
ಮುಂಬರುವ 2023ರ ಏಕದಿನ ಏಷ್ಯಾ ಕಪ್ ಪಂದ್ಯಾವಳಿಗಾಗಿ ಪಾಕಿಸ್ತಾನಕ್ಕೆ ತನ್ನ ಆಟಗಾರರನ್ನು ಕಳುಹಿಸಲು ಬೇರೆ ತಂಡಗಳಿಗೆ ಇಲ್ಲಿನ ಭದ್ರತೆಯ ಬಗ್ಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ ತನ್ನ ಆಟಗಾರರನ್ನು ಕಳುಹಿಸದಿರಲು ಭಾರತ ಏಕೆ ಯೋಚನೆ ಮಾಡುತ್ತಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ನಜಮ್ ಸೇಥಿ ಬಿಸಿಸಿಐಗೆ ಪ್ರಶ್ನಿಸಿದ್ದಾರೆ.
ಮುಂಬರುವ ಏಷ್ಯಾ ಕಪ್ ಪಂದ್ಯಾವಳಿ ಪಾಕಿಸ್ತಾನದಲ್ಲಿ ಆಯೋಜನೆ ಬಗ್ಗೆ ಇನ್ನೂ ಖಚಿತಗೊಳ್ಳದಿದ್ದರೂ, ಇದು 'ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳುವ' ಸಮಯವಾಗಿದೆ. ಮುಂದಿನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಭೆಯಲ್ಲಿ ಈ ವಿಷಯವನ್ನು ಚರ್ಚಿಸುವುದಾಗಿ ನಜಮ್ ಸೇಥಿ ತಿಳಿಸಿದರು.
"ನಮ್ಮ ಕೈಯಲ್ಲಿ ಸಂಕೀರ್ಣವಾದ ಸಮಸ್ಯೆಗಳಿವೆ. ಆದರೆ, ನಾನು ಎಸಿಸಿ ಮತ್ತು ಐಸಿಸಿ ಸಭೆಗಳಲ್ಲಿ ಹಾಜರಾದಾಗ, ನಮ್ಮ ಎಲ್ಲಾ ಆಯ್ಕೆಗಳನ್ನು ತೆರೆದಿಟ್ಟಿದ್ದೇನೆ. ಹೀಗಾಗಿ ನಾವು ಈಗ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಾಗಿದೆ," ಎಂದು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

"2023ರ ಏಕದಿನ ಏಷ್ಯಾ ಕಪ್ಗಾಗಿ ಪಾಕಿಸ್ತಾನಕ್ಕೆ ತಂಡ ಕಳುಹಿಸದ ಬಿಸಿಸಿಐ ನಿರ್ಧಾರ ಬದಲಾಗದಿದ್ದರೂ ಅಥವಾ ಏಷ್ಯಾ ಕಪ್ಗೆ ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳುಹಿಸಲು ಬಿಸಿಸಿಐ ನಿರಾಕರಿಸಿದರೆ, ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಆಡದಿರುವ ಬಗ್ಗೆ ಯೋಚಿಸಬೇಕಾಗುತ್ತದೆ," ಎಂದು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಬಿಸಿಸಿಐಗೆ ಎಚ್ಚರಿಕೆ ನೀಡಿದ್ದಾರೆ.
ಬಿಸಿಸಿಐ ನಿಲುವಿಗೆ ಪಿಸಿಬಿ ಅಧ್ಯಕ್ಷ ಅತೃಪ್ತಿ
"ಬೇರೆ ಎಲ್ಲಾ ತಂಡಗಳು ಪಾಕಿಸ್ತಾನಕ್ಕೆ ಬರುತ್ತಿರುವಾಗ ಭದ್ರತೆಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ, ಭಾರತವು ಭದ್ರತೆಯ ಬಗ್ಗೆ ಏಕೆ ಚಿಂತಿಸುತ್ತಿದೆ?. ನಮ್ಮ ತಂಡವನ್ನು ವಿಶ್ವಕಪ್ಗಾಗಿ ಭಾರತಕ್ಕೆ ಕಳುಹಿಸುವ ಬಗ್ಗೆಯೂ ನಾವು ಭದ್ರತಾ ಕಾಳಜಿಯನ್ನು ಹೊಂದಬೇಕಾಗುತ್ತದೆ. ಇದನ್ನು ಮುಂಬರುವ ಎಸಿಸಿ ಮತ್ತು ಐಸಿಸಿ ಸಭೆಗಳಲ್ಲಿ ಚರ್ಚಿಸುತ್ತೇನೆ," ಎಂದು ನಜಮ್ ಸೇಥಿ ಕಟುವಾಗಿ ಮಾತನಾಡಿದ್ದಾರೆ.
ಪಾಕಿಸ್ತಾನವು ಏಷ್ಯಾ ಕಪ್ ಟೂರ್ನಿಯನ್ನು ಆಯೋಜಿಸಬೇಕೆಂದು ಬಯಸುತ್ತಿದೆ ಮತ್ತು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಆಯೋಜಿಸಲು ಪಾಕಿಸ್ತಾನ ಸಜ್ಜಾಗಿದೆ ಎಂದು ನಜಮ್ ಸೇಥಿ ನೆನಪಿಸಿದ್ದಾರೆ.