
ಪ್ರಥಮ ಸ್ಥಾನ ಪಡೆದ ಕರ್ನಾಟಕ ರಾಜ್ಯ ತಂಡ ದೇಶಕ್ಕೆ ಕೀರ್ತಿ ತಂದಿತು
ಕ್ರಿಕೆಟ್, ಕಬಡ್ಡಿ ಸೇರಿದಂತೆ ಇತರೆ ಆಟಗಳಲ್ಲಿ ಚಿನ್ನ ಗೆದ್ದರೆ ಅದ್ಧೂರಿ ಸನ್ಮಾನ, ಭಾರೀ ಸ್ವಾಗತ ಕೋರಲಾಗುತ್ತದೆ. ಆದರೆ ದಾವಣಗೆರೆ ಜಿಲ್ಲೆಯ ಇಬ್ಬರು ಯುವತಿಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದರೂ ಕನಿಷ್ಠ ಗೌರವಿಸುವ ಕೆಲಸ ಆಗಿಲ್ಲವೆಂಬುದು ಚಿನ್ನದ ಪದಕ ಸಾಧಕಿಯರಿಗೆ ಬೇಸರ ತರಿಸಿದೆ.
ನೇಪಾಳದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಕರ್ನಾಟಕ ರಾಜ್ಯ ತಂಡ ದೇಶಕ್ಕೆ ಕೀರ್ತಿ ತಂದಿತು. ಈ ತಂಡದ ಗೆಲುವಿನಲ್ಲಿ ದಾವಣಗೆರೆ ಯುವತಿಯರ ಪಾತ್ರ ಅನನ್ಯವಾದದ್ದು. ಆದರೂ ಇವರನ್ನು ಗುರುತಿಸುವ ಕೆಲಸ ಆಗದಿರುವುದು ವಿಪರ್ಯಾಸ.

ಇವರ ಸಾಧನೆ ಎಲ್ಲರೂ ಪ್ರಶಂಸೆಗೂ ಪಾತ್ರವಾಗಿದೆ
ಚಿನ್ನದ ಪದಕ ಗೆದ್ದು ಬಂದರೂ ದಾವಣಗೆರೆ ಜಿಲ್ಲಾಡಳಿತವಾಗಲೀ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳಾಗಲೀ ಸಾಧಕಿಯರನ್ನು ಗೌರವಿಸುವ ಕೆಲಸ ಮಾಡದಿರುವುದು ಈಗ ಆಕ್ರೋಶಕ್ಕೂ ಕಾರಣವಾಗಿದೆ.
ಚಿನ್ನದ ಪದಕ ಪಡೆದು ರಾಜ್ಯಕ್ಕೆ ವಾಪಸ್ ಆದರೂ ಗೌರವ ಸಿಕ್ಕಿಲ್ಲ. ತಾಲೂಕು ಆಡಳಿತ, ಅಧಿಕಾರಿಗಳು ಯಾರೂ ಸಹ ಇವರನ್ನು ಮಾತನಾಡಿಸುವ ಗೋಜಿಗೂ ಹೋಗಿಲ್ಲ. ಬಡತನದಲ್ಲಿ ಹುಟ್ಟಿ ರೈತರ ಮಕ್ಕಳಾದ ಇವರು ಮಾಡಿರುವ ಸಾಧನೆ ಎಲ್ಲರೂ ಪ್ರಶಂಸೆಗೂ ಪಾತ್ರವಾಗಿದೆ. ಆಡಳಿತ ವರ್ಗ ಮಾತ್ರ ಗುರುತಿಸದಿರುವುದು ಇಲ್ಲಿನ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಸ್ವಂತ ಹಣದಲ್ಲಿಯೇ ನೇಪಾಳಕ್ಕೆ ತೆರಳಿದ್ದ 15 ಜನರ ತಂಡ
ರಾಜ್ಯದಿಂದ ನೇಪಾಳದಲ್ಲಿ ಪಂದ್ಯಾವಳಿ ಆಡಲು ಹೋಗುವಾಗ ತಮ್ಮ ಸ್ವಂತ ಹಣದಲ್ಲಿಯೇ ನೇಪಾಳಕ್ಕೆ ತೆರಳಿದ್ದ 15 ಜನರ ತಂಡದ ಜೊತೆ ಸುಜಾತಾ ಹಾಗೂ ರೂಪಾ ಸಹ ಇದ್ದರು. ಕರ್ನಾಟಕದ ತಂಡದಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಳ್ಳಿ ಪ್ರತಿಭೆಗಳು ಪಾಲ್ಗೊಂಡಿದ್ದರು. ನೇಪಾಳಕ್ಕೆ ಹೋಗಲು ಹಣ ಇರಲಿಲ್ಲ. ಆದರೂ ಮನೆಯಲ್ಲಿ ಕಷ್ಟಪಟ್ಟು ಹಣ ಕೊಟ್ಟರು. ಸ್ನೇಹಿತರು ಸಹಕಾರ ನೀಡಿದರು. ಕ್ರೀಡಾ ಇಲಾಖೆ ಅಧಿಕಾರಿಗಳು ನಮ್ಮನ್ನು ಕಡೆಗಣಿಸಿದ್ದಾರೆ ಅಂತ ಅಳಲು ತೋಡಿಕೊಂಡಿದ್ದಾರೆ.
ನಮಗೆ ನೇಪಾಳಕ್ಕೆ ಹೋಗಲು ಸಹಾಯಧನ ಕೇಳಿದರೂ ಕ್ರೀಡಾ ಇಲಾಖೆ ನೀಡಲಿಲ್ಲ. ಸ್ಪೋರ್ಟ್ಸ್ ಕಿಟ್ ಆದರೂ ಕೊಡಿ ಎಂದು ಬೇಡಿದರೂ ನಿಮಗೆ ಕೊಡಲು ಬರುವುದಿಲ್ಲ ಎಂಬ ಉಡಾಫೆ ಮಾತುಗಳನ್ನು ಕ್ರೀಡಾ ಇಲಾಖೆ ಅಧಿಕಾರಿಗಳು ಆಡಿದ್ದರು. ಗೆದ್ದು ಬನ್ನಿ, ಆ ನಂತರ ನೋಡೋಣ ಎಂದಿದ್ದರು ಎಂದು ಚಿನ್ನದ ಪದಕ ವಿಜೇತರಾದ ರೂಪಾ ಹಾಗೂ ಸುಜಾತಾ ಆರೋಪಿಸಿದ್ದಾರೆ.

