ಭಾರತ ದೇಶವು ಭವಿಷ್ಯದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ವಿಶ್ವಾಸ ವ್ಯಕ್ತಪಡಿಸಿದರು.
ಒಲಿಂಪಿಕ್ಸ್ನಂತಹ ಗುಣಮಟ್ಟದ ಪಂದ್ಯಾವಳಿಗಳನ್ನು ವಿವಿಧ ವಿಭಾಗಗಳಲ್ಲಿ ಆಯೋಜಿಸುವುದರಿಂದ ಭಾರತವು ಮುಂದಿನ ದಿನಗಳಲ್ಲಿ ಕ್ರೀಡಾ ಸೂಪರ್ ಪವರ್ ಆಗಲು ಸಹಾಯ ಮಾಡಲಿದೆ ಎಂದು ಅನುರಾಗ್ ಠಾಕೂರ್ ತಿಳಿಸಿದರು.

2026ರ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ವಿಕ್ಟೋರಿಯಾ ಹಿಂತೆಗೆದುಕೊಂಡ ನಂತರ, ಭಾರತ ಬಿಡ್ಡಿಂಗ್ ಮಾಡುವ ಊಹಾಪೋಹಗಳು ಬಂದವು. ಇದರ ಬಗ್ಗೆ ಅನುರಾಗ್ ಠಾಕೂರ್ ಅವರನ್ನು ಕೇಳಲಾಯಿತು.
ಇದಕ್ಕೆ ಕೇಂದ್ರ ಕ್ರೀಡಾ ಸಚಿವರು ನೇರವಾಗಿ ಸಾಧ್ಯತೆಯನ್ನು ನಿರಾಕರಿಸಲಿಲ್ಲ. ಆದರೆ, ಭವಿಷ್ಯದಲ್ಲಿ ಭಾರತವು ಒಲಿಂಪಿಕ್ಸ್ ಪಂದ್ಯಾವಳಿಯನ್ನು ಆಯೋಜಿಸಲು ಬಯಸುತ್ತದೆ ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದಲ್ಲದೆ, ಆ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿವಿಧ ಫೆಡರೇಶನ್ಗಳಲ್ಲಿಯೂ ಜವಾಬ್ದಾರಿಯುತ ವ್ಯಕ್ತಿಗಳಿರುವಾಗ, ದೇಶದ ಕ್ರೀಡಾಪಟುಗಳು ಈಗ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಗಮನ ಸೆಳೆದರು.

"ಭಾರತವು ಭವಿಷ್ಯದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುತ್ತದೆ. ನಾವು ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಸರಿಯಾದ ಸಮಯ ಬಂದಾಗ ನಾವು ನಿಮಗೆ ಒಳ್ಳೆಯ ಸುದ್ದಿ ನೀಡುತ್ತೇವೆ," ಎಂದರು.
"ಭಾರತ ಒಲಿಂಪಿಕ್ಸ್ಗೆ ಆತಿಥ್ಯ ವಹಿಸಲು ಬಯಸುತ್ತದೆ. ನಮ್ಮ ಕ್ರೀಡಾಪಟುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಫೆಡರೇಶನ್ಗಳು ಹೆಚ್ಚು ಜವಾಬ್ದಾರಿಯುತವಾಗುತ್ತಿವೆ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ವೃತ್ತಿಪರತೆ ಇದೆ," ಎಂದು ಏಷ್ಯನ್ ಜೂನಿಯರ್ ಮತ್ತು ಯೂತ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನ ಉದ್ಘಾಟನಾ ಸಮಾರಂಭದಲ್ಲಿ ಅನುರಾಗ್ ಠಾಕೂರ್ ಹೇಳಿದರು.
ನೋಯ್ಡಾದ ಗೌತಮ್ ಬುದ್ಧ ವಿಶ್ವವಿದ್ಯಾನಿಲಯದಲ್ಲಿ ಏಷ್ಯನ್ ಜೂನಿಯರ್ ಮತ್ತು ಯೂತ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ ಪಂದ್ಯಾವಳಿ ನಡೆಯುತ್ತಿದ್ದು, ಭಾರತವು ಮೊದಲ ಬಾರಿಗೆ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಜುಲೈ 28ರಿಂದ ಆಗಸ್ಟ್ 5ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಏಷ್ಯಾದ 18 ದೇಶಗಳ 220 ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ.
"2023ರ ಯೂತ್ ಮತ್ತು ಜೂನಿಯರ್ ವೇಟ್ಲಿಫ್ಟಿಂಗ್ ಏಷ್ಯನ್ ಚಾಂಪಿಯನ್ಶಿಪ್ ಪಂದ್ಯಾವಳಿಯನ್ನು ಆಯೋಜಿಸಲು ಭಾರತಕ್ಕೆ ಅವಕಾಶ ಸಿಕ್ಕಿದೆ. ನಾವು ಇದನ್ನು ಮೊದಲ ಬಾರಿಗೆ ಆಯೋಜಿಸುತ್ತಿರುವುದು ದೊಡ್ಡ ವಿಷಯವಾಗಿದೆ," ಎಂದು ಅನುರಾಗ್ ಠಾಕೂರ್ ತಿಳಿಸಿದರು.
ಇದಲ್ಲದೆ, ಚೀನಾದಲ್ಲಿ ನಡೆಯಲಿರುವ 2023ರ ಏಷ್ಯನ್ ಗೇಮ್ಸ್ಗೆ ಭಾರತದ ಸ್ಪರ್ದಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಮತ್ತು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದರು.
ಫುಟ್ಬಾಲ್ ತಂಡದ ಬಗೆಗಿನ ನಿರ್ಧಾರವು ಪ್ರಕ್ರಿಯೆಗಳನ್ನು ಸ್ವಲ್ಪ ವಿಳಂಬಗೊಳಿಸಿದೆ. ಆದರೆ ಶೀಘ್ರದಲ್ಲೇ ಎಲ್ಲವನ್ನೂ ಅಂತಿಮಗೊಳಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವರು ಹೇಳಿದ್ದಾರೆ.
"ಅಂತಿಮ ಪಟ್ಟಿ ಸಿದ್ಧವಾಗುತ್ತಿದೆ, ತಂಡಗಳು ಪೂರ್ವಸಿದ್ಧತಾ ಹಂತದಲ್ಲಿವೆ. ಫುಟ್ಬಾಲ್ ತಂಡಗಳು ಹೋಗಬೇಕೇ ಅಥವಾ ಬೇಡವೇ ಎಂಬ ದೊಡ್ಡ ಪ್ರಶ್ನೆ ನಮ್ಮ ಮುಂದೆ ಇತ್ತು. ತಂಡಗಳು ಮೊದಲ 8ರೊಳಗೆ ಸ್ಥಾನ ಪಡೆದಿರಲಿಲ್ಲ. ಆದರೆ ನಾನು ಅವರು ಭಾಗವಹಿಸಬೇಕು ಎಂದು ನಿರ್ಧರಿಸಿದೆ," ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿಳಿಸಿದರು.