
ಇಂದು ( ಏಪ್ರಿಲ್ 29 ) ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 7 ವಿಕೆಟ್ಗಳ ಗೆಲುವನ್ನು ಸಾಧಿಸಿದೆ.
ಈ ಮೂಲಕ ಗುಜರಾತ್ ಟೈಟನ್ಸ್ ಟೂರ್ನಿಯಲ್ಲಿನ ತನ್ನ ಆರನೇ ಗೆಲುವನ್ನು ದಾಖಲಿಸಿ 12 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ಏರಿಕೆ ಕಂಡಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೂ 8 ಪಂದ್ಯಗಳನ್ನಾಡಿರುವ ಗುಜರಾತ್ ಟೈಟನ್ಸ್ 6 ಪಂದ್ಯಗಳನ್ನು ಗೆದ್ದಿದ್ದು, ಕೇವಲ 2 ಪಂದ್ಯಗಳಲ್ಲಿ ಸೋತಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿ ಗುಜರಾತ್ ಟೈಟನ್ಸ್ ತಂಡಕ್ಕೆ ಗೆಲ್ಲಲು 180 ರನ್ಗಳ ಪೈಪೋಟಿಯುತ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟನ್ಸ್ 17.5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿದೆ.
ಇನ್ನು ಮಳೆ ಸುರಿದ ಕಾರಣದಿಂದಾಗಿ ಈ ಪಂದ್ಯ ಸುಮಾರು ಮೂವತ್ತು ನಿಮಿಷಗಳ ಕಾಲ ತಡವಾಗಿ ಆರಂಭವಾಗಿತ್ತು. ಪಂದ್ಯ ಆರಂಭವಾದ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ರಹ್ಮನ್ನುಲ್ಲಾ ಗುರ್ಬಜ್ ರನ್ ಮಳೆ ಸುರಿಸಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದ ಎನ್ ಜಗದೀಶನ್ 19 ರನ್ ಗಳಿಸಿದರೆ, ಗುರ್ಬಜ್ 39 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 81 ರನ್ ಚಚ್ಚಿದರು. ಇನ್ನುಳಿದಂತೆ ಕಳೆದ ಬಾರಿಯ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಡಕ್ಔಟ್ ಆಗಿದ್ದ ಶಾರ್ದೂಲ್ ಠಾಕೂರ್ ಈ ಪಂದ್ಯದಲ್ಲಿಯೂ 4 ಎಸೆತಗಳನ್ನು ಎದುರಿಸಿ ಡಕ್ಔಟ್ ಆಗಿದ್ದಾರೆ. ವೆಂಕಟೇಶ್ ಐಯ್ಯರ್ 14 ಎಸೆತಗಳಲ್ಲಿ 11, ನಿತಿಶ್ ರಾಣಾ 3 ಎಸೆತಗಳಲ್ಲಿ 4 ರನ್, ರಿಂಕು ಸಿಂಗ್ 20 ಎಸೆತಗಳಲ್ಲಿ 19 ರನ್, ಆಂಡ್ರೆ ರಸೆಲ್ 19 ಎಸೆತಗಳಲ್ಲಿ 34 ಹಾಗೂ ಡೇವಿಡ್ ವೈಸ್ 6 ಎಸೆತಗಳಲ್ಲಿ ಅಜೇಯ 8 ರನ್ ಗಳಿಸಿದರು.
ಇನ್ನು ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಆಮಿ 3 ವಿಕೆಟ್, ಜೋಶ್ವಾ ಲಿಟಲ್ ಹಾಗೂ ನೂರ್ ಅಹ್ಮದ್ ತಲಾ ಎರಡು ವಿಕೆಟ್ಗಳನ್ನು ಪಡೆದರು. ಹಾರ್ದಿಕ್ ಪಾಂಡ್ಯಾ 3 ಓವರ್ಗಳಲ್ಲಿ 34 ರನ್ ನೀಡಿ ದುಬಾರಿಯಾದರೆ, ರಶಿದ್ ಖಾನ್ 4 ಓವರ್ಗಳಲ್ಲಿ 54 ರನ್ ನೀಡಿ ದುಬಾರಿಯಾದರು.
ಕೊಲ್ಕತ್ತಾ ನೈಟ್ ರೈಡರ್ಸ್ ನೀಡಿದ ಪೈಪೋಟಿಯುತ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟನ್ಸ್ ಪರ ಆರಂಭಿಕರಾಗಿ ವೃದ್ಧಿಮಾನ್ ಸಹಾ ಹಾಗೂ ಶುಭ್ಮನ್ ಗಿಲ್ ಕಣಕ್ಕಿಳಿದರು. ಸಹಾ 10 ಎಸೆತಗಳಲ್ಲಿ 10 ರನ್, ಶುಭ್ಮನ್ ಗಿಲ್ 35 ಎಸೆತಗಳಲ್ಲಿ 49 ರನ್ ಕಲೆಹಾಕಿದರು. ಉಳಿದಂತೆ ನಾಯಕ ಹಾರ್ದಿಕ್ ಪಾಂಡ್ಯ 20 ಎಸೆತಗಳಲ್ಲಿ 26, ವಿಜಯ್ ಶಂಕರ್ 24 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ಸೇರಿದಂತೆ ಅಜೇಯ 51 ರನ್ ಗಳಿಸಿದರು ಹಾಗೂ ಡೇವಿಡ್ ಮಿಲ್ಲರ್ 18 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿದರು.
ಕೊಲ್ಕತ್ತಾ ನೈಟ್ ರೈಡರ್ಸ್ ಪರ ಹರೀಶ್ ರಾಣಾ, ಆಂಡ್ರೆ ರಸೆಲ್ ಹಾಗೂ ಸುನಿಲ್ ನರೈನ್ ತಲಾ ಒಂದೊಂದು ವಿಕೆಟ್ ಪಡೆದರು. ಇಷ್ಟು ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಮಾಡಿದ ಸುಯಶ್ ಶರ್ಮಾ ಹಾಗೂ ವರುಣ್ ಚಕ್ರವರ್ತಿ ಯಾವುದೇ ವಿಕೆಟ್ ಪಡೆಯದೇ ಹೆಚ್ಚು ರನ್ ನೀಡಿ ದುಬಾರಿಯಾದರು.