ್ರೂ ಟೀಂ ಇಂಡಿಯಾ ಪರ ಹಿರಿಯ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ತಮ್ಮ ಮೇಲಿನ ಜವಾಬ್ದಾರಿ ಅರಿತು ಬ್ಯಾಟ್ ಬೀಸಬೇಕಾಗಿತ್ತು. ಆದ್ರೆ ಮತ್ತದೇ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಚೇತೇಶ್ವರ ಪೂಜಾರ (3) ರನ್ಗೆ ಔಟಾದ್ರೆ, ನಂತರದ ಎಸೆತದಲ್ಲೇ ಅಜಿಂಕ್ಯ ರಹಾನೆ ಶೂನ್ಯಕ್ಕೆ ಗೋಲ್ಡನ್ ಡಕ್ ಔಟ್ ಆದ್ರು.
ವಿರಾಟ್ ಕೊಹ್ಲಿ ಕಣಕ್ಕಿಳಿದ್ರೆ ಯಾರು ತಂಡದಿಂದ ಔಟ್?
ವಿರಾಟ್ ಕೊಹ್ಲಿ ಕೇಪ್ಟೌನ್ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೇತರಿಸಿಕೊಂಡು ಕಣಕ್ಕಿಳಿಯುತ್ತಾರೆ ಎಂದು ಸದ್ಯ ಹೇಳಲಾಗುತ್ತಿದೆ. ಹಾಗಿದ್ರೆ ವಿರಾಟ್ ವಾಪಸ್ಸಾದ್ರೆ ಯಾರು ತಂಡದಿಂದ ಹೊರಗುಳಿಯುತ್ತಾರೆ? ಅಜಿಂಕ್ಯ ರಹಾನೆ ಅಥವಾ ಚೇತೇಶ್ವರ ಪೂಜಾರ ಇಬ್ಬರಲ್ಲಿ ಯಾರಿಗೆ ಕೊಕ್ ನೀಡಲಾಗುವುದು ಎಂದು ಸದ್ಯ ಚರ್ಚೆ ನಡೆಯುತ್ತಿದೆ.
ಟೀಂ ಇಂಡಿಯಾ ಕ್ರಿಕಟಿಗ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಕೊಹ್ಲಿ ರಿಟರ್ನ್ ಆದ್ರೆ, ಯಾರು ತಂಡದಿಂದ ಹೊರಗುಳಿಯಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
"ಅವರಿಗೆ ಕೊಟ್ಟ ಉದ್ದನೆಯ ಹಗ್ಗ ನಿಧಾನವಾಗಿ ಉರಿಯುತ್ತಿದೆ ಮತ್ತು ನೀವು ಅದರ ಅಂತ್ಯಕ್ಕೆ ಬರುತ್ತಿದ್ದೀರಿ. ಅವರಿಬ್ಬರಿಗೂ ಅದರ ಅರಿವಿದೆ ಎಂದು ನನಗೆ ತುಂಬಾ ಖಚಿತವಾಗಿದೆ. ಅಲ್ಲದೆ, ನಾವು ಆಟಗಾರರ ಹಿಂದಿನ ಪ್ರದರ್ಶನದ ಸಾಮರ್ಥ್ಯವನ್ನು ನೋಡಬೇಕಾಗಿದೆ, ಅವರು ಕಂಬ್ಯಾಕ್ ಮಾಡಿದ್ದಾರೆ. ಈಗ ವಿರಾಟ್ ಕೊಹ್ಲಿ ಹಿಂತಿರುಗಿದರೆ, ಇಬ್ಬರಲ್ಲಿ ಒಬ್ಬರು ದಾರಿ ಮಾಡಿಕೊಡಬೇಕು ಎಂಬ ಭಾವನೆ ನಮ್ಮಲ್ಲಿದೆ'' ಎಂದು ಕಾರ್ತಿಕ್ ಕ್ರಿಕ್ಬಜ್ನಲ್ಲಿ ಹೇಳಿದರು.
