ಚೋಪ್ರಾ ಜಾವೆಲಿನ್ ಅನ್ನು ಪಾಕ್ ಅಥ್ಲೀಟ್ ಅರ್ಷದ್ ಹಾಳು ಮಾಡಿದರಾ?
ಟೋಕಿಯೋ ಒಲಿಂಪಿಕ್ಸ್ ಫೈನಲ್ ದಿನ ಮೊದಲ ಎಸೆತ ಎಸೆಯೋಕೂ ಮುನ್ನ ನೀರಜ್ ಚೋಪ್ರಾರ ಜಾವೆಲಿನ್ ಕ್ಷಣ ಕಾಲ ಕಾಣೆಯಾಗಿತ್ತು. ತನ್ನ ಸ್ಪರ್ಧೆಯ ಸರದಿ ಹತ್ತಿರವಾಗುತ್ತಿದ್ದಂತೆ ಜಾವೆಲಿನ್ ಇಲ್ಲದ್ದು ಕಂಡು ನೀರಜ್ ಕೊಂಚ ಗಾಬರಿಯಲ್ಲಿದ್ದರಂತೆ. ಆ ಬಳಿಕ ಜಾವೆಲಿನ್ಗಾಗಿ ಹುಡುಕಾಡಿದಾಗ ಚೋಪ್ರಾರ ಜಾವೆಲಿನ್ ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ ಕೈಯಲ್ಲಿತ್ತು. ಆ ಬಳಿಕ ಚೋಪ್ರಾ, ಅರ್ಷದ್ ಅವರಲ್ಲಿ, ಅಣ್ಣ, ಇದು ನನ್ನ ಜಾವೆಲಿನ್ ಇದನ್ನು ನಾನೀಗ ಎಸೆಯಬೇಕು ಎಂದರಂತೆ. ಚೋಪ್ರಾ ಮಾತು ಕೇಳಿದ ಅರ್ಷದ್ ಆ ಜಾವೆಲಿನ್ ಅನ್ನು ಚೋಪ್ರಾಗೆ ಕೊಟ್ಟರು. ಕೂಡಲೇ ಚೋಪ್ರಾ ಅವಸರ ಅವಸರವಾಗಿ ತನ್ನ ಮೊದಲ ಥ್ರೋ ಮಾಡಿದ್ದರು. ಇದನ್ನು ಸ್ವತಃ ಚೋಪ್ರಾ ಅವರೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಾಧ್ಯಮಗಳು ಒಬ್ಬರ ಹೇಳಿಕೆಯನ್ನು ಬೇರೊಂದು ರೀತಿಯಲ್ಲಿ ಬರೆದು ವಿವಾದ ಸೃಷ್ಠಿಸಲು ಯತ್ನಿಸುತ್ತಿವೆ. ಇದಾಗಬಾರದು. ತನ್ನನ್ನು, ತನ್ನ ಹೇಳಿಕೆಯನ್ನು ವಿವಾದಕ್ಕೆ ಎಳೆಯಬೇಡಿ ಎಂದು ನೀರಜ್ ವಿಡಿಯೋ ಒಂದರಲ್ಲಿ ಕೋರಿಕೊಂಡಿದ್ದಾರೆ.
ಕೆಟ್ಟ ವಿಚಾರಕ್ಕಾಗಿ ನನ್ನನ್ನು ದಯವಿಟ್ಟು ಬಳಸಿಕೊಳ್ಳಬೇಡಿ
ಗುರುವಾರ (ಆಗಸ್ಟ್ 26) ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಾಕಿಕೊಂಡಿದ್ದ ನೀರಜ್, "ಮಾಧ್ಯಮಗಳು ನಿಮ್ಮ ಪಟ್ಟಭದ್ರ ಹಿತಾಸಕ್ತಿಗಾಗಿ ಮತ್ತು ಪ್ರಚಾರಕ್ಕಾಗಿ ದಯವಿಟ್ಟು ನನ್ನನ್ನು ನನ್ನ ಹೇಳಿಕೆಯನ್ನು ಬಳಸಿಕೊಳ್ಳಬೇಡಿ. ಯಾವತ್ತಿಗೂ ಜೊತೆಯಾಗಿರುವುದನ್ನು ಮತ್ತು ಸೌಹಾರ್ದ ಭಾವದಲ್ಲಿರುವುದನ್ನು ನಮಗೆ ಕ್ರೀಡೆ ಕಲಿಸುತ್ತದೆ. ನನ್ನ ಹೇಳಿಕೆಗೆ ಸಂಬಂಧಿಸಿ ಸಾವರ್ಜನಿಕವಾಗಿ ಅಭಿಪ್ರಾಯಗಳು ಬರುತ್ತಿರುವುದು ನೋಡಿ ನನಗೆ ನಿಜಕ್ಕೂ ಬೇಸರವಾಗಿದೆ," ಎಂದು ನೀರಜ್ ಹೇಳಿದ್ದಾರೆ. ಈ ಘಟನೆಯಲ್ಲಿ ಪಾಕಿಸ್ತಾನ ಅಥ್ಲೀಟ್ನ ತಪ್ಪೇನೂ ಇಲ್ಲ. ಎಲ್ಲವೂ ನಿಯಮ ಪ್ರಕಾರವೇ ನಡೆದಿದೆ. ಕ್ರೀಡೆಯಲ್ಲಿ ಇಂಥದ್ದು ಸಹಜ. ಆತನ ಕೈಗೆ ನನ್ನ ಜಾವೆಲಿನ್ ಅಚಾನಕ್ ಹೋಗಿತ್ತು. ಆ ಘಟನೆಯನ್ನು ನಾನು ಹೇಳಿಕೊಂಡಿದ್ದೆನಷ್ಟೆ. ಅಷ್ಟು ಮಾತ್ರಕೆ ಈ ವಿಚಾರವನ್ನು ದೊಡ್ಡದು ಮಾಡೋದು ಬೇಕಾಗಿಲ್ಲ. ನಾನು ಆ ಅಥ್ಲೀಟ್ನ ಬಗ್ಗೆ ದೂರಿಲ್ಲ. ಅಸಲಿಗೆ ಆತನ ತಪ್ಪು ಏನೂ ಇರಲಿಲ್ಲ. ನಡೆದ ಘಟನೆ ಹೇಳಿದ್ದೆನಷ್ಟೆ. ಆ ಘಟನೆಗೆ ಬೇರೆಯೇ ಬಣ್ಣ ಬಳಿದು ನನ್ನ ಬಗ್ಗೆ ಕೆಟ್ಟ ಭಾವನೆ ಮೂಡುವ ಹಾಗೆ ಮಾಡಬೇಡಿ. ಅಥ್ಲೀಟ್ಗಳು ಎಲ್ಲಾ ಕ್ಷಣದಲ್ಲೂ ಜೊತೆಯಾಗಿ, ಎಲ್ಲರೊಂದಿಗೂ ಸೌಹಾರ್ದಯುತವಾಗಿ ಬದುಕೋದನ್ನು ಕಲಿಯುತ್ತಾರೆ. ಕ್ರೀಡೆ ನಮಗೆ ಇದನ್ನೇ ಕಲಿಸುತ್ತದೆಯೇ ಹೊರತು, ನಿಜವಾದ ಕ್ರೀಡಾಪಟುವಿನಲ್ಲಿ ಕೋಮುವಾದಿತ್ವ ಇರೋದಿಲ್ಲ ಎಂಬರ್ಥದಲ್ಲಿ ನೀರಜ್ ವಿಡಿಯೋದಲ್ಲಿ ಮಾತನಾಡಿದ್ದಾರೆ(ಚಿತ್ರದಲ್ಲಿ ಕ್ರೀಡಾಕೂಟವೊಂದರ ವಿಜಯ ವೇದಿಕೆಯಲ್ಲಿ ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಮ್).
|
ಈ ಮೊದಲು ಏನು ಹೇಳಿದ್ದರು ನೀರಜ್ ಚೋಪ್ರಾ?
ಇದಕ್ಕೂ ಮುನ್ನ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದ ನೀರಜ್, ಒಲಿಂಪಿಕ್ಸ್ ಫೈನಲ್ ವೇಳೆ ನಡೆದ ಘಟನೆಯನ್ನು ಹೇಳಿಕೊಂಡಿದ್ದರು. ಅದೂ ಕೂಡ ಆರಂಭಿಕ ಎಸೆತದ ವೇಳೆ ಯಾಕೆ ತಾನು