
ಕೇರಳದ ಬಾಲುಸ್ಸೆರಿಯಲ್ಲಿರುವ ತಮ್ಮ ಅಕಾಡೆಮಿ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ನಲ್ಲಿ ಅತಿಕ್ರಮಣ ಮತ್ತು ಗೂಂಡಾಗಿರಿ ನಡೆಸಲಾಗುತ್ತಿದೆ ಎಂದು ಮಾಜಿ ಅಥ್ಲೀಟ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಶನಿವಾರ, ಫೆಬ್ರವರಿ 4ರಂದು ಆರೋಪಿಸಿದರು.
ಇದೇ ವೇಳೆ, ತಮ್ಮ ಅಕಾಡೆಮಿಗೆ ನೀಡುತ್ತಿರುವ ತೊಂದರೆಯನ್ನು ಕೊನೆಗೊಳಿಸಲು ಸಹಾಯ ಮಾಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಪಿಟಿ ಉಷಾ ಒತ್ತಾಯಿಸಿದ್ದಾರೆ.
ದೇಶದ ಸಾವಿರಾರು ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಲು ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ನಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಒಲಿಂಪಿಕ್ನಲ್ಲಿ ಭಾರತದ ಪರ ಪದಕ ವಿಜೇತರನ್ನು ಸಿದ್ಧಪಡಿಸಲು ಸಹಾಯ ಮಾಡುವ ಪ್ರಯತ್ನದಲ್ಲಿ 2002ರಲ್ಲಿ ಪಿಟಿ ಉಷಾ ಅಕಾಡೆಮಿ ಸ್ಥಾಪಿಸಿದ್ದರು.
ಶನಿವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಿಟಿ ಉಷಾ, ಕಳೆದ ವರ್ಷ ತಾನು ರಾಜ್ಯಸಭಾ ಸದಸ್ಯೆಯಾಗಿ ನಾಮನಿರ್ದೇಶನಗೊಂಡ ನಂತರ, ಕೇರಳದಲ್ಲಿ ಅತಿಕ್ರಮಣ ಮತ್ತು ಗೂಂಡಾಗಿರಿ ಕೃತ್ಯಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.

ತಮ್ಮ ಅಕಾಡೆಮಿಯಲ್ಲಿನ ಮಹಿಳಾ ಕ್ರೀಡಾಪಟುಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪಿಟಿ ಉಷಾ, ಈ ಹಿಂದೆ ಅಕಾಡೆಮಿಯ ಸುತ್ತ ಬೇಲಿ ನಿರ್ಮಿಸಲು ಪ್ರಯತ್ನಿಸಿದ್ದೆವು. ಆದರೆ ಹಣಕಾಸಿನ ತೊಂದರೆಯಿಂದ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು.
"ಕೆಲವರು ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ನ ಕಾಂಪೌಂಡ್ಗೆ ನುಗ್ಗಿ ಅಕ್ರಮ ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು. ಅಕಾಡೆಮಿ ಆಡಳಿತ ಮಂಡಳಿ ಅವರನ್ನು ಪ್ರಶ್ನಿಸಿದಾಗ, ಅನುಚಿತವಾಗಿ ವರ್ತಿಸಿದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ ನಂತರ, ಅತಿಕ್ರಮಣದಾರರನ್ನು ಅಕಾಡೆಮಿಯಿಂದ ತೆರವುಗೊಳಿಸಲಾಗಿದೆ," ಎಂದು ಪಿಟಿ ಉಷಾ ತಿಳಿಸಿದರು.
ಮಾದಕ ವ್ಯಸನಿಗಳು ಅಕಾಡೆಮಿಗೆ ಮತ್ತು ಬಾಲುಸ್ಸೆರಿಯ 30 ಎಕರೆ ಸಂಕೀರ್ಣದಲ್ಲಿ ತ್ಯಾಜ್ಯವನ್ನು ಸುರಿಯುತ್ತಾರೆ ಎಂದು ಉಷಾ ಹೇಳಿದ್ದಾರೆ.
"ಮಾದಕ ವ್ಯಸನಿಗಳು ಸೇರಿದಂತೆ ಅನೈತಿಕ ಚಟುವಟಿಕೆ ನಡೆಸಲು ಕೆಲವರು ರಾತ್ರಿ ವೇಳೆ ಕಾಂಪೌಂಡ್ ಒಳಗೆ ನುಗ್ಗುತ್ತಾರೆ. ಅಷ್ಟೇ ಅಲ್ಲದೆ, ಅಲ್ಲಿ ತ್ಯಾಜ್ಯವನ್ನು ಸುರಿಯುತ್ತಾರೆ. ನಮ್ಮ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ನಮ್ಮ ಹೆಣ್ಣುಮಕ್ಕಳ ಸುರಕ್ಷತೆಯನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ನಾವು ವಿನಂತಿಸುತ್ತೇವೆ," ಎಂದು ಪಿಟಿ ಉಷಾ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ಕೇರಳ ಮೂಲದ ಪಿಟಿ ಉಷಾ ಅವರು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಯಾಗಿರುವ ಉಷಾ, 1984ರ ಕ್ರೀಡಾಕೂಟದಲ್ಲಿ ವಿಸ್ಕರ್ ಮೂಲಕ ಒಲಿಂಪಿಕ್ ಪದಕವನ್ನು ಕಳೆದುಕೊಂಡರು.