
ಮಹೇಂದ್ರ ಸಿಂಗ್ ಧೋನಿ ವಿಶ್ವದ ಹಾಗೂ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ಎಂಎಸ್ ಧೋನಿ ವೃತ್ತಿಜೀವನದ ಅವಧಿಯಲ್ಲಿ ಎಲ್ಲಾ ಮೂರು ಐಸಿಸಿ ಪಂದ್ಯಾವಳಿಗಳಲ್ಲಿ ಭಾರತಕ್ಕೆ ಟ್ರೋಫಿ ಗೆದ್ದು ಕೊಟ್ಟ ಏಕೈಕ ನಾಯಕನಾಗಿದ್ದಾರೆ. ಇದು ವಿಶ್ವದ ಯಾವುದೇ ತಂಡದ ನಾಯಕನಿಗೆ ಸಾಟಿಯಿಲ್ಲದ ಹೆಗ್ಗುರುತಾಗಿದೆ.
ಐಸಿಸಿ ಟ್ರೋಫಿ ಮಾತ್ರವಲ್ಲದೆ, ಎಂಎಸ್ ಧೋನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಗಮನಾರ್ಹ ದಾಖಲೆಯನ್ನು ಹೊಂದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕಾಗಿ ಮುನ್ನಡೆಸಿದ ಹೆಗ್ಗಳಿಕೆ ಅವರದು.
ನಾಯಕನಾಗಿ ಎಂಎಸ್ ಧೋನಿಯ ಯಶಸ್ಸಿಗೆ ಒಂದು ಕಾರಣವೆಂದರೆ, ಮೈದಾನದಲ್ಲಿ ಶಾಂತವಾಗಿರುವುದು, ಆಟಗಾರರನ್ನು ಬೆಂಬಲಿಸುವುದು ಮತ್ತು ಯುವ ಆಟಗಾರರಿಗೆ ಮಿಂಚುವ ಅವಕಾಶವನ್ನು ನೀಡುವ ಚಾಣಾಕ್ಷತನ.
ಇದೀಗ ಸಿಎಸ್ಕೆ ಮಾಜಿ ಸಹ ಆಟಗಾರ ಜಾರ್ಜ್ ಬೈಲಿ ಹೇಳಿಕೆಯಂತೆ, ಎಂಎಸ್ ಧೋನಿ ತಮ್ಮ ಆಟಗಾರರೊಂದಿಗೆ ಸಂಪರ್ಕ ಸಾಧಿಸುವ ಮತ್ತು ಯಾವುದೇ ಒತ್ತಡಗಳನ್ನು ನಿಭಾಯಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದ್ದಾರೆ.

ಆಟಗಾರರಿಗಾಗಿ ಎಂಎಸ್ ಧೋನಿ ತೆರೆದ ಬಾಗಿಲು ನೀತಿಯ ಬಗ್ಗೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕನಾಗಿರುವ ಜಾರ್ಜ್ ಬೈಲಿ ಮಾತನಾಡಿದ್ದು, ಎಂಎಸ್ ಧೋನಿ ತಮ್ಮ ಕೋಣೆಯಲ್ಲಿ ಹುಕ್ಕಾವನ್ನು ಇಟ್ಟುಕೊಂಡಿರುತ್ತಾರೆ ಎಂಬ ಶಾಕಿಂಗ್ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
"ಎಂಎಸ್ ಧೋನಿ ಹುಕ್ಕಾವನ್ನು ಸೇದಲು ಇಷ್ಟಪಡುತ್ತಾರೆ. ಆದ್ದರಿಂದ, ಅವರು ಆಗಾಗ ತನ್ನ ಕೋಣೆಯಲ್ಲಿ ಅದನ್ನು ಇಟ್ಟುಕೊಂಡಿರುತ್ತಾರೆ ಮತ್ತು ಬಳಸುತ್ತಾರೆ. ಆತನ ಕೋಣೆ ತೆರೆದ ಬಾಗಿಲು ನೀತಿಯಾಗಿದೆ. ಯಾರು ಬೇಕಾದರೂ ಅಲ್ಲಿಗೆ ಹೋಗಬಹುದು ಮತ್ತು ಅಲ್ಲಿ ಕಿರಿಯ ಆಟಗಾರರೊಂದಿಗೆ ಸಮಾಲೋಚನೆ ನಡೆಸುವುದನ್ನು ಕಾಣಬಹುದು," ಎಂದು ಜಾರ್ಜ್ ಬೈಲಿ Cricket.com.au ಗೆ ತಿಳಿಸಿದ್ದಾರೆ.
Legends League Cricket 2023: ಪಂದ್ಯಗಳ ವೇಳಾಪಟ್ಟಿ, ಪೂರ್ಣ ತಂಡಗಳು; ಟಿವಿ, ಲೈವ್ ಸ್ಟ್ರೀಮಿಂಗ್ ವಿವರ
"ನೀವು ಎಂಎಸ್ ಧೋನಿ ಕೋಣೆಯಲ್ಲಿ ತಡರಾತ್ರಿಯಲ್ಲಿಯೂ ಆಟದ ಬಗ್ಗೆ ಮತ್ತು ವಿಭಿನ್ನ ಆಟಗಾರರ ಆಟದ ಬಗ್ಗೆ ಮಾತುಕತೆ ನಡೆಸುವುದನ್ನು ಕಾಣುಬಹುದು. ಕಠಿಣ ಪರಿಸ್ಥಿತಿಗಳನ್ನು ಎದುರಿಸುವುದನ್ನು ಕಲಿಯಲು ಅವರಲ್ಲಿ ಉತ್ತಮ ಮಾರ್ಗಗಳಿವೆ," ಎಂದು ಜಾರ್ಜ್ ಬೈಲಿ ಹೇಳಿದರು.

ಜಾರ್ಜ್ ಬೈಲಿ ಅವರು ಎಂಎಸ್ ಧೋನಿಯೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಮತ್ತು ರೈಸಿಂಗ್ ಪುಣೆ ಸೂಪರ್ಜೈಂಟ್ ತಂಡದ ಪರ ತಲಾ ಒಂದೊಂದು ಸೀಸನ್ ಆಡಿದ್ದಾರೆ.
ಎಂಎಸ್ ಧೋನಿ 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರೂ, ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಬಾರಿಯ ಐಪಿಎಲ್ ಪಂದ್ಯಾವಳಿ ಅವರ ಕೊನೆಯದ್ದಾಗಿರಲಿದೆ.
ಹೀಗಾಗಿ ಅವರ ಲಕ್ಷಾಂತರ ಅಭಿಮಾನಿಗಳು ಐಪಿಎಲ್ ಪಂದ್ಯಾವಳಿ ಆರಂಭಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಮಾರ್ಚ್ 31ರಂದು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.
ಒಟ್ಟಾರೆಯಾಗಿ, ಕ್ರಿಕೆಟ್ನಲ್ಲಿ ನಾಯಕ ಹಾಗೂ ಆಟಗಾರನಾಗಿ ಎಂಎಸ್ ಧೋನಿ ಪರಂಪರೆ ಇನ್ನೂ ಭದ್ರವಾಗಿದೆ. ಧೋನಿಯ ನಾಯಕತ್ವದ ಕೌಶಲ್ಯಗಳು, ಶಾಂತ ಮತ್ತು ಸಂಯೋಜಿತ ಸ್ವಭಾವವು ವಿಶ್ವದಾದ್ಯಂತ ಅನೇಕ ಯುವ ಕ್ರಿಕೆಟಿಗರಿಗೆ ಅವರನ್ನು ಮಾದರಿಯನ್ನಾಗಿ ಮಾಡಿದೆ.