ಕನ್ನಡಿಗ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಗಾಯದಿಂದ ಚೇತರಿಸಿಕೊಂಡು ಟೀಮ್ ಇಂಡಿಯಾಗೆ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ಕಮ್ಬ್ಯಾಕ್ ಮಳಿಕ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿರುವ ಯುವ ವೇಗದ ಬೌಲರ್ ಇದೀಗ ಏಷ್ಯಾಕಪ್ ಸರಣಿಗೂ ಆಯ್ಕೆಯಾಗುವ ಮೂಲಕ ದೊಡ್ಡ ವೇದಿಕೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕದ ಈ ವೇಗದ ಬೌಲರ್ ಬಗ್ಗೆ ಕಾಮೆಂಟೇಟರ್ ಆಕಾಶ್ ಚೋಪ್ರ ವಿಶೇಷ ಮಾತುಗಳನ್ನಾಡಿದ್ದು ಈತ ನನ್ನ ನೆಚ್ಚಿನ ವೇಗದ ಬೌಲರ್ ಎಂದು ಕೊಂಡಾಡಿದ್ದಾರೆ.
ಕನ್ನಡಿಗ ವೇಗಿ ಪ್ರಸಿದ್ಧ್ ಅವರನ್ನು ಮೊದಲ ಬಾರಿಗೆ ನೋಡಿದಾಗಲೇ ಈತ ಖಂಡಿತಾ ಪ್ರಸಿದ್ಧ ಆಟಗಾರನಾಗುತ್ತಾನೆ ಎನ್ನುವ ಬರವಸೆ ತನ್ನಲ್ಲಿ ಮೂಡಿತ್ತು ಎಂದು ಆಕಾಶ್ ಚೋಪ್ರ ಹೇಳಿದ್ದು ಆತ ತನ್ನ ನೆಚ್ಚಿನ ವೇಗದ ಬೌಲರ್ ಎಂದು ಕೊಂಡಾಡಿದ್ದಾರೆ. ಅಲ್ಲದೆ ಬ್ಯಾಟರ್ಗಳಿಗೆ ಪ್ರಸಿದ್ಧ್ ಕೃಷ್ಣ ಅವರನ್ನು ಎದುರಿಸಲು ಕಠಿಣವೆನಿಸುವ ಸಂಗತಿ ಯಾವುದು ಎನ್ನುವುದನ್ನು ಕೂಡ ಆಕಾಶ್ ಚೋಪ್ರ ಹೇಳಿದ್ದಾರೆ.

"ನನಗೆ ಈ ಕೃಷ್ಣ ಪ್ರಸಿದ್ಧನಾಗುತ್ತಾನೆ ಎನ್ನುವದರಲ್ಲಿ ಅನುಮಾನವೇ ಇಲ್ಲ. ಈತ ನನ್ನ ನೆಚ್ಚಿನ ಬೌಲರ್ಗಳಲ್ಲಿ ಒರ್ವ. ಆತನನ್ನು ಮೊದಲ ಬಾರಿಗೆ ನೋಡಿದಾಗಲೇ ಈತನಲ್ಲಿ ವೇಗದ ಬೌಲರ್ಗಳಿಗೆ ಬೇಕಿರುವ ಎಲ್ಲಾ ಅಂಶಗಳು ಕೂಡ ಇದೆ ಎಂದು ಹೇಳಿದ್ದೆ" ಎಂದಿದ್ದಾರೆ ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರ.
ಆತ ಎತ್ತರದ ಬೌಲಿಂಗ್ ಆಕ್ಷನ್ ಹೊಂದಿದ್ದು ಉತ್ತಮವಾದ ಬೌನ್ಸ್ ಇದೆ. ಆತನ ವೇಗ ಕೂಡ ಗಂಟೆಗೆ 140 ಕಿ.ಮೀ ಆಸುಪಾಸಿನಲ್ಲಿದೆ. ಆತ ಬೇಗನೆ ಕಮ್ಬ್ಯಾಕ್ ಮಾಡುವ ಸಾಮರ್ಥ್ಯ ಕೂಡ ಹೊಂದಿದ್ದಾರೆ. ಐರ್ಲೆಂಡ್ ವಿರುದ್ಧ ಎರಡನೇ ಪಂದ್ಯದಲ್ಲಿ ಪಡೆದ ಎರಡು ವಿಕೆಟ್ಗಳು ಕೂಡ ಶಾರ್ಟ್ ಬಾಲ್ನಲ್ಲಿ ಪಡೆದ ವಿಕೆಟ್ಗಳು" ಎಂದು ಆಕಾಶ್ ಚೋಪ್ರ ವಿವರಿಸಿದ್ದಾರೆ.
ಪ್ರಸಿದ್ಧ್ ಕೃಷ್ಣ ಕೂಡ ಗಾಯದಿಂದಾಗಿ ಸುದೀರ್ಘ ಕಾಲದಿಂದ ಮೈದಾನದಿಂದ ಹೊರಗುಳಿದಿದ್ದರು. ಆದರೆ ಇದೀಗ ಅವರು ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ಚುಟುಕು ಮಾದರಿಯಲ್ಲಿ ಕೃಷ್ಣಗೆ ಪದಾರ್ಪಣಾ ಪಂದ್ಯವಾಗಿದ್ದು ಆ ಪಂದ್ಯದಲ್ಲಿ ಎರಡು ವಿಕೆಟ್ಗಳನ್ನು ಪಡೆದಿದ್ದರು. ಇನ್ನು ಎರಡನೇ ಪಂದ್ಯದಲ್ಲಿಯೂ ಎರಡು ವಿಕೆಟ್ಗಳನ್ನು ಪಡೆಯುವ ಮೂಲಕ ತನ್ನ ಕಮ್ಬ್ಯಾಕ್ಅನ್ನು ಭರ್ಜರಿಯಾಗಿ ಸಾರಿದ್ದಾರೆ.
ಇನ್ನು ಸೋಮವಾರ ಪ್ರಕಟಿಸಿದ ಏಷ್ಯಾ ಕಪ್ ತಂಡದಲ್ಲಿಯೂ ಪ್ರಸಿದ್ಧ ಕೃಷ್ಣ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಏಷ್ಯಾಕಪ್ಗೆ ಪ್ರಕಟಿಸಿರುವ ತಂಡದಲ್ಲಿ ಹೆಸರಿಸಿರುವ ಐದು ಮಂದಿ ವೇಗದ ಬೌಲರ್ಗಳ ಪೈಕಿ ಪ್ರಸಿದ್ಧ ಕೃಷ್ಣ ಕೂಡ ಒಬ್ಬರಾಗಿದ್ದು ಈ ಮೂಲಕ ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಗಳಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ಏಷ್ಯಾಕಪ್ಗೆ ಆಯ್ಕೆ ಮಾಡಿರುವ ತಂಡದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಇಬ್ಬರು ಆಟಗಾರರ ಪೈಕಿ ಕೈಷ್ಣ ಕೂಡ ಒಬ್ಬರು.
ಟೀಮ್ ಇಂಡಿಯಾ ಸ್ಕ್ವಾಡ್: ರೋಹಿತ್ ಶರ್ಮಾ, ಶುಬ್ಮನ್ ಗಿಲ್ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.