ಬುಧವಾರ, ಜುಲೈ 19ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಬಹು ನಿರೀಕ್ಷಿತ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಈ ಬಾರಿಯ ಏಷ್ಯಾ ಕಪ್ ಪಂದ್ಯಾವಳಿಯು ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆಯೋಜನೆಯಾಗಲಿದೆ. ಆಗಸ್ಟ್ 30ರಂದು ಪಾಕಿಸ್ತಾನ ಮುಲ್ತಾನ್ನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದರೆ, ಫೈನಲ್ ಪಂದ್ಯ ಸೆಪ್ಟಂಬರ್ 17ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ.
ಅಚ್ಚರಿಯ ಬೆಳವಣಿಗೆಯಲ್ಲಿ ಏಷ್ಯಾ ಕಪ್ ವೇಳಾಪಟ್ಟಿಯು ಆಟಗಾರರ ಯೋಗಕ್ಷೇಮದ ಬಗ್ಗೆ ಆತಂಕವನ್ನು ಹುಟ್ಟುಹಾಕಿದೆ. ಪಂದ್ಯಾವಳಿಯ ವೇಳಾಪಟ್ಟಿಯಲ್ಲಿ ಪಾಕಿಸ್ತಾನ ತಂಡವನ್ನು ನಿರ್ಲಕ್ಷಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯನ್ನು ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ತೀವ್ರವಾಗಿ ಟೀಕಿಸಿದ್ದಾರೆ.

ಏಷ್ಯಾ ಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿದ್ದು, ಇದೀಗ ವಿವಾದಾತ್ಮಕ ವೇಳಾಪಟ್ಟಿಯಿಂದಾಗಿ ಗಮನ ಸೆಳೆದಿದೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಆದರೆ ಪಾಕಿಸ್ತಾನ ತಂಡದ ಪ್ರವಾಸವು ಟೀಕಿಗೆ ಗುರಿಯಾಗಿದೆ.
ಬಿಡುಗಡೆಯಾದ ವೇಳಾಪಟ್ಟಿಯ ಪ್ರಕಾರ, ಎ ಗುಂಪಿನಲ್ಲಿ ಪಾಕಿಸ್ತಾನ ತಂಡದ ಉದ್ಘಾಟನಾ ಪಂದ್ಯವು ಮುಲ್ತಾನ್ನಲ್ಲಿ ನಡೆಯಲಿದೆ. ನಂತರ ಕ್ಯಾಂಡಿಯಲ್ಲಿ ಭಾರತ ತಂಡದ ವಿರುದ್ಧ ಪಾಕಿಸ್ತಾನ ತಂಡ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಶ್ರೀಲಂಕಾಕ್ಕೆ ತ್ವರಿತ ಪ್ರಯಾಣ ಮಾಡಬೇಕಿದೆ. ಏಕೆಂದರೆ, ಎರಡು ಪಂದ್ಯಗಳ ನಡುವೆ ಕೇವಲ ಎರಡು ದಿನಗಳ ಅಂತರವಿದೆ.
ನಂತರ, ಪಾಕಿಸ್ತಾನವು ಸೂಪರ್ 4 ಹಂತಕ್ಕೆ ಅರ್ಹತೆ ಪಡೆದರೆ, ಪಾಕಿಸ್ತಾನ ತಂಡ ಮತ್ತೊಮ್ಮೆ ಶ್ರೀಲಂಕಾಕ್ಕೆ ಹಿಂತಿರುಗುವ ಮೊದಲು ಪಂದ್ಯಕ್ಕಾಗಿ ತವರು ನೆಲಕ್ಕೆ ಮರಳಬೇಕಿದೆ.

ಹೀಗಾಗಿ ಸಲ್ಮಾನ್ ಬಟ್ ವೇಳಾಪಟ್ಟಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದು, ಪಾಕಿಸ್ತಾನ ತಂಡಕ್ಕೆ ವಿಶ್ರಾಂತಿ ಮತ್ತು ಸಾಕಷ್ಟು ತಯಾರಿಯ ಕೊರತೆಯನ್ನು ಒತ್ತಿ ಹೇಳಿದ್ದಾರೆ.
ಶ್ರೀಲಂಕಾದ ವೇಳಾಪಟ್ಟಿಗೆ ಹೋಲಿಸಿದರೆ ಪಾಕಿಸ್ತಾನ ತಂಡದ ವೇಳಾಪಟ್ಟಿಯ ಸಂಪೂರ್ಣ ಅಸಮಾನತೆಯನ್ನು ಸಲ್ಮಾನ್ ಬಟ್ ಟೀಕಿಸಿದರು. ಶ್ರೀಲಂಕಾ ತಂಡ ತಮ್ಮ ಎರಡನೇ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸುವಾಗ ಪಂದ್ಯಗಳ ನಡುವೆ ಹೆಚ್ಚು ಸಮಂಜಸವಾದ 4-5 ದಿನಗಳ ಮಧ್ಯಂತರವನ್ನು ಹೊಂದಿದೆ.
