ಜುಲೈ 4 ಗುರುವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್ಗೆ ಟ್ರಿಪಲ್ ಜಂಪ್ನಲ್ಲಿ ಭಾರತದ ಸ್ಟಾರ್ ಅಥ್ಲೀಟ್ ಆರ್ಹತೆ ಪಡೆದುಕೊಂಡಿದ್ದಾರೆ. ಈಗಾಗಲೇ ಭಾರತದ ಪ್ರತಿಭೆಗಳಿಗೆ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಟಿಕೆಟ್ ಲಭಿಸಿದೆ.
ಹರ್ಯಾಣದ ತೌ ದೇವಿ ಲಾಲ್ ಸ್ಟೇಡಿಯಂನಲ್ಲಿ ನಡೆದ 63ನೇ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಅಥ್ಲೀಟ್ ಅಬ್ದುಲ್ಲಾ ಅಬೂಬಕರ್ ಅಮೋಘ ಪ್ರದರ್ಶನ ನೀಡಿದರು. ಈ ಮೂಲಕ ವಿಶ್ವ ಶ್ರೇಯಾಂಕದಲ್ಲಿ 21ನೇ ಸ್ಥಾನವನ್ನು ತಲುಪುವಲ್ಲಿ ಯಶಸ್ವಿಯಾಗಿ ಜುಲೈ 26 ರಂದು ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದರು.

ಅಬ್ದುಲ್ಲಾ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ತಮ್ಮ 6 ಪ್ರಯತ್ನಗಳಲ್ಲಿ 17 ಮೀಟರ್ಗಳಷ್ಟು ಜಿಗಿದಿದ್ದಾರೆ. ಆದರೇ ಪ್ಯಾರಿಸ್ ಒಲಿಂಪಿಕ್ಸ್ಗೆ ನಿಗದಿಪಡಿಸಿದ 17.22 ಮೀ ಅರ್ಹತಾ ಮಾರ್ಕ್ ಅನ್ನು ದಾಟಲು ವಿಫಲವಾದರು.
ಆದರೆ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಅಬ್ದುಲ್ಲಾ ವಿಶ್ವ ರ್ಯಾಂಕಿಂಗ್ನಲ್ಲಿ 21ನೇ ಸ್ಥಾನವನ್ನು ತಲುಪಲು ಯಶಸ್ವಿಯಾದರು. ಹರಿಯಾಣದಲ್ಲಿ ನಡೆದ 63ನೇ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಭಾರತೀಯ ಅಥ್ಲೀಟ್ಗಳಿಗೆ ಕೊನೆಯ ಅವಕಾಶವಾಗಿತ್ತು.
ಕೇರಳದ ಕೋಝಿಕ್ಕೋಡ್ ನಾದಪುರಂ ಮೂಲದ ಅಬ್ದುಲ್ಲಾ ಅಬೂಬಕರ್ ಟ್ರಿಪಲ್ ಜಂಪ್ನಲ್ಲಿ ಭಾರತವನ್ನು ಹಲವು ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸುತ್ತಿದ್ದಾರೆ. ಅಬ್ದುಲ್ಲಾ ಅವರು ತಮ್ಮ ಶಾಲಾ ದಿನಗಳಲ್ಲಿ ಸ್ಪ್ರಿಂಟ್, ಎತ್ತರ ಜಿಗಿತ, ಉದ್ದ ಜಿಗಿತ ಮತ್ತು ಹರ್ಡಲ್ಸ್ನಂತಹ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು.
ಅಬ್ದುಲ್ಲಾ 9ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಟ್ರಿಪಲ್ ಜಂಪ್ ತನ್ನ ಹಾದಿ ಎಂದು ಅರಿವಾಯಿತು. ಇದಾದ ನಂತರ ಅವರು ಪಾಲಕ್ಕಾಡ್ನ ಕಲ್ಲಾಡಿ ಕುಮಾರಂಪುತ್ತೂರ್ ಎಚ್ಎಸ್ಎಸ್ಗೆ ಪ್ರವೇಶ ಪಡೆದರು. ಒಂದು ವರ್ಷದ ನಂತರ ಅವರು ರಾಜ್ಯ ಮತ್ತು ರಾಷ್ಟ್ರೀಯ ಶಾಲಾ ಕ್ರೀಡಾ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದರು.

