ಮುಂಬೈ, ಮೇ.12: ಕಿಂಗ್ ಖಾನ್ ಶಾರುಖ್ ಮತ್ತೊಮ್ಮೆ ವಿವಾದಗಳ ಪುಟ ಸೇರಿದ್ದಾರೆ. ಕೆಕೆಆರ್ ತಂಡ ಸಹ ಮಾಲೀಕತ್ವ ಹೊಂದಿರುವ ಜನಪ್ರಿಯ ನಟ ಶಾರುಖ್ ಅವರು ತಂಡದ ಷೇರುಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪ ಹೊತ್ತಿದ್ದಾರೆ. ಐಪಿಎಲ್ ಮುಗಿಯುವುದರೊಳಗೆ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.
ಲಭ್ಯ ಮಾಹಿತಿ ಪ್ರಕಾರ ತೆರಿಗೆ ವಂಚನೆಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೌಲ್ಯದ ಪ್ರಮಾಣವನ್ನು ತಪ್ಪಾಗಿ ನೀಡಲಾಗಿದೆ. ತಂಡದ ಷೇರುಗಳ ಹಂಚಿಕೆ, ಪಾಲುದಾರಿಕೆಯಲ್ಲೂ ಲೋಪ ಎಸಗಲಾಗಿದೆ ಎಂದು ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ.

ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾರುಖ್ ಖಾನ್ ಸಂಸ್ಥೆ ವಕ್ತಾರರು, ಈ ರೀತಿ ಯಾವುದೇ ಸಮನ್ಸ್ ನಮ್ಮ ಕೈಗೆ ಸಿಕ್ಕಿಲ್ಲ ಎಂದಿದ್ದಾರೆ. ಹಾಗೇನಾದರೂ ತಪ್ಪಿದ್ದರೆ ಕೆಕೆಆರ್ ತಂಡದ ಎಲ್ಲಾ ಮಾಲೀಕರಿಗೆ ಸಮನ್ಸ್ ಜಾರಿಗೊಳ್ಳುತ್ತದೆ. ಶಾರುಖ್ ಅವರಿಗೆ ಮಾತ್ರ ಜಾರಿಯಾಗುವುದಿಲ್ಲ ಎಂದಿದ್ದಾರೆ.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಐಷಾರಾಮಿ ಕ್ರಿಕೆಟ್ ಲೀಗ್ ನಲ್ಲಿ ಕಳ್ಳಹಣ ಓಡಾಟದ ಬಗ್ಗೆ 2011ರ ಟೂರ್ನಿಯಲ್ಲೇ ಸುಳಿವು ಸಿಕ್ಕಿತ್ತು. ಜಾರಿ ನಿರ್ದೇಶನಾಲಯ ವಿದೇಶಿ ವಿನಿಯಮ ವಂಚನೆ, ತೆರಿಗೆ ವಂಚನೆ, ಮನಿ ಲಾಂಡ್ರಿಂಗ್ ಸೇರಿದಂತೆ ಹಲವು ಕೋನಗಳಿಂದ ತನಿಖೆಗೆ ಮುಂದಾಗಿದೆ. ಈ ಮುಂಚೆ ವಿದೇಶಿ ಆಟಗಾರರಿಗೆ ನೀಡುವ ಸಂಭಾವನೆಯಲ್ಲಿ ತೆರಿಗೆ ವಂಚನೆಯಾಗುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಶಾರುಖ್ ಗೆ ವಾಂಖೆಡೆ ಪ್ರವೇಶ ನಿಷೇಧ ಮುಂದುವರೆದಿರುವ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಸಮನ್ಸ್ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಆಟಗಾರರ ಖರೀದಿ, ಸಂಭಾವನೆ, ಜಾಹೀರಾತು, ಆದಾಯ, ಲಾಭ ನಷ್ಟಗಳ ಕುರಿತಂತೆ ವರದಿಯನ್ನು ಹೊತ್ತು ಜಾರಿ ನಿರ್ದೇಶನಾಲಯದ ಕಚೇರಿಗೆ ಶಾರುಖ್ ಹೋಗುವುದು ಅನಿವಾರ್ಯವಾಗಿದೆ. (ಒನ್ ಇಂಡಿಯಾ ಸುದ್ದಿ)