ರಾಂಚಿ, ಮಾ.26: ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋಲುತ್ತಿದ್ದಂತೆ ಭಾರತದಲ್ಲಿ ಪ್ರತಿಭಟನೆಗಳು ಮೊದಲಾಗಿವೆ. ದೇಶದ ಹಲವೆಡೆ ಹುಚ್ಚು ಅಭಿಮಾನಿಗಳು ಟಿವಿ, ರಿಮೋಟ್, ಹೂಕುಂಡ, ಕಿಟಕಿ ಗಾಜು, ಮೇಜು, ಬೀದಿ ನಾಯಿಯ ಮೇಲೆ ತಮ್ಮ ಸಿಟ್ಟನ್ನು ತೀರಿಸಿಕೊಂಡಿದ್ದಾರೆ.
ಧೋನಿ ನಾಯಕತ್ವದ ಟೀಂ ಇಂಡಿಯಾ ಖಂಡಿತವಾಗಿಯೂ ಫೈನಲ್ ತಲುಪುತ್ತದೆ ಎಂದು ಬೆಟ್ ಕಟ್ಟಿದ ಎಷ್ಟೋ ಮಂದಿ ನಿರಾಶೆ ಹೊಂದಿ ತಲೆ ಚೆಚ್ಚಿಕೊಂಡಿದ್ದಾರೆ.
ಕಾನ್ಪುರದಲ್ಲಿ ಹುಚ್ಚು ಫ್ಯಾನ್ಸ್ ಗಳ ಕೋಪಕ್ಕೆ ಟಿವಿ ಸೆಟ್ ಪುಡಿ ಪುಡಿಯಾಗಿದೆ. ಹಲವೆಡೆ ಧೋನಿ ಸೇರಿದಂತೆ ಪ್ರಮುಖ ಕ್ರಿಕೆಟರ್ ಗಳ ಭಾವಚಿತ್ರಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. [ನಿವೃತ್ತಿ ಬಗ್ಗೆ ಗುಟ್ಟು ರಟ್ಟು ಮಾಡಿದ ಧೋನಿ]

ಧೋನಿ ಮನೆಗೆ ರಕ್ಷಣೆ: ದೇಶದ ಹಲವೆಡೆ ಅಭಿಮಾನಿಗಳ ಆಕ್ರೋಶ ಹಬ್ಬುತ್ತಿರುವ ಸುದ್ದಿ ತಿಳಿದ ರಾಂಚಿ ಪೊಲೀಸರು ಧೋನಿ ಅವರ ನಿವಾಸಕ್ಕೆ ರಕ್ಷಣೆ ಒದಗಿಸಿದ್ದಾರೆ. ಧೋನಿ ಅವರ ಕುಟುಂಬಸ್ಥರಿಗೆ ಮನೆ ಬಿಟ್ಟು ಹೊರಕ್ಕೆ ಬರದಂತೆ ಸೂಚನೆ ನೀಡಿದ್ದಾರೆ. [ಸ್ಪೆಷಲ್ ಸೆಂಚುರಿ ಬಾರಿಸಿದ ಧೋನಿ]
ನಿನ್ನೆ ಪೂಜೆ ಇವತ್ತು ತಿಥಿ: ಸತತ 7 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪಿದ್ದ ಟೀಂ ಇಂಡಿಯಾ ಬಗ್ಗೆ ಮಂಗಳವಾರ ಅಭಿಮಾನಿಗಳಿಗೆ ಎಲ್ಲಿಲ್ಲದ ಅಭಿಮಾನ ಉಕ್ಕಿ ಹರಿದಿತ್ತು. ದೇಶದ ಹಲವೆಡೆ ಪೂಜೆ, ಪುನಸ್ಕಾರ, ಹೋಮ, ಹವನ, ಉರುಳು ಸೇವೆ, ಅಷ್ಟೋತ್ತರ, ಜಪ ತಪಗಳು ನಡೆದಿತ್ತು. ಎಲ್ಲರೂ ಭಾರತ ಗೆಲ್ಲುವ ವಿಶ್ವಾಸ ಹೊಂದಿದ್ದರು.
ಆದರೆ, ಇಂದು ಆಸ್ಟ್ರೇಲಿಯಾ ವಿರುದ್ಧ 95 ರನ್ ಗಳಿಂದ ಟೀಂ ಇಂಡಿಯಾ ಸೋತು ಮಂಡಿಯೂರಿದಾಗ ಪರಿಸ್ಥಿತಿ ಸಂಪೂರ್ಣ ಬದಲಾಗಿ ಹೋಗಿದೆ. ಇವತ್ತು ಟೀಂ ಇಂಡಿಯಾದ ಒಬ್ಬೊಬ್ಬ ಆಟಗಾರನನ್ನು ಹೆಸರಿಸಿ ಅವನನ್ನು ಹಿಗ್ಗಾ ಮುಗ್ಗಾ ತೆಗಳುತ್ತಿದ್ದಾರೆ.
ಕೊನೆ ಓವರ್ ಮಾಡಿದ ಮೋಹಿತ್ ಶರ್ಮ, 1 ರನ್ ಹೊಡೆದು ಔಟಾದ ವಿರಾಟ್ ಕೊಹ್ಲಿ, ಸೂಪರ್ ಚೇಸರ್ ಧೋನಿ ಮೇಲೆ ಹೆಚ್ಚಿನ ಕೋಪ ತಾಪಗಳು ಕಂಡು ಬಂದಿವೆ.ಆಟದಲ್ಲಿ ಸೋಲು ಗೆಲುವು ಇದ್ದದ್ದೇ ಎಂದು ಯಾರಾದರೂ ಹಿರಿಯರು ಡೈಲಾಗ್ ಹೊಡೆದರೂ ಕೇಳದ ತಿಕ್ಕಲುತನದ ಅಭಿಮಾನಿಗಳನ್ನು ದೇವರೇ ರಕ್ಷಿಸಬೇಕು.