ಭಾರತ ವಿರುದ್ಧದ 17 ವರ್ಷಗಳ ಹಿಂದಿನ ಪಂದ್ಯ ನೆನೆದು ಮರುಕ ಪಟ್ಟ ಅಖ್ತರ್!

ಲಾಹೋರ್, ಮೇ 18: ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಡಿದ್ದ ಸುಮಾರು 17 ವರ್ಷಗಳ ಹಿಂದಿನ ಪಂದ್ಯವನ್ನು ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಸ್ಮರಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 2003ರಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ ಪಂದ್ಯವಿದು. ಆವತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಅಖ್ತರ್ ಎಸೆತಕ್ಕೆ ವಿಕೆಟ್ ಒಪ್ಪಿಸಿದ್ದರು. ಹಲೋ ಲೈವ್ನಲ್ಲಿ ಕಾಣಸಿಕೊಂಡಿದ್ದ ಅಖ್ತರ್, 2003ರ ಪಂದ್ಯದ ಬಗ್ಗೆಯಲ್ಲದೆ ಇನ್ನೊಂದಿಷ್ಟು ವಿಚಾರಗಳ ಕುರಿತೂ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
2003ರ ಪಂದ್ಯದ ಕ್ಷಣ ನೆನೆದ ಅಖ್ತರ್, 'ಆವತ್ತು ತೆಂಡೂಲ್ಕರ್ 98ಕ್ಕೆ ನನ್ನ ಎಸೆತಕ್ಕೆ ಔಟ್ ಆದರು. ಆ ವೇಳೆ ನನಗೆ ತುಂಬಾ ಬೇಸರವಾಗಿತ್ತು. ಸಚಿನ್ ಆವತ್ತು ನನ್ನ ಬೌನ್ಸರ್ಗೆ ವಿಕೆಟ್ ಬಲಿ ನೀಡದಿದ್ದರೆ ಅವರು ಶತಕ ಸಿಡಿಸುತ್ತಿದ್ದರು,' ಎಂದಿದ್ದಾರೆ. ಸಚಿನ್ 98, ವೀರೇಂದ್ರ ಸೆಹ್ವಾಗ್ 21, ಮೊಹಮ್ಮದ್ ಕೈಫ್ 35, ರಾಹುಲ್ ದ್ರಾವಿಡ್ ಅಜೇಯ 44, ಯುವರಾಜ್ ಸಿಂಗ್ ಅಜೇಯ 50 ರನ್ ಕೊಡುಗೆಯೊಂದಿಗೆ ಭಾರತ ಅಂದು 6 ವಿಕೆಟ್ನಿಂದ ಗೆದ್ದಿತ್ತು.
ಮಾತು ಮುಂದುವರೆಸಿದ ಅಖ್ತರ್, 'ಸಚಿನ್ ತೆಂಡೂಲ್ಕರ್ ನನ್ನ ಎಸೆತದಲ್ಲಿ ಸಿಕ್ಸರ್ ಸಿಡಿಸಿದ್ದರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ನಾನು ನನ್ನ ಮೊದಲ ಎಸೆತದಲ್ಲಿಯೇ ತೆಂಡೂಲ್ಕರ್ ಅವರನ್ನು ಔಟ್ ಮಾಡಿದ್ದೆ. ಅದರ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ,' ಎಂದರಲ್ಲದೆ ಪ್ರಮುಖ ವಿಚಾರಗಳ ಬಗ್ಗೆ ತುಟಿ ಬಿಚ್ಚಿದ್ದಾರೆ.

ವಧುವೇ ಇಲ್ಲದೆ ಮದುವೆಯಾದಂತೆ
ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಆಡುವ ಬಗ್ಗೆ ಮಾತನಾಡಿದ ಅಖ್ತರ್, 'ಪ್ರೇಕ್ಷಕರಿಲ್ಲದೆ ಆಡುವುದನ್ನು ಯಾರೂ ಬಯಸುವುದಿಲ್ಲ. ಆದರೆ ಕರೋನ ಕಾರಣ ಎಲ್ಲವೂ ಬದಲಾಗಿದೆ. ಪ್ರೇಕ್ಷಕರು ಇಲ್ಲದೆ ಕ್ರಿಕೆಟ್ ಆಡುವುದು ಎಂದರೆ ಎಂದರೆ ವಧುವೇ ಇಲ್ಲದೆ ಮದುವೆ ಮಾಡಿದಂತೆ. ಪ್ರೇಕ್ಷಕರು ಆಟಗಾರರನ್ನು ಸ್ಟಾರ್ ಆಗಿ ಬದಲಾಯಿಸುತ್ತಾರೆ. ಪ್ರೇಕ್ಷಕರಿಲ್ಲದೆ ಆಡುವುದನ್ನು ಇದುವರೆಗೂ ಕಂಡಿಲ್ಲ,' ಎಂದು ಶೋಯೆಬ್ ಅಕ್ತರ್ ಹೇಳಿದ್ದಾರೆ.

