ಬೆಂಗಳೂರು ಓಪನ್ 2023: ಭಾರತದ ಶಶಿಕುಮಾರ್, ಪ್ರಜ್ಞೇಶ್ಗೆ ಜಯ

ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಿದೆ. ಭಾರತದ ಟೆನಿಸ್ ಆಟಗಾರರಾದ ಮುಕುಂದ್ ಶಶಿಕುಮಾರ್ ಮತ್ತು ಪ್ರಜ್ನೇಶ್ ಗುಣೇಶ್ವರನ್ ಭಾನುವಾರ ಮೊದಲ ಅರ್ಹತಾ ಸುತ್ತಿನಲ್ಲಿ ಗೆಲ್ಲುವ ಮೂಲಕ ಡಫಾನ್ಯೂಸ್ ಬೆಂಗಳೂರು ಓಪನ್ 2023ರ ಅಂತಿಮ ಅರ್ಹತಾ ಸುತ್ತಿಗೆ ಮುನ್ನಡೆದಿದ್ದಾರೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (ಕೆಎಸ್ಎಲ್ಟಿಎ) ಬೆಂಗಳೂರಿನ ಕೆಎಸ್ಎಲ್ಟಿಎ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ಎಟಿಪಿ ಚಾಲೆಂಜರ್ ಟೂರ್ನಿಯನ್ನು ಆಯೋಜಿಸಿದೆ.
ವಿಶ್ವ ಶ್ರೇಯಾಂಕಪಟ್ಟಿಯಲ್ಲಿ 402ನೇ ಸ್ಥಾನದಲ್ಲಿರುವ 26ರ ಹರೆಯದ ಶಶಿಕುಮಾರ್ ಮೊದಲ ಅರ್ಹತಾ ಸುತ್ತಿನ ಪಂದ್ಯದಲ್ಲಿ ವಿಶ್ವದ 170ನೇ ಶ್ರೇಯಾಂಕಿತ ಆಟಗಾರ ಆಂಡ್ರ್ಯೂ ಪೌಲ್ಸನ್ ವಿರುದ್ಧ 6-1, 6-4 ಅಂತರದಲ್ಲಿ ಜಯ ಸಾಧಿಸಿದರು. ಮತ್ತೊಂದೆಡೆ ಭಾರತದ ನಂ.1 ಆಟಗಾರ ಗುಣೇಶ್ವರನ್ ಮೊದಲ ಸೆಟ್ನಲ್ಲಿ ಜಿಂಬಾಬ್ವೆಯ ಬೆಂಜಮಿನ್ ಲಾಕ್ ಅವರಿಂದ ಕಠಿಣ ಸವಾಲನ್ನು ಎದುರಿಸಿದ್ದು 7-5, 6-4 ಸೆಟ್ ಗಳಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಈ ಮಧ್ಯೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆದ ರೋಮಾಂಚಕ ಮೂರು ಸೆಟ್ಗಳ ಹೋರಾಟದಲ್ಲಿ ಜಪಾನ್ನ ಮಾಜಿ ವಿಶ್ವ ನಂ.78 ಯಸುಟಾಕಾ ಉಚಿಯಾಮಾ ವಿರುದ್ಧ 6-3, 5-7, 3-6 ಸೆಟ್ ಗಳಿಂದ ಸೋಲನುಭವಿಸಿದ ರಾಮ್ಕುಮಾರ್ ರಾಮನಾಥನ್ ನಿರಾಸೆಗೆ ಒಳಗಾದರು.
ಇತರ ನಾಲ್ವರು ಭಾರತೀಯರಾದ ಸಿದ್ದಾರ್ಥ್ ರಾವತ್, ಕ್ರಿಶ್ ತ್ಯಾಗಿ, ದಿಗ್ವಿಜಯ್ ಪ್ರತಾಪ್ ಸಿಂಗ್ ಮತ್ತು ಮನೀಶ್ ಗಣೇಶ್ ಕೂಡ ತಮ್ಮ ತಮ್ಮ ಪಂದ್ಯಗಳಲ್ಲಿ ಸೋಲು ಅನುಭವಿಸಿದರು.
ಟೂರ್ನಿಯ ಮುಖ್ಯ ಕಾರ್ಯಕ್ರಮವು ಸೋಮವಾರ ಪ್ರಾರಂಭವಾಗಲಿದ್ದು ಕರ್ನಾಟಕ ಸರ್ಕಾರದ ಕಂದಾಯ ಸಚಿವ ಮತ್ತು ಕೆಎಸ್ಎಲ್ಟಿಎ ಅಧ್ಯಕ್ಷ ಆರ್. ಅಶೋಕ್ ಟೂರ್ನಿಗೆ ಚಾಲನೆ ನೀಡಲಿದ್ದಾರೆ. ಎಟಿಪಿ ಚಾಲೆಂಜರ್ ಟೂರ್ ನಿರ್ದೇಶಕ ಶ್ರೀ ಎರಿಕ್ ಲ್ಯಾಮ್ಕ್ವೆಟ್ ಮತ್ತು ಕರ್ನಾಟಕ ಸರ್ಕಾರದ ವಿಧಾನಸಭಾ ಸದಸ್ಯ ಮತ್ತು ಕೆಎಸ್ಎಲ್ಟಿಎಯ ಹಿರಿಯ ಉಪಾಧ್ಯಕ್ಷ ಪ್ರಿಯಾಂಕ್ ಖರ್ಗೆ ಉಪಸ್ಥಿತರಿರಲಿದ್ದಾರೆ
ಅಗ್ರ ಶ್ರೇಯಾಂಕಿತ ತ್ಸೆಂಗ್ ಚುನ್-ಹ್ಸಿನ್, ಆಸ್ಪ್ರೇಲಿಯಾದ ಮಾರ್ಕ್ ಪೊಲ್ಮನ್ಸ್ ಮತ್ತು 5 ನೇ ಶ್ರೇಯಾಂಕದ ಲುಕಾ ನಾಡಿರ್ ಅವರು ಸಿಂಗಲ್ಸ್ ಮುಖ್ಯ ಡ್ರಾದಲ್ಲಿ ತಮ್ಮ ಸವಾಲನ್ನು ಪ್ರಾರಂಭಿಸಲಿದ್ದು, ಶಶಿಕುಮಾರ್ ಮತ್ತು ಗುಣೇಶ್ವರನ್ ಅಂತಿಮ ಅರ್ಹತಾ ಸುತ್ತಿನಲ್ಲಿ ಸೆಣಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications