ಕೋಲ್ಕತ್ತಾ, ಏ.26: ಟೀಂ ಇಂಡಿಯಾದ ಹಾಲಿ ಕೋಚ್ ಡಂಕನ್ ಫ್ಲೆಚರ್ ಅವರ ಸ್ಥಾನ ತುಂಬಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಮುಖವನ್ನು ಹುಡುಕಲು ಆರಂಭಿಸಿರುವ ಸುದ್ದಿ ಎಲ್ಲರಿಗೂ ತಿಳಿದೇ ಇದೆ. ಕೋಚ್ ರೇಸಿನಲ್ಲಿ ಗಂಗೂಲಿ, ದ್ರಾವಿಡ್ ಇದ್ದಾರೆ ಎಂಬ ಗಾಳಿಸುದ್ದಿಗೆ ಬಿಸಿಸಿಐ ಗುದ್ದು ನೀಡಿದೆ. ಬದಲಿಗೆ ಹೊಸ ಕೋಚ್ ಆಯ್ಕೆ ಜವಾಬ್ದಾರಿಯಲ್ಲಿ ಕ್ರಿಕೆಟ್ ದಿಗ್ಗಜರಾದ ಸಚಿನ್, ಗಂಗೂಲಿ ಹಾಗೂ ದ್ರಾವಿಡ್ ಅವರಿಗೆ ನೀಡಿದೆ.
ಏ.26 ರಾತ್ರಿ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆ ಹೀಗೊಂದು ನಿರ್ಣಯ ಕೈಗೊಳ್ಳಲಾಗಿದೆ. ಡಂಕನ್ ಫ್ಲೆಚರ್ ಅವರಿಂದ ತೆರವಾಗುವ ಸ್ಥಾನಕ್ಕೆ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡುವ ಹೊಣೆಯನ್ನು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಅವರಿಗೆ ವಹಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಹಾಲಿ ಮುಖ್ಯ ತರಬೇತುದಾರ ಡಂಕನ್ ಫ್ಲೆಚರ್ ಅವರ ಅವಧಿ ವಿಶ್ವಕಪ್ 2015 ಟೂರ್ನಿ ಜೊತೆಗೆ ಅಂತ್ಯವಾಗಿದೆ. ಭಾರತ ಕ್ರಿಕೆಟ್ ತಂಡದ ಮುಂದಿನ ಕೋಚ್ ಯಾರು ಎಂಬುದರ ಬಗ್ಗೆ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.[ದ್ರಾವಿಡ್ ಹಾಗೂ ನನಗೆ ಕೋಚ್ ಆಗುವ ಅರ್ಹತೆ ಇದೆ]
ಮುಖ್ಯ ಕೋಚ್ ಮಾತ್ರ ಬದಲಾವಣೆ: ಡಂಕನ್ ಫ್ಲೆಚರ್ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡಲಾಗುತ್ತದೆ. ಮಿಕ್ಕಂತೆ ವಿಶ್ವಕಪ್ 2015ರಲ್ಲಿ ಕಾರ್ಯ ನಿರ್ವಹಿಸಿದ ತರಬೇತುದಾರರನ್ನು ಮುಂದುವರೆಸಲಾಗುತ್ತದೆ. ಮಾಜಿ ಕ್ರಿಕೆಟರ್ ರವಿಶಾಸ್ತ್ರಿ ಅವರು ತಂಡದ ನಿರ್ದೇಶಕರಾಗಿ, ಸಹಾಯಕ ಕೋಚ್ ಸಂಜಯ್ ಬಂಗಾರ್, ಭರತ್ ಅರುಣ್ ಹಾಗೂ ಆರ್ ಶ್ರೀಧರ್ ಅವರ ಸ್ಥಾನ ಭದ್ರವಾಗಿದೆ.
ಈ ಮೂಲಕ ಸೌರವ್ ಗಂಗೂಲಿ ಅವರನ್ನು ಹೊಸ ಕೋಚ್ ಆಗಿ ನೇಮಿಸುತ್ತಿಲ್ಲ ಎಂಬುದನ್ನು ಬಿಸಿಸಿಐ ಕಾರ್ಯಕಾರಿ ಸಮಿತಿ ಸ್ಪಷ್ಟಪಡಿಸಿದೆ. ದಾಲ್ಮಿಯಾ ನೇತೃತ್ವದ ಕಾರ್ಯಕಾರಿ ಸಮಿತಿಗೆ ಗಂಗೂಲಿ ಸೇರಿಸಿಕೊಳ್ಳುವುದರಿಂದ ತಾಂತ್ರಿಕವಾಗಿ ಅವರನ್ನು ಕೋಚ್ ಆಗಿ ನೇಮಿಸುವುದು ಕಷ್ಟವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸೌರವ್ ಈ ಹಿಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ನಾನು ಹಾಗೂ ರಾಹುಲ್ ದ್ರಾವಿಡ್ ಇಬ್ಬರೂ ಕೋಚ್ ಆಗುವ ಅರ್ಹತೆ ಹೊಂದಿದ್ದೇವೆ. ಇದಕ್ಕಾಗಿ ಯಾವುದೇ ರೀತಿ ಲಾಬಿ ನಡೆಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)