
2023ರ ಏಕದಿನ ಏಷ್ಯಾಕಪ್ ಟೂರ್ನಿ ಆತಿಥ್ಯದ ವಿವಾದ, ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಅಂತ್ಯ ಕಾಣುವ ಲಕ್ಷಣ ಕಾಣುತ್ತಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಸಿಸಿಸಿ) ಸಭೆಯ ಹೊರತಾಗಿಯೂ, ಪಂದ್ಯಾವಳಿಯ ನಡೆಯುವ ಸ್ಥಳದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡದ ಆಟಗಾರರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿ ನಿಡುವುದಿಲ್ಲ ಎಂಬ ನಿರ್ಧಾರಕ್ಕೆ ಬದ್ಧವಾಗಿದ್ದರೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಮ್ಮದೇ ದೇಶದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಪಟ್ಟು ಹಿಡಿದು ಕುಳಿತಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯ ಮಧ್ಯದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಭಾರತದ ಮೇಲೆ ಕಟುವಾದ ಟೀಕೆಗಳನ್ನು ಮಾಡಿದ್ದಾರೆ. ಭಾರತ ತಂಡವನ್ನು ಹೊರಹಾಕಲು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಒತ್ತಾಯಿಸಿದ್ದಾರೆ.
Asia Cup 2023: ಪಾಕ್ನಲ್ಲಿ ಭಾರತ ಏಷ್ಯಾಕಪ್ ಆಡದಿದ್ದರೆ, ವಿಶ್ವಕಪ್ ಆಡಲ್ಲ; ಎಚ್ಚರಿಕೆ ನೀಡಿದ ಪಿಸಿಬಿ
"ನಾನು ಯಾವಾಗಲೂ ಹೇಳುತಲಿದ್ದೇನೆ, ಏಷ್ಯಾಕಪ್ ಆಡಲು ಭಾರತ ತಂಡ ಬರದಿದ್ದರೆ, ನಾವು ಹೆದರುವುದಿಲ್ಲ. ನಾವು ನಮ್ಮ ಕ್ರಿಕೆಟ್ ಪಂದ್ಯಾವಳಿಯನ್ನು ಪಡೆಯುತ್ತೇವೆ. ಇಂತಹ ವಿಷಯಗಳನ್ನು ನಿಯಂತ್ರಿಸುವುದು ಐಸಿಸಿಯ ಕೆಲಸ, ಇಲ್ಲದಿದ್ದರೆ ಆಡಳಿತ ಮಂಡಳಿಯನ್ನು ಹೊಂದುವುದರಲ್ಲಿ ಯಾವುದೇ ಅರ್ಥವಿಲ್ಲ," ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಹೇಳಿದ್ದಾರೆ.

"ಐಸಿಸಿ ಪ್ರತಿಯೊಂದು ದೇಶಕ್ಕೂ ಒಂದೇ ನಿಯಮವನ್ನು ವಿಧಿಸಬೇಕು. ಭಾರತದಂತಹ ತಂಡಗಳು ಬರದಿದ್ದರೆ, ಅವರು ಎಷ್ಟೇ ಬಲಿಷ್ಠವಾಗಿದ್ದರೂ, ನೀವು ಅವರನ್ನು ಹೊರಹಾಕಬೇಕು," ಎಂದು ಜಾವೇದ್ ಮಿಯಾಂದಾದ್ ವಾಗ್ದಾಳಿ ನಡೆಸಿದ್ದಾರೆ.
"ಪಾಕಿಸ್ತಾನದಲ್ಲಿ ಭಾರತ ಸೋಲು ಅನುಭವಿಸುವ ಸಾಧ್ಯತೆ ಇದ್ದು, ಜನರಿಂದ ಎದುರಾಗುವ ಟೀಕೆಗೆ ಹೆದರಿ ಬಿಸಿಸಿಐ ತನ್ನ ತಂಡ ಕಳುಹಿಸಲು ಸಿದ್ಧರಿಲ್ಲ," ಎಂದು ಜಾವೇದ್ ಮಿಯಾಂದಾದ್ ತನ್ನದೇ ಮೌಲ್ಯಮಾಪನದ ಮೂಲಕ ಭಾರತವನ್ನು ಟೀಕಿಸಿದರು.
ಸೋತರೆ ಸ್ವದೇಶಕ್ಕೆ ಹಿಂತಿರುಗಲು ಭಯಪಡುತ್ತಾರೆಯೇ? ಅದಕ್ಕಾಗಿ ಭಾರತ ತಂಡವು ಪಾಕಿಸ್ತಾನದಲ್ಲಿ ಆಡಲು ನಿರಾಕರಿಸುತ್ತಿದೆಯೇ? ಎಂದು ವರದಿಗಾರರು ಕೇಳಿದಾಗ, ಜಾವೇದ್ ಮಿಯಾಂದಾದ್ "ಹೌದು' ಎಂದು ಉತ್ತರಿಸಿದರು.
"ನಮ್ಮ ಕಾಲದಲ್ಲಿಯೂ ಸಹ, ಸೋತ ನಂತರದ ಪರಿಣಾಮಗಳ ಭಯದಿಂದ ಭಾರತ ಆಡುತ್ತಿರಲಿಲ್ಲ. ಭಾರತದ ಜನರು ಭಾರತ ತಂಡ ಯಾರದೇ ವಿರುದ್ಧ ಸೋತಾಗ ಅಸಹ್ಯ ಮಾಡುತ್ತಾರೆ ಮತ್ತು ಮನೆಗಳನ್ನು ಸುಡುತ್ತಾರೆ. ಅದಕ್ಕಾಗಿಯೇ ಭಾರತ ತಂಡ ಪಾಕಿಸ್ತಾನಕ್ಕೆ ಬರಲು ಹೆದರುತ್ತದೆ," ಎಂದು ಪಾಕಿಸ್ತಾನದ ಪಾಕಿಸ್ತಾನದ ಮಾಜಿ ಬ್ಯಾಟರ್ ಜಾವೇದ್ ಮಿಯಾಂದಾದ್ ಕೊಚ್ಚಿಕೊಂಡಿದ್ದಾರೆ.
ಅಂತಿಮವಾಗ, ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಆಡಲು ನಿರಾಕರಿಸಿದ ಭಾರತದಂತಹ ತಂಡಗಳ ವಿರುದ್ಧ ಐಸಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹ ವರ್ತನೆ ತೋರುವ ತಂಡಗಳನ್ನು ಹೊರಹಾಕಬೇಕು ಎಂದು ಜಾವೇದ್ ಮಿಯಾಂದಾದ್ ಒತ್ತಾಯಿಸಿದರು.