ಬೆಂಗಳೂರು, ಏಪ್ರಿಲ್ 15: ಟೀಂ ಇಂಡಿಯಾದ ಮಹಿಳಾ ಕ್ರಿಕೆಟರ್, ಸ್ಫೋಟಕ ಆಟಗಾರ್ತಿ, ಕಡೂರಿನ ವೇದಾ ಕೃಷ್ಣಮೂರ್ತಿ ಅವರು ಸಕತ್ ಖುಷಿಯಲ್ಲಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಬ್ರೆಂಡನ್ ಮೆಕಲಮ್ ಅವರನ್ನು ಭೇಟಿ ಮಾಡಿದ್ದಾರೆ.
ಮೆಕಲಮ್ ಅವರನ್ನು ಭೇಟಿ ಮಾಡಿ, ಇನ್ಸ್ಟಾ ಗ್ರಾಮ್ ನಲ್ಲಿ ಸೆಲ್ಫಿ ಫೋಟೊ ಹಾಕಿದ್ದಾರೆ. ಬ್ರೆಂಡನ್ ಮೆಕಲಮ್ ಜತೆ ಹಾಸ್ಯಮಯ ಸಮಯವನ್ನು ಕಳೆದೆ. ನಿಮ್ಮೊಂದಿಗೆ ಭೇಟಿ ಚೆನ್ನಾಗಿತ್ತು. ಟೂರ್ನಮೆಂಟ್ ನ ಮಂದಿನ ಪಂದ್ಯಗಳಿಗೆ ನಿಮಗೆ ಶುಭಹಾರೈಕೆ. ಈ ಸಲ ಕಪ್ ನಮ್ದೆ! (#escn = Ee sala cup namde) ಎಂದು ಸಂದೇಶ ಹಾಕಿದ್ದಾರೆ. ಇದಕ್ಕೆ ಬ್ರೆಂಡನ್ ಮೆಕಲಮ್ ಕೂಡಾ ಪ್ರತಿಕ್ರಿಯಿಸಿದ್ದು, ನಿಮ್ಮ ಜತೆಗಿನ ಭೇಟಿ ಹಿತವಾಗಿತ್ತು, ಇನ್ನೊಮ್ಮೆ ಸಿಗೋಣ ಎಂದಿದ್ದಾರೆ.
ಯುವ ಆಟಗಾರ್ತಿಯಾಗಿ ಭಾರತ ತಂಡದಲ್ಲಿ ಆಡುವ ವೇದಾ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಮೂರು ಪಂದ್ಯಗಳಿಂದ ಕೇವಲ 24ರನ್ ಮಾತ್ರ ಗಳಿಸಿದ್ದರು. ಆರ್ ಸಿಬಿ ತನ್ನ ತವರು ನೆಲದಲ್ಲಿ ಪಂದ್ಯಗಳನ್ನಾಡುತ್ತಿರುವುದರಿಂದ ತಂಡವನ್ನು ಹುರಿದುಂಬಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು.
ಐಪಿಎಲ್ 2018ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವು ಭಾನುವಾರದಂದು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಸೆಣೆಸಲಿದೆ. ಮೆಕಲಮ್ ಅವರು ಕೆಕೆಆರ್ ವಿರುದ್ಧ 43ರನ್ ಗಳಿಸಿದರೆ, ಎರಡನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ನಿರಾಶೆ ಮೂಡಿಸಿದ್ದರು.