ಬಡ ಪ್ರತಿಭೆಗಳಿಗೆ ಕ್ರೀಡಾ ಇಲಾಖೆ ಸಹಾಯ ಮಾಡುತ್ತಿಲ್ಲ
ಚಿನ್ನದ ಪದಕ ಪಡೆದು ಮತ್ತೆ ಅಧಿಕಾರಿಗಳ ಮುಂದೆ ನಾವು ಹೋಗಿದ್ದೆವು. ಆದರೆ ಈ ವರ್ಷ ನಿಮಗೆ ಬರುವುದಿಲ್ಲ ಎಂದು ಹೇಳಿ ಕ್ರೀಡಾ ಇಲಾಖೆ ಅಧಿಕಾರಿಗಳು ಕಳುಹಿಸಿದ್ದಾರೆ. ಮುಂದಿನ ಪಂದ್ಯಕ್ಕೆ ನಾವು ಮಲೇಷ್ಯಾಗೆ ಆಯ್ಕೆ ಆಗಿದ್ದೇವೆ. ಅದರೆ ನಮಗೆ ಹೋಗಲು ಹಣವಿಲ್ಲ. ನಾವು ಯಾರನ್ನು ಕೆಳಬೇಕು ಎಂದು ಯುವತಿಯರು ಬೇಸರದಿಂದ ಹೇಳಿದ್ದಾರೆ.
ಮಲೇಷ್ಯಾಕ್ಕೆ ಹೋಗಿ ಗೆದ್ದು ನಮ್ಮ ದೇಶದ ಕೀರ್ತಿ ಹೆಚ್ಚಿಸಬೇಕೆಂಬ ಹಂಬಲ ನಮ್ಮದು. ಬಡ ಕುಟುಂಬದಿಂದ ಬಂದ ಪ್ರತಿಭೆಗಳಿಗೆ ಕ್ರೀಡಾ ಇಲಾಖೆ ಸಹಾಯ ಮಾಡುವಂತೆ ಕ್ರೀಡಾ ಸಚಿವರಿಗೆ ಹಾಗೂ ಕ್ರೀಡಾ ಇಲಾಖೆಗೆ ಯುವತಿಯರು ಮನವಿ ಮಾಡಿದ್ದರು. ಇಷ್ಟೆಲ್ಲಾ ಸಾಧನೆ ಮಾಡಿದ ಸಾಧಕಿಯರ ಬಗ್ಗೆ ಇಷ್ಟೊಂದು ದಿವ್ಯ ನಿರ್ಲಕ್ಷ್ಯ ವಹಿಸಿರುವ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸಹಾಯ ಹಸ್ತ ನೀಡಬೇಕಿದೆ.


Click it and Unblock the Notifications
