
ತಮಿಳುನಾಡಿನ ಕುನೂರಿನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ದೇಶದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ನಿಧನರಾಗಿದ್ದಾರೆ. ಇವರಷ್ಟೇ ಅಲ್ಲದೆ ಅಪಘಾತದಲ್ಲಿ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಇಬ್ಬರೂ ದುರಂತವಾಗಿ ಸಾವನ್ನಪ್ಪಿದ್ದಾರೆ. ಭಾರತೀಯ ವಾಯುಪಡೆ ತನ್ನ ಟ್ವಿಟರ್ ಹ್ಯಾಂಡಲ್ ನಲ್ಲಿ ಇದನ್ನು ದೃಢಪಡಿಸಿದೆ.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಅಪಘಾತದಲ್ಲಿ ಇದುವರೆಗೆ 13 ಜನರ ಸಾವನ್ನು ಏರ್ ಫೋರ್ಸ್ ಖಚಿತಪಡಿಸಿದೆ, ಹೆಲಿಕಾಪ್ಟರ್ನಲ್ಲಿ ಒಟ್ಟು 14 ಮಂದಿ ಇದ್ದರು.
''ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಮಂದಿ ದುರದೃಷ್ಟಕರ ಘಟನೆಯಲ್ಲಿ ದುರಂತವಾಗಿ ಸಾವನ್ನಪ್ಪಿದ್ದಾರೆ ಎಂದು ತೀವ್ರ ದುಃಖದಿಂದ ತಿಳಿಸಲಾಗಿದೆ." ಎಂದು ಬಿಪಿನ್ ರಾವತ್ ಅವರ ಸಾವನ್ನು ಭಾರತೀಯ ವಾಯುಪಡೆ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ದೃಢಪಡಿಸಿತು.
ಈ ಸುದ್ದಿ ಹೊರಬೀಳುತ್ತಿದ್ದಂತೆ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡುವ ಮೂಲಕ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಿಪಿನ್ ರಾವತ್ ಸಾವಿಗೆ ರಾಜಕಾರಣಿಗಳಷ್ಟೇ ಅಲ್ಲದೆ ಭಾರತದ ಕ್ರಿಕೆಟಿಗರು ಸಹ ಕಂಬನಿ ಮಿಡಿದಿದ್ದಾರೆ. ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಭಾರತದ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಬಿಪಿನ್ ರಾವತ್ ಮತ್ತು ಇತರ ಅಧಿಕಾರಿಗಳ ನಿಧನಕ್ಕೆ ಕೊಹ್ಲಿ ದುಃಖ ವ್ಯಕ್ತಪಡಿಸಿದ್ದಾರೆ. ಇನ್ನು ಹೆಲಿಕಾಪ್ಟರ್ ಪತನದ ದುಃಖದ ಸುದ್ದಿ ಕೇಳಿ ತುಂಬಾ ನೋವಾಗಿದೆ ಅವರು ದೇಶಕ್ಕೆ ಮಾಡಿದ ಸೇವೆಗೆ ಕೃತಜ್ಞತೆಗಳನ್ನ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಲ್ಲಿಸಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಇದ್ರಿಂದ ಹೊರತಾಗಿಲ್ಲ ಭಾರತ ಮತ್ತು ನಮ್ಮ ರಕ್ಷಣಾ ಪಡೆಗಳಿಗೆ ಇದು ದುಃಖದ ದಿನ. ಈ ದುರದೃಷ್ಟಕರ ಘಟನೆಯಲ್ಲಿದ್ದ ಎಲ್ಲಾ ರಕ್ಷಣಾ ಪಡೆಗಳ ಸಿಬ್ಬಂದಿ ಆತ್ಮಗಳಿಗೆ ಶಾಂತಿ ಸಿಗಲಿ. ಸದ್ಯಕ್ಕೆ ಜೀವನ್ಮರಣ ಹೋರಾಟ ನಡೆಸುತ್ತಿರುವ ಏಕೈಕ ವ್ಯಕ್ತಿ ಜಿಪಿ ಕ್ಯಾಪ್ಟನ್ ವರು ಸಿಂಗ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.
ಭಾರತದ ಯಾವೆಲ್ಲಾ ಕ್ರಿಕೆಟಿಗರು ಏನು ಟ್ವೀಟ್ ಮಾಡಿದ್ದಾರೆ ಎಂಬುದನ್ನ ಈ ಕೆಳಗೆ ನೀಡಲಾಗಿದೆ.