
ನವದೆಹಲಿ, ಜುಲೈ 9: ಇಂಡೋನೇಷ್ಯಾದ ಜಕರ್ತಾ ಮತ್ತು ಪಾಲೆಂಬಂಗ್ ನಲ್ಲಿ ಆಗಸ್ಟ್ 18ರಿಂದ ಆರಂಭಗೊಳ್ಳಲಿರುವ ಏಷ್ಯಾನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳಲಿರುವ 18 ಜನರಿರುವ ಭಾರತದ ಪುರುಷರ ಹಾಕಿ ತಂಡವನ್ನು ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಮುನ್ನಡೆಸಲಿದ್ದಾರೆ. ಉಪನಾಯಕ ಸ್ಥಾವನವನ್ನು ಚಿಂಗ್ಲೆನ್ಸಾನಾ ಸಿಂಗ್ ಕಾಂಗುಜಮ್ ತುಂಬಲಿದ್ದಾರೆ.
ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದ ಫಾರ್ವರ್ಡ್ ಆಟಗಾರ ಆಕಾಶ್ ದೀಪ್ ಸಿಂಗ್ ತಂಡವನ್ನು ಮರಳಿ ಸೇರಿಕೊಂಡಿದ್ದಾರೆ. ನೆದರ್ಲ್ಯಾಂಡ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ವೇಳೆ ವಿರಾಮದಲ್ಲಿದ್ದ ಅನುಭವಿ ಡ್ರ್ಯಾಗ್ ಫ್ಲಿಕ್ಕರ್ ರೂಪೀಂದರ್ ಪಾಲ್ ಸಿಂಗ್ ಅವರ ಬಲವೂ ತಂಡಕ್ಕೆ ದೊರಕಲಿದೆ.
ಮಿಡ್ ಫೀಲ್ಡರ್ ಚಿಂಗ್ಲೆನ್ಸಾನಾ ಸಿಂಗ್ ಸೇರಿದಂತೆ ಅನುಭವಿ ಸರ್ದಾರ್ ಸಿಂಗ್ ಮನ್ ಪ್ರೀತ್ ಸಿಂಗ್, ಸಿಮ್ರನ್ಜೀತ್ ಸಿಂಗ್ ಮತ್ತು ವಿವೇಕ್ ಸಾಗರ್ ಪ್ರಸಾದ್ ಮಿಡ್ ಫೀಲ್ಡಿಂಗ್ ನಲ್ಲಿರಲಿದ್ದಾರೆ. ಫಾರ್ವರ್ಡ್ಸ್ ನಲ್ಲಿ ಆಕಾಶ್ ದೀಪ್ ಸಿಂಗ್, ಅನುಭವಿ ಎಸ್.ವಿ. ಸುನಿಲ್, ಮನ್ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ ಮತ್ತು ದಿಲ್ಪ್ರೀತ್ ಸಿಂಗ್ ಆಡಲಿದ್ದಾರೆ.
ರಕ್ಷಣಾ ಆಟಗಾರರಾಗಿ ರೂಪೀಂದರ್ ಪಾಲ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ವರುಣ್ ಕುಮಾರ್, ಅಮಿತ್ ರೋಹಿದಾಸ್ ಮತ್ತು ಬಿರೇಂದ್ರ ಲಾಕ್ರಾ ಕಣಕ್ಕಿಳಿಯಲಿದ್ದಾರೆ.
'ಇತ್ತೀಚಿನ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿಸಿದ ಶ್ರೇಷ್ಠ ಆಟಗಾರರನ್ನು ತಂಡ ಒಳಗೊಂಡಿದೆ. ದುರದೃಷ್ಟವಶಾತ್ ತಮ್ಮ ತಂಡಕ್ಕೆ ರಮಣ್ ದೀಪ್ ಸಿಂಗ್ ಬಲ ದೊರೆಯದಾಗಿದೆ. ಮೊಣಕಾಲು ನೋವಿಗೆ ತುತ್ತಾಗಿರುವ ರಮಣ್ ಏಷ್ಯಾನ್ ಗೇಮ್ಸ್ ನಿಂದ ಹೊರಗುಳಿಯಲಿದ್ದಾರೆ' ಎಂದು ತಂಡದ ಕೋಚ್ ಹರೇಂದ್ರ ಸಿಂಗ್ ತಿಳಿಸಿದರು.