
ಆರು ಬೆರಳಿನ ಶಾಪ
ಸ್ವಪ್ನಾ ಬದುಕಿನುದ್ದಕ್ಕೂ ಸವಾಲುಗಳನ್ನು ಎದುರಿಸಿದವರು. ಆರು ಬೆರಳು ಇದ್ದರೆ ಅದೃಷ್ಟ ಎನ್ನುವ ನಂಬಿಕೆಯಿದೆ. ಆದರೆ, ಸ್ವಪ್ನಾಗೆ ಆರು ಬೆರಳುಗಳೇ ಶಾಪ. ಅವರ ಎರಡೂ ಕಾಲುಗಳಲ್ಲಿ ಆರು ಬೆರಳುಗಳಿವೆ. ಅವರ ಕಾಲುಗಳಿಗೆ ಸರಿಹೊಂದುವ ಶೂಗಳು ಸಿಗುವುದೂ ಇಲ್ಲ. ಈ ನೋವಿನ ನಡುವೆಯೇ ಹೆಪ್ಟಾಥ್ಲಾನ್ನ ಲಾಂಗ್ ಜಂಪ್, ಜಾವೆಲಿನ್ ಎಸೆತ, ಶಾಟ್ಪಟ್, ಹರ್ಡಲ್ಸ್ ಮತ್ತು 200 ಮೀಟರ್, 800 ಮೀಟರ್ ರೇಸ್ನಲ್ಲಿ ಅವರು ಸಾಧನೆ ಮೆರೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ತಮ್ಮ ಕಾಲಿಗೆ ಸರಿಹೊಂದದ ಶೂ ಧರಿಸಿಕೊಂಡೇ ಅವರು ಓಡಿದರು, ಜಿಗಿದರು. ಜಿಗಿದು ಕಾಲೂರಿದಾಗ ಉಂಟಾದ ಅಪಾರ ನೋವನ್ನು ಸಹಿಸಿಕೊಂಡರು.
ಕೊನೆಗೂ ಕಣ್ಬಿಟ್ಟ ಸರ್ಕಾರ, ಪದಕ ವಿಜೇತೆಗೆ ಸರ್ಕಾರಿ ಉದ್ಯೋಗ

ರಿಕ್ಷಾ ಎಳೆಯುವಾತನ ಮಗಳು
ಬಂಗಾಳದ ಜಲ್ಪೈಗುರಿ ಜಿಲ್ಲೆಯವರಾದ 21 ವರ್ಷದ ಸ್ವಪ್ನಾಳ ತಂದೆ ರಿಕ್ಷಾ ಸಾಗಿಸುವವರು, ತಾಯಿ ಚಹಾ ತೋಟದಲ್ಲಿ ಕೆಲಸ ಮಾಡುತ್ತಾರೆ. ಬಡತನ, ಹಳ್ಳಿ ಬದುಕು, ಕಾಲು ಬೆರಳಿನ ಸಮಸ್ಯೆಗಳಾವುದೂ ಸ್ವಪ್ನಾಗೆ ಸವಾಲಾಗಲಿಲ್ಲ.
ಸ್ವಪ್ನಾರ ಕ್ರೀಡಾಸಕ್ತಿಗೆ ಪೋಷಕರು ನೀರೆರೆಯುವ ಆಸಕ್ತಿ ಹೊಂದಿದ್ದರೂ ಅದಕ್ಕೆ ತಗಲುವ ವೆಚ್ಚವನ್ನು ಭರಿಸುವಷ್ಟು ಶಕ್ತಿ ಅವರಲ್ಲಿ ಇರಲಿಲ್ಲ. ಚಿಕ್ಕಂದಿನಲ್ಲಿ ಕಾಲಿಯಾಗಂಜ್ ಎಂಬಲ್ಲಿ ಶಾಲಾ ತಂಡವನ್ನು ಅಥ್ಲೆಟಿಕ್ಸ್ನಲ್ಲಿ ಪ್ರತಿನಿಧಿಸಲು ಸ್ವಪ್ನಾ ಆಯ್ಕೆಯಾದಾಗ ಅಪ್ಪ ಹಣ ಕೂಡಿಟ್ಟು ತಂದುಕೊಟ್ಟ ಸ್ಪೋರ್ಟ್ಸ್ ಶೂ ಆರು ಬೆರಳಿನ ಕಾರಣಕ್ಕೆ ಕಾಲಿನ ಅಳತೆಗೆ ಸರಿಹೊಂದುತ್ತಿರಲಿಲ್ಲ. ಕೊನೆಗೆ ಸ್ವಪ್ನಾ, ದೊಡ್ಡ ಶೂ ಬಳಸತೊಡಗಿದರು. ಅದರ ಗಾತ್ರಕ್ಕೆ ಕ್ರಮೇಣ ಹೊಂದಿಕೊಂಡರು.
ಬೆಳ್ಳಿ ಪದಕ ಗೆದ್ದಿದ್ದಕ್ಕಿಂತಲೂ ಪರೀಕ್ಷೆಯಲ್ಲಿ ಪಾಸಾಗಿದ್ದೇ ದೊಡ್ಡ ಸಾಧನೆ!

