
ಕೋಲ್ಕೊತಾ, ಆಗಸ್ಟ್ 08: ಎರಡು ಪರ್ಯಾಯ ಒಕ್ಕೂಟಗಳನ್ನು ಚುನಾಯಿಸಿದ ಹಿನ್ನೆಲೆಯಲ್ಲಿ ವಿಶ್ವ ಆರ್ಚರಿ ಒಕ್ಕೂಟವು ಭಾರತೀಯ ಆರ್ಚರಿ ಒಕ್ಕೂಟವನ್ನು ಅಮಾನತುಗೊಳಿಸಿದ್ದು, ಆಗಸ್ಟ್ ಅಂತ್ಯದ ಒಳಗಾಗಿ ಆಂತರಿಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಆಗ್ರಹಿಸಿದೆ. ಇದರೊಂದಿಗೆ ಭಾರತೀಯ ಬಿಲ್ಲುಗಾರರಿಗೆ ಅಂತಾರಾಷ್ಟ್ರೀಯ ಕೂಟಗಳಲ್ಲಿ ತ್ರಿವರ್ಣ ಧ್ವಜದಡಿಯಲ್ಲಿ ಸ್ಪರ್ಧಿಸದಂತಾಗಿದೆ.
ಕಳೆದ ಸೋಮವಾರದಿಂದಲೇ ಅಮಾನತು ಶಿಕ್ಷೆ ಜಾರಿಯಾಗಿದ್ದು, ಭಾರತದ ಆರ್ಚರ್ಗಳು ಆಗಸ್ಟ್ 19-25ರವರೆಗೆ ಮ್ಯಾಡ್ರಿಡ್ನಲ್ಲಿ ನಡೆಯಲಿರುವ ವಿಶ್ವ ಆರ್ಚರಿ ಯೂತ್ ಚಾಂಪಿಯನ್ಷಿಪ್ನಲ್ಲಿ ಕೊನೆಯ ಬಾರಿ ತ್ರಿವರ್ಣ ಧ್ವಜದಡಿ ಸ್ಪರ್ಧಿಸಲು ವಿಶ್ವ ಒಕ್ಕೂಟ ಅನುಮತಿಸಿದೆ.
"ಭಾರತೀಯ ಆರ್ಚರಿ ಒಕ್ಕೂಟ(ಎಎಐ)ವನ್ನು ಅಮಾನತುಗೊಳಿಸುವ ನಿರ್ಧಾರವನ್ನು ಕಳೆದ ಜೂನ್ನಲ್ಲೇ ತೆಗೆದುಕೊಳ್ಳಲಾಗಿದೆ. ಈ ತಿಂಗಳ ಅಂತ್ಯಕ್ಕೂ ಸಮಸ್ಯೆ ಬಗೆಹರಿಯದೇ ಇದ್ದರೆ ಮುಂದಿನ ನಿರ್ಧಾರ ಕುರಿತು ಚರ್ಚಿಸಲಿದ್ದೇವೆ. ಏಕೆಂದರೆ ಭಾರತೀಯ ಆರ್ಚರ್ಗಳು ಸೆಪ್ಟೆಂಬರ್ನಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ಷಿಪ್ ಮತ್ತು ಏಷ್ಯನ್ ಪ್ಯಾರಾ ಚಾಂಪಿಯನ್ಷಿಪ್ ಕೂಟಗಳಲ್ಲಿ ಪಾಲ್ಗೊಳ್ಳಬೇಕಿದೆ," ಎಂದು ವಿಶ್ವ ಆರ್ಚರಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಾಮ್ ಡೀಲೆನ್ ಹೇಳಿದ್ದಾರೆ.
ಗ್ಲೋಬಲ್ ಟಿ20ಯಲ್ಲಿ ಪಾಕ್ ಕ್ರಿಕೆಟಿಗನಿಂದ ಮ್ಯಾಚ್ ಫಿಕ್ಸಿಂಗ್ ಯತ್ನ!
ಎಎಐ, ಜುಲೈ ಅಂತ್ಯದ ಒಳಗಾಗಿ ಚುನಾವಣೆ ಪ್ರಕ್ರಿಯೆ ಅಂತ್ಯಗೊಳಿಸಿ ಏಕೈಕ ಒಕ್ಕೂಟವನ್ನು ಹೊಂದಬೇಕಿತ್ತು. ಇದು ಸಾಧ್ಯವಾಗದ ಕಾರಣಕ್ಕೆ ವಿಶ್ವ ಆರ್ಚರಿ ಒಕ್ಕೂಟ ಅಮಾನತು ಜಾರಿಗೊಳಿಸಿದೆ. ಇದೇ ವೇಳೆ ಎಎಐನ ಆಂತರಿಕ ಗೊಂದಲ ಕುರಿತು ನ್ಯಾಯಾಲಯದ ತೀರ್ಪು ಹೊರಬರಬೇಕಿದ್ದು, ಇವೆಲ್ಲವನ್ನು ಬಗೆಹರಿಸಿಕೊಳ್ಳಲು ವಿಶ್ವ ಒಕ್ಕೂಟ ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂದು ಎಎಐ ಮನವಿ ಮಾಡಿಕೊಂಡಿದೆ.
ಭಾರತೀಯ ಆರ್ಚರ್ಗಳು 2020ರ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವ ಪ್ರಯತ್ನದಲ್ಲಿದ್ದಾರೆ. ಮುಂಬರುವ ಏಷ್ಯನ್ ಚಾಂಪಿಯನ್ಷಿಪ್ಗಳಲ್ಲಿ ಒಲಿಂಪಿಕ್ಸ್ ಅರ್ಹತೆ ಪಡೆಯುವ ಉತ್ತಮ ಅವಕಾಶಗಳಿವೆ. ಈಗಾಗಲೇ ಮೂವರು ಪುರುಷ ಆರ್ಚರ್ಗಳು ಒಲಿಂಪಿಕ್ಸ್ ಅರ್ಹತೆ ಪಡೆದುಕೊಂಡಿದ್ದಾರೆ. ಆದರೆ, ಮಹಿಳಾ ವಿಭಾಗದಲ್ಲಿ ಯಾರೋಬ್ಬರಿಗೂ ಅರ್ಹತೆ ಸಿಕ್ಕಿಲ್ಲ.