
ಅಂದು ಆಗಿದ್ದೇನು?
ಅದು ಕಳೆದ ಆಗಸ್ಟ್ 7ನೇ ತಾರೀಕು. ಒಲಿಂಪಿಕ್ಸ್ನಲ್ಲಿ ಭಾರತಕ್ಕಿದ್ದ ಕೊನೆಯ ಭರವಸೆಯಂತಿದ್ದರು ನೀರಜ್ ಚೋಪ್ರಾ. ಅರ್ಹತಾ ಸುತ್ತಿನಲ್ಲಿಯೇ ಉಳಿದೆಲ್ಲಾ ಸ್ಪರ್ಧಿಗಳಿಗಿಂತ ದೂರಕ್ಕೆ ಜಾವೆಲಿನ್ ಎಸೆದು ಫೈನಲ್ಗೆ ನೇರವಾಗಿ ಅರ್ಹತೆ ಪಡೆದಿದ್ದ ನೀರಜ್ ಚೋಪ್ರಾ ಮೇಲೆ ಎಲ್ಲರ ಕಣ್ಣಿತ್ತು. ಕೋಟ್ಯಂತರ ಭಾರತೀಯರ ಕನಸನ್ನು ನೀರಜ್ ಅಂದು ನನಸು ಮಾಡಿದ್ದರು. ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಎಸೆತದಲ್ಲಿ 87.58 ಮೀಟರ್ ಸಾಧನೆಯೊಂದಿಗೆ ದೇಶಕ್ಕೆ ಬಂಗಾರದ ಮೆರಗು ತಂದಿದ್ದರು. ಈ ಸಂದರ್ಭದಲ್ಲಿ ಕೋಚ್ ಕಾಶಿನಾಥ್ ಮನೆಯಲ್ಲಿ ಸಂಭ್ರಮ ಮತ್ತಷ್ಟು ಹೆಚ್ಚಿತ್ತು. ನನ್ನ ಕನಸನ್ನು ನನಸು ಮಾಡಿಬಿಟ್ಟನಲ್ಲಾ ಎಂದು ಬೀಗಿದ್ದರು ಕಾಶಿನಾಥ್.

ಚಿನ್ನದ ಸಾಧನೆಯ ಹಿಂದಿನ ಕನ್ನಡಿಗನ ಶ್ರಮಕ್ಕೆ ಕನ್ನಡ ಜನತೆಯಿಂದ ಗೌರವ
ಇನ್ನು ನೀರಜ್ ಚೋಪ್ರ ಚಿನ್ನದ ಪದಕದ ಸಾಧನೆ ಮಾಡುತ್ತಲೇ ಅವರ ಪರಿಶ್ರಮದ ಹಿಂದೆ ಕನ್ನಡಿಗ ಕಾಶಿನಾಥ್ ಪರಿಶ್ರಮವೂ ಇದೆ ಎಂಬ ಸಂಗತಿ ರಾಜ್ಯಾದ್ಯಂತ ಪಸರಿಸಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಈ ವಿಚಾರವಾಗಿ ಕೋಚ್ ಕಾಶಿನಾಥ್ ಬಗ್ಗೆ ಸಹಜವಾಗಿಯೇ ಹೆಮ್ಮೆ ಪಟ್ಟಿದ್ದರು. ಇದಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರ ಕೋಚ್ ಕಾಶಿನಾಥ್ ಅವರಿಗೆ 10 ಲಕ್ಷ ರೂಪಾಯಿ ನಗದು ಪುರಸ್ಕಾರ ಘೋಷಿಸಿತ್ತು.

ಆರಂಭವಾಯಿತು ಆಪಾದನೆಯ ಸುರಿಮಳೆ
ನೀರಜ್ ಚೋಪ್ರಾ ಸಾಧನೆಯಿಂದ ಹೆಮ್ಮೆಪಡುತ್ತಿದ್ದ ಕೋಚ್ ಕಾಶಿನಾಥ್ ಅವರಿಗೆ ಈ ಸಂಭ್ರಮದಲ್ಲಿದ್ದಾಗಲೇ ಅನಿರೀಕ್ಷಿತ ಆಪಾದನೆಯೊಂದು ಕೇಳಿಬಂದಿತ್ತು. ನೀರಜ್ಗೆ ಕಾಶಿನಾಥ್ ಕೋಚಿಂಗ್ ನೀಡೇಯಿಲ್ಲ ಎಂಬ ಆಪಾದನೆ ಕೇಳಿ ಬಂದಿತ್ತು. ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟೀಕೆಯನ್ನೂ ಮಾಡಲು ಆರಂಭಿಸಿದ್ದರು. ಈ ಮಾತುಗಳಿಗೆ ಗೆ ಕಾಶಿನಾಥ್ ಕುಸಿದು ಹೋಗಿದ್ದರು.

