ಮುಂಬೈ, ಮೇ.12: ಇಲ್ಲಿನ ವಾಂಖೇಡೆ ಸ್ಟೇಡಿಯಂಗೆ ಕಾಲಿಡದಂತೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ತಂಡದ ಮಾಲಕ ಶಾರುಖ್ಖಾನ್ ಅವರ ವಿರುದ್ಧ ಹೇರಲಾಗಿರುವ ನಿಷೇಧ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ.
ಸತತ ಮೂರು ವರ್ಷಗಳಿಂದ ನಿಷೇಧಕ್ಕೊಳಗಾಗಿರುವ ಶಾರುಖ್ ಅವರು ಕೆಕೆಆರ್ ಪಂದ್ಯದ ವೇಳೆ ಮೈದಾನದಿಂದ ಹೊರಗುಳಿಯಬೇಕಾಗುತ್ತದೆ. ಶಾರುಖ್ ಮೇಲೆ 5 ವರ್ಷಗಳ ಕಾಲ ನಿಷೇಧ ಹೇರಿರುವುದನ್ನು ಇಲ್ಲಿ ಸ್ಮರಿಸಬಹುದು. ಹೀಗಾಗಿ ಮೇ.14ರಂದು ನಡೆಯುವ ಕೆಕೆಆರ್ ಪಂದ್ಯವನ್ನು ಮೈದಾನದಲ್ಲಿದ್ದುಕೊಂಡು ನೋಡಲು ಶಾರುಖ್ ಗೆ ಸಾಧ್ಯವಿಲ್ಲ.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಐಪಿಎಲ್ ಆಯೋಜಕರು ಶಾರುಖ್ ಅವರ ಮೇಲಿನ ನಿಷೇಧ ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿರುವುದನ್ನು ಮರಾಠಿ ಶಾಸಕರು ಖಂಡಿಸಿದ್ದಾರೆ. ಎಂಸಿಎ ಅಧಿಕಾರಿಗಳು ಕೂಡಾ ನಿಯಮಗಳನ್ನು ಮೀರಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಮೇ.16ರಂದು ವಾಂಖೆಡೆ ಸ್ಟೇಡಿಯಂ ಸಮೀಪದಲ್ಲೇ ಇರುವ ಬ್ರೆಬೋರ್ನ್ ಮೈದಾನದಲ್ಲಿ ನಡೆಯುವ ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಸಮರವನ್ನು ಶಾರುಖ್ ವೀಕ್ಷಿಸಬಹುದು. ಹಾಲಿ ಚಾಂಪಿಯನ್ ಕೆಕೆಆರ್ ತಂಡ ಈ ಬಾರಿ ಕೂಡಾ ಪ್ಲೇ ಆಫ್ ಗೆ ಅರ್ಹತೆ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. [ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರ ]

ಐಪಿಎಲ್ ಪಂದ್ಯದ ವೇಳೆ ಭದ್ರತಾ ಸಿಬ್ಬಂದಿ ಜತೆ ಜಗಳ ಹಾಗೂ ಅಧಿಕಾರಿಗೆ ಬೆದರಿಕೆ ಒಡ್ಡಿದ ಕಾರಣಕ್ಕಾಗಿ ವಾಂಖೇಡೆ ಸ್ಟೇಡಿಯಂ ಪ್ರವೇಶಿಸದಂತೆ ಶಾರುಖ್ಖಾನ್ಗೆ ನಿಷೇಧ ಹೇರಲಾಗಿತ್ತು. ಶಾರುಖ್ ಮೇಲಿನ ನಿಷೇಧವನ್ನು ಪುನರ್ ಪರಿಶೀಲಿಸುವಂತೆ ಬಿಸಿಸಿಐ ಎಂಸಿಎಗೆ ಮನವಿ ಮಾಡಿತ್ತು. ಅದರೆ, ಶಾರುಖ್ ಮೇಲಿನ ನಿರ್ಬಂಧ ತೆರವುಗೊಳಿಸಿರಲಿಲ್ಲ.
ಮಕ್ಕಳ ಮುಂದೆ ಅವಾಚ್ಯ ಶಬ್ದ ಬಳಸಿದ ಕಾರಣಕ್ಕೆ ಶಾರುಖ್ ಅವರ ಮೇಲೆ ಮತ್ತೊಂದು ಎಫ್ ಐಆರ್ ದಾಖಲಾಗಿತ್ತು. ಐಪಿಎಲ್ ಆಯೋಜಿಸಿರುವ ಬಿಸಿಸಿಐ ಮನವಿಗೂ ಎಂಸಿಎ ಸೊಪ್ಪು ಹಾಕಿರಲಿಲ್ಲ. ಈಗಲೂ ಕೂಡಾ ಬಾಲಿವುಡ್ ತಾರೆಗಳ ಮನವಿ ಬಂದರೂ ಎಂಸಿಎ ಬಗ್ಗುತ್ತಿಲ್ಲ. ಇತ್ತೀಚಿಗೆ ಐಶ್ವರ್ಯಾ ರೈ ನಟನೆಯ ಚಿತ್ರದ ಶೂಟಿಂಗ್ ಗೂ ಅನುಮತಿ ನೀಡಲು ಎಂಸಿಎ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ ಇಂಡಿಯಾ ಸುದ್ದಿ)