ಕೊಚ್ಚಿ, ಜನವರಿ 5: ಸತತ ಸೋಲು ಹಾಗೂ ಡ್ರಾಗಳಿಂದ ಕಂಗೆಟ್ಟು ತಾನಿರಬಾರದ ಸ್ಥಾನದಲ್ಲಿದ್ದ ಕೇರಳ ಬ್ಲಾಸ್ಟರ್ಸ್ ತಂಡ ಕೊನೆಯಂಗಣದಲ್ಲಿ ಕೊನೆಗೂ ರೊಚ್ಚಿಗೆದ್ದಿತು. ಕೊಚ್ಚಿಯ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಹೈದರಾಬಾದ್ ಎಫ್ ಸಿ ವಿರುದ್ಧ 5-1 ಅಂತರದಲ್ಲಿ ಜಯ ಗಳಿಸಿ ನಾಲ್ಕನೇ ಸ್ಥಾನಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಬಾರ್ಥಲೋಮ್ಯೋ ಒಗ್ಬಚೆ (33 ಮತ್ತು 75ನೇ ನಿಮಿಷ), ಬ್ರಾಬರೋವ್ (39ನೇ ನಿಮಿಷ), ರಫಾಯಲ್ ಮೆಸ್ಸಿ ಬೌಲಿ (45ನೇ ನಿಮಿಷ) ಮತ್ತು ಸತ್ಯಸೇನ್ ಸಿಂಗ್ (59ನೇ ನಿಮಿಷ) ಗಳಿಸಿದ ಗೋಲು ತಂಡಕ್ಕೆ 5-1 ಅಂತರದ ಗೋಲು ತಂದುಕೊಟ್ಟಿತು. ಇದು ಕೇರಳ ತಂಡಕ್ಕೆ ಈ ಋತುವಿನಲ್ಲಿ ಸಿಕ್ಕ ಬೃಹತ್ ಅಂತರದ ಜಯ.
ಕೇರಳಕ್ಕೆ ಬೃಹತ್ ಮುನ್ನಡೆ
ಕೇರಳ ತಂಡ ಈ ಬಾರಿ ಮನೆಯಂಗಣದಲ್ಲಿ ನಿಜಾಗಿಯೂ ಮಿಂಚಿನ ಆಟವಾಡಿ ಮಿಂಚಿದೆ .ಪ್ರಥಮಾರ್ಧದಲ್ಲಿ ಆತಿಥೇಯ ತಂಡ 3-1 ಅಂತರದಲ್ಲಿ ಮೇಲುಗೈ ಸಾಧಿಸುವ ಮೂಲಕ ಕೇರಳ ತನ್ನ ಉದ್ದೇಶವನ್ನು ಸ್ಪಷ್ಟಪಡಿಸದೆ. ಪಂದ್ಯ ಆರಂಭಗೊಂಡ 14ನೇ ನಿಮಿಷದಲ್ಲಿ ಬೊಬೊ ಗಳಿಸಿದ ಗೋಲಿನಿಂದ ಹೈದರಾಬಾದ್ ಆರಂಭದಲ್ಲೆ ಮೇಲುಗೈ ಸಾಧಿಸಿ ಕೆರಳಕ್ಕೆ ಅಚ್ಚರಿ ಮೂಡಿಸಿತು. ಆದರೆ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ನಾಯಕ ಬಾರ್ಥಲೋಮ್ಯೊ ಒಗ್ಬಚೆ 33ನೇ ನಿಮಿಷದಲ್ಲಿ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು. ಇಲ್ಲಿಂದ ಕೇರಳ ಬ್ಲಾಸ್ಟರ್ಸ್ ಮತ್ತೆ ಗೋಲಿನ ಮೆರವಣಿಗೆ ನಿರ್ಮಿಸಿತು.
39ನೇ ನಿಮಿಷದಲ್ಲಿ ವ್ಲಾಟ್ಕೊ ಬ್ರೊಬರೊವ್ ಗಳಿಸಿದ ಅದ್ಭುತ ಗೋಲಿನಿಂದ ಕೇರಳ ಬ್ಲಾಸ್ಟರ್ಸ್ 2-1 ಗೋಲಿನಿಂದ ಮೊದಲ ಬಾರಿಗೆ ಮೇಲುಗೈ ಸಾಧಿಸಿತು. ರಫಾಯಲ್ ಮೆಸ್ಸಿ ಬೌಲಿ 45ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ 3-1ರ ಮುನ್ನಡೆ ಕಲ್ಪಿಸಿದರು. ಇದರೊಂದಿಗೆ ಪ್ರಥಾರ್ಧದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಅಬ್ಬರದ ಆಟವಾಡಿ 3-1 ಗೋಲುಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು.
ಕೇರಳಕ್ಕೆ ಜಯದ ಹಂಬಲ
ಮನೆಯಂಗಣದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಹೈದರಾಬಾದ್ ಎಫ್ ಸಿಗೆ ಆತಿಥ್ಯ ನೀಡಿತು. ಈ ಪಂದ್ಯದ ಬಗ್ಗೆ ಫುಟ್ಬಾಲ್ ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆ ಇಲ್ಲದಿದ್ದರೂ ಫುಟ್ಬಾಲ್ ನ ಕುತೂಹಲ ಇದ್ದೇ ಇರುತ್ತದೆ. ಇತ್ತಂಡಗಳು ಅಂಕಪಟ್ಟಿಯ ಕೆಳ ಹಂತದಲ್ಲಿದ್ದು, ಮೇಲಕ್ಕೇರುವ ಲಕ್ಷಣ ತೋರುತ್ತಿಲ್ಲ. ಕೇರಳ ತಂಡ ಋತುವಿನ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಮತ್ತೆ ಜಯದ ಹಾದಿ ಹಿಡಿದಿಲ್ಲ. ಅಂಗಣದ ಎರಡೂ ವಿಭಾಗಗಳಲ್ಲಿ ಕೇರಳ ಸಮಸ್ಯೆ ಎಸುರಿಸುತ್ತಿದ್ದು, ಅದಕ್ಕೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಅಟ್ಯಾಕ್ ಮತ್ತು ಬ್ಯಾಕ್ ಲೈನ್ ಎರಡರಲ್ಲೂ ಕೇರಳ ಹಿಂದೆ ಬಿದ್ದಿದೆ.
ಒಗ್ಬಚೆ ಹಾಗೂ ಬೌಲಿ ಆವರನ್ನು ಹೆಚ್ಚಾಗಿ ನಂಬಿಕೊಂಡಿದ್ದು ತಂಡದ ಹಿನ್ನಡೆಗೆ ಪ್ರಮುಖ ಕಾರಣ. ತಂಡ ಸಂಘಟಿತ ಹೋರಾಟ ನೀಡಬೇಕಾದ ಅಗತ್ಯ ಇದೆ. ಅಂತಿಮ ಕ್ಷಣದಲ್ಲಿ ಗೋಲು ನೀಡುವುದು ತಂಡದ ಕೆಟ್ಟ ಚಾಳಿಯಾಗಿದೆ. ಕೊನೆಯ ಸ್ಥಾನದಲ್ಲಿರುವ ಹೈದರಾಬಾದ್ ಅಂತಮ ನಾಲ್ಕರಲ್ಲಿ ಅವಕಾಶ ಪಡೆಯುವ ಆಸೆ ಜೀವಂತವಾಗಿರಿಸಿಕೊಳ್ಳಬೇಕಾದರೆ ಇಲ್ಲಿಂದ ನಿರಂತರ ಜಯ ಕಾಣಬೇಕಾಗಿದೆ.