ಕೋಚ್ ಕಾಶಿನಾಥ್ ನಾಯ್ಕೆ ಮನೆಗೆ ನೀರಜ್ ಭೇಟಿ
ಕಾಶೀನಾಥ್ ನಾಯ್ಕ್ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಹೇಳಿಕೆ ಕುರಿತು 'ಮೈಖೇಲ್ ಕನ್ನಡ' ಮಾತನಾಡಿದಾಗ ಕಾಶೀನಾಥ್ ಪ್ರತಿಕ್ರಿಯಿಸಿದ್ದರು. "ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದ ಭಾರತೀಯ ಅಥ್ಲೀಟ್ ಒಬ್ಬರ ಹೆಸರೇ ಗೊತ್ತಿಲ್ಲ ಅನ್ನುವುದಾದರೆ ಅವರು (ಅದಿಲ್ಲೆ ಸುಮರಿವಾಲ್ಲಾ) ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರು ಹೇಗಾದರೋ ಅರ್ಥವಾಗುತ್ತಿಲ್ಲ. ಭಾರತದ ಕೋಚ್ಗಳ ಹೆಸರು ಕೇಳಿ ಬರಬಾರದು ಅನ್ನೋ ಹುನ್ನಾರವಿದು. ವಿದೇಶಿ ಕೋಚ್ಗಳಿಗೇ ಎಲ್ಲಾ ಶ್ರೇಯಸ್ಸು ಸಲ್ಲಲಿ ಎಂದು ಅದಿಲ್ಲೆ ಸುಮರಿವಾಲ್ಲಾ ಹೀಗೆ ಮಾಡುತ್ತಿರಬಹುದು. ಈಗಲೂ ನಾನು ನೀರಜ್ಗೆ ಕೋಚ್ ಆಗಿದ್ದೇನೆ. ನೀರಜ್ ಸದ್ಯ ವಿದೇಶದಲ್ಲಿ ಅಥವಾ ಬೇರೆ ಕೋಚ್ಗಳ ಜೊತೆ ಕೋಚಿಂಗ್ ಪಡೆಯುತ್ತಿದ್ದಾರೆ. ಆದರೂ ಅವರಿಗೆ ನಾನೂ ಕೂಡ ಈಗಲೂ ಕೋಚ್ ಆಗಿದ್ದೇನೆ. ಅವರಿಗೆ ಅಗತ್ಯ ನೆರವು ನೀಡುತ್ತಿದ್ದೇನೆ. ಆದರೂ ಸುಮರಿವಾಲ್ಲಾ ಹೊಟ್ಟೆಕಿಚ್ಚಿನಿಂದ ಹೀಗೆ ಹೇಳುತ್ತಿರಬಹುದು," ಎಂದು ಕಾಶೀನಾಥ್ ಬೇಸರದಿಂದ ನುಡಿದಿದ್ದರು.

ಕಾಮನ್ವೆಲ್ತ್ಗೇಮ್ಸ್ನಲ್ಲಿ ಪದಕ ಗೆದ್ದಿರುವ ಸಾಧಕ ಕಾಶಿನಾಥ್
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಕಾಶಿನಾಥ್ ನೀರಜ್ ಚೋಪ್ರಾಗೆ ಕೋಚಿಂಗ್ ಮಾಡಿದ ಹೊರತಾಗಿಯೂ ಸಾಧನೆ ಮಾಡಿದ ಕ್ರೀಡಾಪಟು. 2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು ಈ ಕಾಶಿನಾಥ್. ಈ ಮೂಲಕ ಜಾವೆಲಿನ್ ಎಸೆತದಲ್ಲಿ ಭಾರತ ಮೊದಲ ಪದಕವನ್ನು ಗೆಲ್ಲುವಂತೆ ಮಾಡಿದ್ದರು. ಇಷ್ಟು ಮಾತ್ರವಲ್ಲದೆ ದಕ್ಷಿಣ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ, ಏಷ್ಯನ್ ಆಲ್ ಸ್ಟಾರ್ ಚಾಂಪಿಯನ್ಶಿಪ್ ನಲ್ಲಿ ಬೆಳ್ಳಿ, ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಕ್ರೀಡಾಕೂಟದ ಜಾವೆಲಿನ್ನಲ್ಲಿ ಬೆಳ್ಳಿ, ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಕಂಚಿನ ಪದಕ, 14 ಬಾರಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಚಿನ್ನ, ರಾಷ್ಟ್ರೀಯ ಮಟ್ಟದಲ್ಲಿ 5 ಬಾರಿ ಬೆಳ್ಳಿ, 2012ರಲ್ಲಿ ಏಕಲವ್ಯ ಪ್ರಶಸ್ತಿ, 2011ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಹೆಮ್ಮೆಯ ಸಾಧಕ. ಆದರೆ ಈ ಎಲ್ಲಾ ಸಾಧನೆಗಳು ಏನೇನೂ ಅಲ್ಲ ಎಂಬಂತೆ ಬಿಂಬಿಸುವ ಪ್ರಯತ್ನ ವಿಫಲವಾಗಿದೆ. ಇಷ್ಟೆಲ್ಲಾ ಸಾಧನೆಗಳು ಕಣ್ಣ ಮುಂದಿದ್ದರೂ ಮಾಧ್ಯಮಗಳೇ ಸೃಷ್ಟಿಸಿದ್ದ 'ನಕಲಿ ಸಾಧಕ'ನಿಗೆ ಕಾಶಿನಾಥ್ ಅವರನ್ನು ಕೆಲ ಮಾಧ್ಯಮಗಳೇ ಹೋಲಿಸಿದ್ದು ದೊಡ್ಡ ದುರಂತ.


Click it and Unblock the Notifications












