ನವದೆಹಲಿ, ಮಾ.30: ಪ್ರತಿ ಬಾರಿ ಪ್ರಮುಖ ಟೂರ್ನಿಯಿಂದ ಟೀಂ ಇಂಡಿಯಾ ಔಟ್ ಆದಾಗಲೆಲ್ಲಾ ಒಬ್ಬ ಆಟಗಾರನನ್ನು ಬಲಿಪಶು ಮಾಡಿಕೊಂಡು ಮಜಾ ತೆಗೆದುಕೊಳ್ಳುವುದು ನಡೆಯುತ್ತಾ ಬಂದಿದೆ. ಇಶಾಂತ್ ಶರ್ಮ ಇರಬಹುದು ಅಥವಾ ಈಗ ವಿರಾಟ್ ಕೊಹ್ಲಿ ಇರಬಹುದು. ಅದರೆ, ಕೊಹ್ಲಿ ಸಾಧನೆ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುವ ಮುನ್ನ ಎಚ್ಚರ ಎಂದು 'ವಿಶ್ವಕಪ್ ಹೀರೋ' ಯುವರಾಜ್ ಸಿಂಗ್ ಗುಡುಗಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ನಡುವಿನ ಸಂಬಂಧದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ, ಸೋಲು ಅಥವಾ ಗೆಲುವು ಎರಡನ್ನು ಸಮವಾಗಿ ಸ್ವೀಕರಿಸುವ ರಿಯಲ್ ಇಂಡಿಯನ್ ಅಭಿಮಾನಿಗಳಿಗೆ ನಾನು ಕೇಳಿಕೊಳ್ಳುತ್ತಿದ್ದೇನೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾರ ಖಾಸಗಿ ಲೈಫ್ ಅನ್ನು ಗೌರವಿಸಿ ಎಂದು ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ. [ಕೊಹ್ಲಿ- ಅನುಷ್ಕಾ ತೆಗಳುವುದನ್ನು ನಿಲ್ಲಿಸ್ರಪ್ಪ ಸಾಕು!]

ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ಔಟಾಗಿದ್ದರ ಬಗ್ಗೆ ಚರ್ಚೆ ಇನ್ನೂ ಮುಂದುವರೆದಿದೆ. ಸಿಡ್ನಿಯಲ್ಲಿ ನಡೆದ ಪಂದ್ಯ ವೀಕ್ಷಿಸಲು ಕೊಹ್ಲಿ ಅವರ ಗೆಳತಿ ಬಾಲಿವುಡ್ ನಟಿ, ಬೆಂಗಳೂರಿನ ಹುಡುಗಿ ಅನುಷ್ಕಾ ಶರ್ಮ ಬಂದಿದ್ದು ಅನೇಕರ ಕಣ್ಣುಕುಕ್ಕಿಸಿತು.[ಕೊಹ್ಲಿ ಸಿಟ್ಟಿಗೆದ್ದು ಪತ್ರಕರ್ತನಿಗೆ ಉಗಿದಿದ್ದೇಕೆ?]
ಟೂರ್ನಿಯಿಂದ ಭಾರತ ಹೊರ ಬಿದ್ದ ಮೇಲೆ ಭಾರತಕ್ಕೆ ಹಿಂತಿರುಗುವಾಗ ಇಬ್ಬರು ಜೊತೆಯಲ್ಲೇ ಬಂದಿದ್ದು ಜಗತ್ತಿನ ಅದ್ಭುತ ಎಂಬಂತೆ ಕೆಲವರು ಪ್ರತಿಕ್ರಿಯಿಸಿದ್ದಕ್ಕೆ ಯುವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಸೇರಿದಂತೆ ಅನೇಕ ಕ್ರಿಕೆಟರ್ ಗಳು ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಬೆನ್ನು ತಟ್ಟಿದ್ದರು, ಯಾವ ಆಟಗಾರನನ್ನು ಟಾರ್ಗೆಟ್ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.
ಈಗ ಯುವರಾಜ್ ಸಿಂಗ್ ಇದೇ ಕೆಲಸ ಮಾಡಿದ್ದಾರೆ. ನೋವುಂಟವರಿಗೆ ಮಾತ್ರ ನೋವಿನ ಅರಿವಾಗುತ್ತದೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ.(ಒನ್ ಇಂಡಿಯಾ ಸುದ್ದಿ)