ಅಷ್ಟು ತರಾತುರಿಯಲ್ಲಿದ್ದೆ ಎನ್ನುವುದಕ್ಕೆ ಕಾರಣ ವಿವರಿಸಿ ಚೋಪ್ರಾ ಮಾತನಾಡಿದ್ದರು. "ಒಲಿಂಪಿಕ್ಸ್ನಲ್ಲಿ ಫೈನಲ್ ಸ್ಪರ್ಧೆಯ ವೇಳೆ ನಾನು ನನ್ನ ಜಾವೆಲಿನ್ ಅನ್ನು ಹುಡುಕಾಡುತ್ತಿದ್ದೆ. ನನಗೆ ಅದು ಸಿಕ್ಕಿರಲಿಲ್ಲ. ತಕ್ಷಣ ಅರ್ಷದ್ ನದೀಮ್ ನನ್ನ ಜಾವೆಲಿನ್ ಹಿಡಿದುಕೊಂಡು ಓಡಾಡುತ್ತಿರುವುದು ಕಾಣಿಸಿತು. ಬಳಿಕ ನಾನು ಆತನಿಗೆ, 'ಅಣ್ಣ ಈ ಜಾವೆಲಿನ್ ನನಗೆ ಕೊಡಿ. ಇದು ನನ್ನ ಜಾವೆಲಿನ್. ಇದರ ಮೂಲಕ ನಾನೀಗ ಥ್ರೋ ಮಾಡಬೇಕಿದೆ,' ಎಂದೆ. ಕೂಡಲೇ ಆತ ಆ ಜಾವೆಲಿನ್ ಅನ್ನು ನನಗೆ ವಾಪಸ್ ಮಾಡಿದ. ಇದೇ ಕಾರಣಕ್ಕೆ ನಾನು ಅವಸರ ಅವಸರವಾಗಿ ಮೊದಲ ಎಸೆತ ಮಾಡಿದ್ದನ್ನು ನೀವು ನೋಡಿರುತ್ತೀರಿ," ಎಂದು ಚೋಪ್ರಾ ಟೈಮ್ಸ್ ಆಫ್ ಇಂಡಿಯಾ ಜೊತೆ ಹೇಳಿಕೊಂಡಿದ್ದರು. ಚೋಪ್ರಾ ಈ ಹೇಳಿಕೆಯನ್ನು ತಿರುಚಲಾಗಿತ್ತು. ತನ್ನ ಜಾವೆಲಿನ್ ಅನ್ನು ಹಾಳು ಮಾಡುವ ಉದ್ದೇಶದಿಂದ ಪಾಕ್ ಆಟಗಾರ ಅದನ್ನು ಹಿಡಿದುಕೊಂಡು ಓಡಾಡುತ್ತಿದ್ದ ಎಂದು ಚೋಪ್ರಾ ಹೇಳಿರುವಂತೆ ಬಿಂಬಿಸಲಾಗಿತ್ತು. ಅಸಲಿಗೆ, 'ಆರಂಭಿಕ ಎಸೆತ ನೀವು ತರಾತುರಿಯಲ್ಲಿ ಎಸೆದಂತೆ ಕಂಡಿತ್ತು ಯಾಕೆ?' ಎಂಬ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿ ಚೋಪ್ರಾ ಈ ಘಟನೆ ಹೇಳಿಕೊಂಡಿದ್ದರು. ಆದರೆ ಅನ್ನು ಕೋಮುವಾದದ ರೀತಿಯಲ್ಲಿ ಬಿಂಬಿಸಲಾಗಿತ್ತು. ಹೀಗಾಗಿಯೇ ಚೋಪ್ರಾ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಪಾಕ್ ಅಥ್ಲೀಟ್ನ ತಪ್ಪು ಇದರಲ್ಲೇನೂ ಇಲ್ಲ. ಇದನ್ನು ಬೇರೆಯೇ ರೀತಿ ಕೊಂಡೊಯ್ಯಬೇಡಿ ಎಂದು ಸಾರ್ವಜನಿಕರಲ್ಲಿ ಚೋಪ್ರಾ ಕೋರಿಕೊಂಡಿದ್ದಾರೆ.
ಚೋಪ್ರಾ ಜಾವೆಲಿನ್ ಅರ್ಷದ್ ಕೈಗೆ ಹೋಗಿದ್ಹೇಗೆ?