ಇದರ ನಡುವೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕೋಚ್ ರಾಹುಲ್ ದ್ರಾವಿಡ್ ಹಿಂಜರಿಯುವುದಿಲ್ಲ ಎಂದು ಕಾರ್ತಿಕ್ ಸೇರಿಸಿದ್ದಾರೆ.
"ರಾಹುಲ್ ದ್ರಾವಿಡ್ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾಗ, ವಾಸ್ತವವಾಗಿ ಪೂಜಾರ ಅವರು ಅವರ ನಂತರದ ನಂ. 3 ರಲ್ಲಿ ಉತ್ತಮ ಪ್ರದರ್ಶನ ನೀಡಿದರು. ಅಂತಿಮವಾಗಿ ಅವರ ಸ್ಥಾನವನ್ನು ಪಡೆದುಕೊಳ್ಳುವಂತೆ ಅವರ ಮೇಲೆ ಒತ್ತಡ ಹೇರಿದರು. ಆದ್ರೀಗ ರಾಹುಲ್ ದ್ರಾವಿಡ್ ಒಂದೆರಡು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದ್ರೆ ಅವರಲ್ಲಿ ಒಬ್ಬರು ಅಥವಾ ಇಬ್ಬರನ್ನೂ ಕೈಬಿಡುವುದಾದರೆ ಯಾರು ಎಂಬ ನಿರ್ಧಾರ ಅವರೇ ತೆಗೆದುಕೊಳ್ಳಲಿದ್ದಾರೆ. ಏಕೆಂದರೆ ಅವರಿಗೆ ಈಗಾಗಲೇ ದೀರ್ಘ ಅವಕಾಶ ನೀಡಲಾಗಿದೆ ಎಂದು ಅವರಿಗೆ ತಿಳಿದಿದೆ, "ಎಂದು ಅವರು ಹೇಳಿದರು.
ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇತ್ತೀಚೆಗಷ್ಟೇ ಕೊಹ್ಲಿ, ರಹಾನೆ ಮತ್ತು ಪೂಜಾರ ಉತ್ತಮ ರನ್ ಕಲೆಹಾಕಲು ಹೆಣಗಾಡುತ್ತಿದ್ದರೂ ಮೂವರನ್ನು ಬೆಂಬಲಿಸಿದ್ದಾರೆ ಮತ್ತು ಅವರು ದೊಡ್ಡ ರನ್ ಗಳಿಸಲು ಪ್ರಾರಂಭಿಸುವ ಮೊದಲು ಇದು ಕೇವಲ ಸಮಯದ ವಿಷಯವಾಗಿದೆ ಎಂದು ಹೇಳಿದ್ದರು.
ಸೆಂಚುರಿಯನ್ ಟೆಸ್ಟ್ ಗೆಲುವಿನಲ್ಲಿಯೂ ಸಹ, ಪೂಜಾರ 0 ಮತ್ತು 16 ರನ್ ಗಳಿಸಿದ್ರೆ, ಕೊಹ್ಲಿ 35 ಮತ್ತು 18 ಮತ್ತು ರಹಾನೆ ಕೇವಲ 48 ಮತ್ತು 20 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮತ್ತು ಹನುಮ ವಿಹಾರಿ ಅವರಂತಹ ಯುವ ಆಟಗಾರರು ಬೆಂಚ್ ಕಾಯುತ್ತಿದ್ದರೂ, ಅನುಭವಿ ಹಿರಿಯ ಆಟಗಾರರು ರನ್ ಬರ ಎದುರಿಸುತ್ತಿದ್ದಾರೆ. ಹೀಗಾಗಿ ಈ ಯುವ ಬ್ಯಾಟ್ಸ್ಮನ್ಗಳು ಅವಕಾಶಕ್ಕಾಗಿ ತುದಿಗಾಲಲ್ಲಿ ಕಾದು ನಿಂತಿದ್ದಾರೆ.