ರಾಹುಲ್ ದ್ರಾವಿಡ್ ನೆರವು
ಅವರ ಕ್ರೀಡಾ ಪ್ರತಿಭೆಯನ್ನು ಗುರುತಿಸಿದ ಸ್ಕೌಟ್ಸ್ ಸ್ಕಾಲರ್ಶಿಪ್ ಒದಗಿಸಿತು. ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಂತಹ ಕೆಲವರು ಪ್ರಾಯೋಜಕತ್ವ ವಹಿಸಿದರು.
ಎರಡು ಬಾರಿ ಪಾರ್ಶ್ವವಾಯುವಿಗೆ ತುತ್ತಾದ ಸ್ವಪ್ನಾಳ ತಂದೆ ಪಂಚನನ್ ಬರ್ಮನ್, ಈಗ ಹಾಸಿಗೆ ಹಿಡಿದಿದ್ದಾರೆ. ಚಹಾ ತೋಟದಲ್ಲಿ ಕೆಲಸ ಮಾಡಿ, ಮನೆಗೆಲಸವನ್ನೂ ಮಾಡಿ ಆಕೆಯ ತಾಯಿ ಕುಟುಂಬವನ್ನು ಪೋಷಿಸುತ್ತಿದ್ದಾರೆ.

ಕ್ರೀಡೆ ತೊರೆಯುವ ನಿರ್ಧಾರ
ಸ್ವಪ್ನಾ ಕ್ರೀಡಾ ಬದುಕಿನುದ್ದಕ್ಕೂ ಗಾಯದ ಸಮಸ್ಯೆಗಳನ್ನು ಎದುರಿಸಿದ್ದಾರೆ. ಬೆನ್ನು ನೋವು, ಸತತ ವೈದ್ಯಕೀಯ ಚಿಕಿತ್ಸೆಗಳಿಗೆ ಒಳಪಡುತ್ತಿದ್ದ ಅವರು, ಜಕಾರ್ತಾದಲ್ಲಿ ಹಲ್ಲುನೋವಿನ ತೊಂದರೆಗೆ ಒಳಗಾಗಿದ್ದಾರೆ.
ಗಾಯ ಅವರ ವೃತ್ತಿಬದುಕಿನ ಭಾಗವಾಗಿಬಿಟ್ಟಿದೆ. ಬೆನ್ನಿನ ಸಮಸ್ಯೆಗೆ ತುತ್ತಾಗಿದ್ದ ಅವರು ಒಂದು ಹಂತದಲ್ಲಿ ಕ್ರೀಡೆಯನ್ನು ತೊರೆಯುವ ನಿರ್ಧಾರಕ್ಕೂ ಬಂದಿದ್ದರು.