"ಇದು ತುಂಬಾ ವಿಚಿತ್ರವಾದ ವೇಳಾಪಟ್ಟಿ. ಪಾಕಿಸ್ತಾನ ತನ್ನ ಮೊದಲ ಪಂದ್ಯವನ್ನು ಮುಲ್ತಾನ್ನಲ್ಲಿ ಆಡುತ್ತಿದೆ. ನಂತರ ಪಾಕಿಸ್ತಾನ ತಂಡ ತನ್ನ ಎರಡನೇ ಪಂದ್ಯಕ್ಕಾಗಿ ಶ್ರೀಲಂಕಾಕ್ಕೆ ಪ್ರಯಾಣಿಸುತ್ತಾರೆ".
"ಮತ್ತೊಂದೆಡೆ, ಶ್ರೀಲಂಕಾ ತನ್ನ ಮೊದಲ ಪಂದ್ಯವನ್ನು ತಮ್ಮ ತವರಿನಲ್ಲಿ ಆಡಲಿದೆ ಮತ್ತು ತಮ್ಮ ಎರಡನೇ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸುವಾಗ 4-5 ದಿನಗಳ ಅಂತರವನ್ನು ಹೊಂದಿದ್ದಾರೆ. ಮೂಲತಃ ಆತಿಥೇಯ ರಾಷ್ಟ್ರವಾದ ಪಾಕಿಸ್ತಾನ ಕೇವಲ ಎರಡು ದಿನಗಳ ಅಂತರ ಪಡೆದುಕೊಂಡಿದೆ. ಪಿಸಿಬಿ ನಮ್ಮ ಆಟಗಾರರ ಬಗ್ಗೆ ಎಂದಿಗೂ ಕಾಳಜಿ ವಹಿಸಲಿಲ್ಲ," ಎಂದು ಸಲ್ಮಾನ್ ಬಟ್ ಕಿಡಿಕಾರಿದ್ದಾರೆ.
ಇನ್ನು ಗುಂಪು ಹಂತದ ಫಲಿತಾಂಶಗಳು ಪಂದ್ಯಾವಳಿಯ ಶ್ರೇಯಾಂಕ ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಜಯ್ ಶಾ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನ ಮತ್ತು ಭಾರತ ತಂಡಗಳು ಹೇಗೆ ಪ್ರದರ್ಶನ ನೀಡಿದರೂ, ಉಭಯ ತಂಡಗಳು ಕ್ರಮವಾಗಿ ಎ1 ಮತ್ತು ಎ2 ಶ್ರೇಣಿಯನ್ನು ಮುಂದುವರಿಸುತ್ತವೆ. ಮುಂದಿನ ಹಂತಕ್ಕೆ ಮುನ್ನಡೆಯಲು ಸಾಧ್ಯವಾಗದಿದ್ದಲ್ಲಿ ಎರಡು ತಂಡಗಳಲ್ಲಿ ಯಾವುದಾದರೂ ಸ್ಥಾನವನ್ನು ಪಡೆಯಲು ನೇಪಾಳ ತಂಡ ಮುಂದಾಗುತ್ತದೆ.
ಅದೇ ರೀತಿ ಬಿ ಗುಂಪಿನಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಬಿ1 ಮತ್ತು ಬಿ2 ಆಗಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುತ್ತವೆ. ಈ ತಂಡಗಳಲ್ಲಿ ಯಾವುದಾದರೂ ಒಂದು ತಂಡವು ಸೂಪರ್ 4ಗೆ ಮುನ್ನಡೆಯಲು ವಿಫಲವಾದರೆ, ಅಫ್ಘಾನಿಸ್ತಾನ ಬದಲಿ ತಂಡವಾಗಿದೆ.
ಸಲ್ಮಾನ್ ಬಟ್ ಅವರ ಬಹಿರಂಗ ಟೀಕೆಯು ಹಲವಾರು ಕ್ರಿಕೆಟ್ ಪ್ರೇಮಿಗಳಿಂದ ಹಂಚಿಕೊಂಡ ಆತಂಕವನ್ನು ಪ್ರತಿಬಿಂಬಿಸುತ್ತದೆ. ಪಿಸಿಬಿ ತನ್ನ ಆಟಗಾರರ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕು ಮತ್ತು ಹೆಚ್ಚು ಸಮತೋಲಿತ ಮತ್ತು ಆಟಗಾರ ಸ್ನೇಹಿ ವೇಳಾಪಟ್ಟಿಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.