ಪ್ರಮುಖ ಕ್ರೀಡಾಕೂಟಗಳ ವೇಳೆ ಸಹಜವಾಗೇ ಅಥ್ಲೀಟ್ಗಳಿಗೆ ಸ್ವಲ್ಪ ಮಟ್ಟಿಗೆ ಗಲಿಬಿಲಿಯಿರತ್ತೆ. ಸ್ಪರ್ಧೆ ಶುರುವಾಗೋಕೂ ಮುನ್ನ ಸ್ಪರ್ಧಿಗಳು ಅದಕ್ಕೆ ಸಿದ್ಧತೆ ನಡೆಸುತ್ತಿರುತ್ತಾರೆ, ವಾರ್ಮ್ ಅಪ್ ಮಾಡಿಕೊಳ್ಳುತ್ತಾರೆ. ಹೀಗೆ ಚೋಪ್ರಾ ಕೂಡ ವಾರ್ಮ್ ಅಪ್ ವೇಳೆ ಅಥವಾ ಫೈನಲ್ ಸ್ಪರ್ಧೆಗೂ ಮುನ್ನ ಪ್ರ್ಯಾಕ್ಟೀಸ್ ಮಾಡ್ತಾ ಜಾವೆಲಿನ್ ಅನ್ನು ಎಲ್ಲೋ ಮರೆತು ಬಿಟ್ಟಿರಬಹುದು. ಅಥವಾ ಚೋಪ್ರಾ ತನ್ನ ಜಾವೆಲಿನ್ ಒಂದೆಡೆ ಇಟ್ಟು ವಾರ್ಮ್ ಅಪ್ ಮಾಡುತ್ತಿದ್ದಾಗ ಪಾಕ್ ಆಟಗಾರ ಅರ್ಷದ್ ಕುತೂಹಲಕ್ಕಾಗಿ ಅದನ್ನೆತ್ತಿಕೊಂಡು, ಯಾರದಿದು ಎಂದು ಹುಡುಕಾಡಿರಬಹುದು. ಕ್ರೀಡಾಪರಿಕರಗಳು ಆಕರ್ಷಕವಾಗಿದ್ದಾಗ ಅದರ ಬಗ್ಗೆ, ಅದರ ಬೆಲೆಯ ಬಗ್ಗೆ ವಿಚಾರಿಸುವ ಕಾರಣಕ್ಕೂ ಬೇರೆ ಅಥ್ಲೀಟ್ಗಳ ಪರಿಕರಗಳನ್ನು ಅಥ್ಲೀಟ್ಗಳು ಕೈಗೆತ್ತಿಕೊಳ್ಳೋದೂ ಇದೆ. ದೊಡ್ಡ ಮಟ್ಟದ ಕ್ರೀಡಾಕೂಟಗಳ ವೇಳೆ ಇಂಥದ್ದು ಕೆಲವೊಮ್ಮೆ ನಡೆಯುತ್ತೆ. ಕ್ರೀಡಾ ಪರಿಕರಗಳು ಪ್ರತ್ಯೇಕವಾಗಿದ್ದಾಗ ಬೇರೆ ಅಥ್ಲೀಟ್ಗಳು ಸಹಜವಾಗೇ ಅದರತ್ತ ಹೋಗಿ ಅದನ್ನೆತ್ತಿ ಅದರ ವಾರೀಸುದಾರರಿಗಾಗಿ ಎದುರು ನೋಡೋದೂ ಇದೆ. ಇಂಥದ್ದೇ ಏನಾದರೂ ವಿಚಾರಕ್ಕೆ ನೀರಜ್ ಅವರ ಜಾವೆಲಿನ್ ಪಾಕ್ ಆಟಗಾರನ ಕೈಗೆ ಹೋಗಿರಬಹುದು. ಇದನ್ನು ಸ್ವತಃ ಚೋಪ್ರಾ ಗಂಭೀರವಾಗಿ ತೆಗೆದುಕೊಂಡಿಲ್ಲ. ಯಾಕೆಂದರೆ ಕ್ರೀಡಾಕೂಟಗಳ ವೇಳೆ ಸಹಜವಾಗೇ ಇದು ಆಗುತ್ತದೆ ಅನ್ನೋದು ನೀರಜ್ಗೆ ಗೊತ್ತಿರತ್ತೆ. ಎಲ್ಲದಕ್ಕಿಂತ ಮಿಗಿಲಾಗಿ ನೀರಜ್ ಕ್ರೀಡೆಯ ಶಾಂತಿ, ಸೌಹಾರ್ದತೆ, ಸಹಕಾರದ ಪಾಠಗಳನ್ನು ಅರ್ಥ ಮಾಡಿಕೊಂಡ ಅಥ್ಲೀಟ್. ಇದೇ ಕಾರಣಕ್ಕೆ ನೀರಜ್ ಒಲಿಂಪಿಕ್ಸ್ನಲ್ಲಿ ಚಿನ್ನದ ಹುಡುಗನಾಗಿ ಮಿಂಚಿದ್ದರು ಅನ್ನೋದನ್ನು ನಾವಿಲ್ಲಿ ಗಮನಿಸಬೇಕು. ಅಂದ್ಹಾಗೆ, ಅರ್ಷದ್ ಮತ್ತು ನೀರಜ್ ಅನೇಕ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ಜೊತೆಯಾಗಿ ವಿಜಯವೇದಿಕೆ ಏರಿದ್ದರು ಅನ್ನೋದನ್ನೂ ನಾವಿಲ್ಲಿ ನೆನಪಿಸಿಕೊಳ್ಳಬೇಕು (ಚಿತ್ರದಲ್ಲಿ ಕ್ರೀಡಾಕೂಟದ ವೇಳೆ ಜೊತೆಯಲ್ಲಿ ಕೂತು ಆತ್ಮೀಯವಾಗಿ ಹರಟುತ್ತಿರುವ ಭಾರತದ ಮತ್ತೊಬ್ಬ ಥ್ರೋವರ್ ಶಿವಪಾಲ್ ಸಿಂಗ್ ಮತ್ತು ಅರ್ಷದ್ ನದೀಮ್).