ಬೆನ್ನು ನೋವಿನ ನಡುವೆಯೇ ಸ್ಪರ್ಧೆ
ಆಗ ನೆರವಾಗಿದ್ದೇ ಭಾರತ ಕ್ರಿಕೆಟ್ ತಂಡದ ಫಿಸಿಯೋ ಆಗಿದ್ದ ಜಾನ್ ಗ್ಲೋಸ್ಟರ್. ಸಚಿನ್ ತೆಂಡೂಲ್ಕರ್ ಬೆನ್ನುನೋವಿನಿಂದ ಗುಣಮುಖರಾಗಲು ಪ್ರಮುಖ ಪಾತ್ರ ವಹಿಸಿದ್ದ ಗ್ಲೋಸ್ಟರ್ ಅವರನ್ನು ಕಳೆದ ವರ್ಷದ ಅಕ್ಟೋಬರ್ನಲ್ಲಿ ಸ್ವಪ್ನಾ ಭೇಟಿ ಮಾಡಿದರು. ಗ್ಲೋಸ್ಟರ್ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸೂಚಿಸಿದರೂ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕದ ಬೇಟೆಯಾಡುವ ಕನಸು ಕಂಡಿದ್ದ ಸ್ವಪ್ನಾ, ಅದಕ್ಕಾಗಿ ಚಿಕಿತ್ಸೆಯನ್ನು ವಿಳಂಬ ಮಾಡಿದರು.

ಗೆದ್ದವರು ಮೂವರು ಮಾತ್ರ
ಸ್ವಪ್ನಾಗಿಂತ ಮೊದಲು ಏಷ್ಯನ್ ಗೇಮ್ಸ್ನ ಹೆಪ್ಟಾಥ್ಲಾನ್ನ ಏಳು ವಿಭಾಗಗಳಲ್ಲಿಯೂ ಉತ್ತಮ ಅಂಕ ಪಡೆದು ಭಾರತಕ್ಕೆ ಪದಕ ತಂದವರು ಮೂವರು ಮಾತ್ರ. ಪಶ್ಚಿಮ ಬಂಗಾಳದ ಸೋಮಾ ಬಿಸ್ವಾಸ್ 2002ರಲ್ಲಿ ಬೂಸಾನ್ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಜಯಿಸಿದ್ದರೆ, ಕರ್ನಾಟಕದವರಾದ ಜೆಜೆ ಶೋಭಾ ದೋಹಾ ಗೇಮ್ಸ್ನಲ್ಲಿ (2006) ಮತ್ತು ಪ್ರಮೀಳಾ ಅಯ್ಯಪ್ಪ ಗುವಾಂಗ್ಜು ಏಷ್ಯನ್ ಗೇಮ್ಸ್ನಲ್ಲಿ (2010) ಕಂಚಿನ ಪದಕ ಗೆದ್ದಿದ್ದರು. ಈ ವಿಭಾಗದಲ್ಲಿ ಭಾರತಕ್ಕೆ ಇದು ಮೊದಲ ಚಿನ್ನದ ಪದಕ.
ಬೆನ್ನು ನೋವಿನ ಸಮಸ್ಯೆಯಿಂದ ಗುಣಮುಖರಾಗದ ಸ್ವಪ್ನಾ, ಹತ್ತಾರು ನೋವುಗಳ ನಡುವೆಯೇ ಗೆಲುವಿನ ನಗೆ ಬೀರಿದ್ದಾರೆ. ಚಿನ್ನದ ಹುಡುಗಿಯ ಸಾಧನೆ ಭಾರತದ ಕ್ರೀಡಾಪಟುಗಳು ಬಹುದೊಡ್ಡ ಸ್ಫೂರ್ತಿ.


Click it and Unblock the Notifications











