
ಹುಬ್ಬಳ್ಳಿ, ಆಗಸ್ಟ್ 20: ಕೆಪಿಎಲ್ ಆವೃತ್ತಿಯ ಐದನೇ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡದ ವಿರುದ್ಧ ಮೈಸೂರು ವಾರಿಯರ್ಸ್ ಏಳು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಬಳ್ಳಾರಿ ಟಸ್ಕರ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತ್ತು. ಸುಲಭದ ಗುರಿ ಬೆನ್ನತ್ತಿದ ಮೈಸೂರು ವಾರಿಯರ್ಸ್ ಮೂರನೇ ಓವರ್ನಲ್ಲಿ ಅರ್ಜುನ್ ಹೊಯ್ಸಳ ವಿಕೆಟ್ ಕಳೆದುಕೊಂಡಿತು.
ಆದರೆ, ಎರಡನೆಯ ವಿಕೆಟ್ಗೆ ಜತೆಗೂಡಿದ ರಾಜು ಭಟ್ಕಳ್ ಮತ್ತು ಅಮಿತ್ ವರ್ಮಾ, ಬಳ್ಳಾರಿ ಬೌಲರ್ಗಳನ್ನು ಬೆಂಡೆತ್ತಿದರು.
ಇಬ್ಬರೂ 91 ರನ್ ಕಲೆಹಾಕಿ ಮೈಸೂರಿನ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಬಳಿಕ ರಾಜು ಮತ್ತು ಅಮಿತ್ ಕಡಿಮೆ ರನ್ ಅಂತರದಲ್ಲಿ ವಿಕೆಟ್ ಒಪ್ಪಿಸಿದರೂ ಏಳು ಎಸೆತಗಳು ಇರುವಂತೆಯೇ ಶೋಯೆಬ್ ಮ್ಯಾನೇಜರ್ ಮತ್ತು ಕೆ. ಸಿದ್ಧಾರ್ಥ್ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದರು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಬಳ್ಳಾರಿ ಟಸ್ಕರ್ಸ್ ತಂಡದ ಆರಂಭಿಕ ಸ್ವಪ್ನಿಲ್ ಯಳವೆ 6 (10) ನಾಯಕ ಜೆ. ಸುಚಿತ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ರೋಹನ್ ಕದಂ ಮತ್ತು ದೇವದತ್ ಪಡಿಕ್ಕಲ್ ಹತ್ತು ಓವರ್ಗಳಲ್ಲಿ ಎರಡನೆಯ ವಿಕೆಟ್ಗೆ 92 ರನ್ಗಳನ್ನು ಸೇರಿಸಿದರು.
ಆದರೆ, 59 (43) ರನ್ ಗಳಿಸಿದ್ದ ರೋಹನ್ ಕದಂ ಔಟಾದ ನಂತರ ತಂಡ ಪತನದ ಹಾದಿ ಹಿಡಿಯಿತು. ದೇವದತ್ ಕೂಡ 60 (42) ವಿಕೆಟ್ ಒಪ್ಪಿಸಿದರು.
ವೇಗಿ ವೈಶಾಖ್ ವಿಜಯಕುಮಾರ್ ಅವರ ದಾಳಿಗೆ ಕಂಗೆಟ್ಟ ಸಿ.ಎಂ. ಗೌತಮ್ ಪಡೆ ರನ್ ಗಳಿಸಲು ಪರದಾಡಿತು. ವೈಶಾಖ್ ನಾಲ್ಕು ಓವರ್ಗಳಲ್ಲಿ 20 ರನ್ ನೀಡಿ ನಾಲ್ಕು ವಿಕೆಟ್ ಪಡೆದು ಬಳ್ಳಾರಿಯ ಆರ್ಭಟಕ್ಕೆ ಕಡಿವಾಣ ಹಾಕಿದರು.
ಜೆ ಸುಚಿತ್ 20 ನೀಡಿ 2 ವಿಕೆಟ್ ಪಡೆದರೆ, ಪ್ರತೀಕ್ ಜೈನ್ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಬಳ್ಳಾರಿ ಟಸ್ಕರ್ಸ್: 145/8 (20) ರೋಹನ್ ಕದಂ 59, ದೇವದತ್ ಪಡಿಕ್ಕಲ್ 60, ವೈಶಾಖ್ ವಿಜಯಕುಮಾರ್ 20/4, ಜೆ. ಸುಚಿತ್ 20/2, ಪ್ರತೀಕ್ ಜೈನ್ 22/1
ಮೈಸೂರು ವಾರಿಯರ್ಸ್: 147/3 (18.5) ರಾಜು ಭಟ್ಕಳ 48, ಅಮಿತ್ ವರ್ಮಾ 59, ಅಬ್ರಾರ್ ಖಾಜಿ 20/2, ಎಸ್ ಅಕ್ಷಯ್ 12/1
ಫಲಿತಾಂಶ: ಮೈಸೂರು ವಾರಿಯರ್ಸ್ ತಂಡಕ್ಕೆ ಏಳು ವಿಕೆಟ್ ಜಯ
ಪಂದ್ಯಶ್ರೇಷ್ಠ: ಅಮಿತ್ ವರ್ಮಾ