2015ರಲ್ಲಿ ಅಬ್ದುಲ್ಲಾ ಜೂನಿಯರ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆದರು. ಅಲ್ಲದೆ, ಬರ್ಮಿಂಗ್ಹ್ಯಾಮ್ನಲ್ಲಿ ನಡೆದ 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅಬ್ದುಲ್ಲಾ ಬೆಳ್ಳಿ ಪದಕ ಗೆದ್ದಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ 2022ರ ಫೈನಲ್ನಲ್ಲಿ ಮೊದಲ 4 ಜಿಗಿತಗಳನ್ನು ಪೂರ್ಣಗೊಳಿಸಿದ ನಂತರ, ಅಬ್ದುಲ್ಲಾ ಪದಕದ ಅವಕಾಶದಿಂದ ಹೊರಗುಳಿದರು. ಆದರೆ ಐದನೇ ಸುತ್ತಿನಲ್ಲಿ 17.02 ಮೀಟರ್ ಜಿಗಿದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಅಬ್ದುಲ್ಲಾ 17 ಮೀಟರ್ ಜಿಗಿತವನ್ನು ಮೂರು ಬಾರಿ ತೆರವುಗೊಳಿಸಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಬ್ದುಲ್ಲಾ ತಮ್ಮ 14 ವರ್ಷಗಳ ವೃತ್ತಿಜೀವನದುದ್ದಕ್ಕೂ ಗಾಯಗಳಿಂದ ಮುನ್ನೆಡೆದಿದ್ದಾರೆ. ಅಬ್ದುಲ್ಲಾ ಅವರು ಕಾಲು, ಮೊಣಕಾಲು ಮತ್ತು ಪಾದಕ್ಕೆ ನಿರಂತರವಾಗಿ ಗಾಯ ಮಾಡಿಕೊಂಡು ಮೈದಾನದಿಂದ ಹೊರಗಿದ್ದಾರೆ. ಅದೇನೇ ಇದ್ದರೂ, ಯುವ ಆಟಗಾರ ಭುವನೇಶ್ವರದಲ್ಲಿ ನಡೆದ ಇಂಡಿಯನ್ ಗ್ರ್ಯಾನ್ ಪ್ರಿಕ್ಸ್ ಅಥ್ಲೆಟಿಕ್ಸ್ನಲ್ಲಿ 17.19 ಮೀಟರ್ ಜಿಗಿತದೊಂದಿಗೆ ಹೋರಾಡಿ ಚಿನ್ನದ ಪದಕ ಗೆದ್ದಿದ್ದಾರೆ.
ಇದು ರಂಜಿತ್ ಮಹೇಶ್ವರಿ ನಂತರ ಟ್ರಿಪಲ್ ಜಂಪ್ನಲ್ಲಿ ಭಾರತೀಯ ಅಥ್ಲೀಟ್ನ ಅತ್ಯುತ್ತಮ ಪ್ರದರ್ಶನವಾಗಿದೆ. ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅಬ್ದುಲ್ಲಾ ಟ್ರಿಪಲ್ ಜಂಪ್ ನಲ್ಲೂ ಕನಸಿನ ಅಂತರ (17.14 ಮೀಟರ್ ) ದಾಟಿದರು. 2017ರಲ್ಲಿ ಭಾರತೀಯ ವಾಯುಸೇನೆಯಲ್ಲಿ ಕ್ರೀಡಾ ಕೋಟಾದಡಿ ಉದ್ಯೋಗ ಗಿಟ್ಟಿಸಿಕೊಂಡಿರುವ ಅಬ್ದುಲ್ಲಾ ಇದೀಗ ಪ್ಯಾರಿಸ್ಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.