ಟಿ20ಗಿಂತ ಟೆಸ್ಟ್ಗೆ ಆದ್ಯತೆ ನೀಡಿ
'ಈಗ ಕ್ರಿಕೆಟ್ ಬಹಳ ಹೆಚ್ಚಾಗಿದೆ. ಪ್ರವಾಸ ಕೂಡ ಬಹಳ ಹೆಚ್ಚಾಗಿದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವ ಅಗತ್ಯ ಕೂಡ ಜಾಸ್ತಿ ಆಗಿದೆ. ಮೊದಲಿನ ಹಾಗೆ ಇಲ್ಲ. ಈಗಿನ ಬೇಡಿಕೆಗೆ ಸಂಬಂಧಿಸಿದಂತೆ ಮುಂದುವರಿದ ಜಿಮ್ ಟ್ರೈನಿಂಗ್ ಬಹಳ ಅಗತ್ಯವಿದೆ. ಟಿ20 ಕಡಿಮೆ ಮಾಡಿ, ಟೆಸ್ಟ್ ಜಾಸ್ತಿ ಮಾಡಿ, ಟೆಸ್ಟ್ ಉಳಿಸಬೇಕಿದೆ,' ಎಂದು ಅಕ್ತರ್ ಐಸಿಸಿ ಬಳಿ ಮನವಿ ಮಾಡಿದರು.

ಬಾಬರ್ ಅಝಾಮ್ ಬಗ್ಗೆ ಮಾತು
'ಬ್ರೆಟ್ ಲೀ ನನಗಿಂತ ಉತ್ತಮ ಆಟಗಾರ, ಉತ್ತಮ ಶರೀರ ಹೊಂದಿದ್ದಾನೆ. ಆತ ನನ್ನ ತಂಡದಲ್ಲಿ ಇದ್ದಿದ್ದರೆ ಬಹಳ ಹೊಡೆತ ತಿನ್ನುತ್ತಿದ್ದ. ಬಾಬರ್ ಅಝಾಮ್ ರೂಪದಲ್ಲಿ ಪಾಕಿಸ್ತಾನಕ್ಕೆ ಉತ್ತಮ ಆಟಗಾರ ಸಿಕ್ಕಿದ್ದಾನೆ. ಪಾಕಿಸ್ತಾನಕ್ಕೆ ಈಗ ಉತ್ತಮ ನಾಯಕನ ಅಗತ್ಯವಿದೆ. ಎಲ್ಲಿಯವರೆಗೆ ಬೌಲರ್ ತಂಡದ ನಾಯಕರಾಗುವುದಿಲ್ಲವೋ ಅಲ್ಲಿಯ ತನಕ ತಂಡ ಗೆಲ್ಲುವುದಿಲ್ಲ. ಬಾಬರ್ ಯುವ ಆಟಗಾರ. ಆತನಿಗೆ ನಾಯಕತ್ವ ನೀಡಿರುವುದು ಉತ್ತಮ ಆಯ್ಕೆ' ಎಂದು ಅಖ್ತರ್ ನುಡಿದ್ದಾರೆ.

ಸಚಿನ್, ದ್ರಾವಿಡ್, ವಿಶ್ವನಾಥ್ ನೆನಪು
ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್, ಗುಂಡಪ್ಪ ವಿಶ್ವನಾಥ್ ಇವರೆಲ್ಲ ಕ್ರಿಕೆಟ್ ಅಂಗಳದಲ್ಲಿ ಮಿಂಚಿ ಮರೆಯಾಗಿದ್ದಾರೆ. ಇಂತಹ ಆಟಗಾರರು ಮತ್ತೆ ವಾಪಾಸ್ ಬರಲು ಸಾಧ್ಯವಿಲ್ಲ. ಸಚಿನ್ ಬಹಳ ದೊಡ್ಡ ಯುಗದಲ್ಲಿ ಆಡಿದವರು. ಆ ವೇಳೆ ಬೌಲರ್ ಗಳು ಕೂಡ ಭರ್ಜರಿ ಇದ್ದರು. ಆದರೆ ಈಗಿನ ಬೌಲರ್ ಹಾಗಿಲ್ಲ. ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಜೋ ರೂಟ್, ಕೇನ್ ವಿಲಿಯಮ್ಸನ್ ಈಗಿನ ಮಹಾನ್ ಆಟಗಾರರು,' ಎಂದು ಅಖ್ತರ್ ಶ್ಲಾಘಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications