ದೇವಧರ್ ಟ್ರೋಫಿ: ರಹಾನೆ ತಂಡ ಮಣಿಸಿ ಫೈನಲ್ ಪ್ರವೇಶಿಸಿದ ಶ್ರೇಯಸ್ ಬಳಗ

ದೆಹಲಿ, ಅಕ್ಟೋಬರ್ 24: ಸಾಧಾರಣ ಗುರಿ ನೀಡಿದ್ದರೂ ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ಅನ್ನು ನಿಯಂತ್ರಿಸುವಲ್ಲಿ ಸಫಲವಾದ ಭಾರತ ಬಿ ತಂಡ, ದೇವಧರ್ ಟ್ರೋಫಿಯ ಫೈನಲ್ ಪ್ರವೇಶಿಸಿದೆ.
ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಭಾರತ ಸಿ ವಿರುದ್ಧ ಪಂದ್ಯದಲ್ಲಿ ಸತತ ಎರಡನೆಯ ಗೆಲುವನ್ನು ದಾಖಲಿಸಿದ ಬಿ ತಂಡ, ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತು.
ಗುರುವಾರ ನಡೆಯಲಿರುವ ಭಾರತ ಎ ಮತ್ತು ಸಿ ತಂಡಗಳ ನಡುವಿನ ಪಂದ್ಯ ಮಹತ್ವದ್ದಾಗಿದ್ದು, ಈ ಪಂದ್ಯವನ್ನು ಗೆಲ್ಲುವ ತಂಡ ಫೈನಲ್ನಲ್ಲಿ ಬಿ ತಂಡವನ್ನು ಎದುರಿಸಲಿದೆ. ಹೀಗಾಗಿ ಗುರುವಾರದ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.
ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ನೀಡಿದ ಸುಲಭದ ಗುರಿಯನ್ನು ಬೆನ್ನತ್ತಿದ ಅಜಿಂಕ್ಯ ರಹಾನೆ ನಾಯಕತ್ವದ ತಂಡ, ಸ್ಪಿನ್ ಬೌಲಿಂಗ್ ಎದುರು ತಡಬಡಾಯಿಸಿತು. 30 ರನ್ಗಳಿಂದ ಸೋಲು ಅನುಭವಿಸಿತು.

ಸಾಧಾರಣ ಆರಂಭ
ಟಾಸ್ ಗೆದ್ದ ಬ್ಯಾಟಿಂಗ್ಗೆ ಇಳಿದುಕೊಂಡ ಭಾರತ ಬಿ ತಂಡಕ್ಕೆ ಭರವಸೆಯ ಆರಂಭ ದೊರಕಿತು. ಮೊದಲ ವಿಕೆಟ್ಗೆ ಪ್ರಶಾಂತ್ ಚೋಪ್ರಾ ಮತ್ತು ಮಯಾಂಕ್ ಅಗರವಾಲ್ 40 ರನ್ ಸೇರಿಸಿದರು. ಆದರೆ, ಇಬ್ಬರೂ ಕಡಿಮೆ ಅಂತರದ ಸ್ಕೋರ್ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಶ್ರೇಯಸ್ ಅಯ್ಯರ್, ಮನೋಜ್ ತಿವಾರಿ, ರೋಹಿತ್ ರಾಯುಡು ಕೂಡ ಬೇಗನೆ ವಿಕೆಟ್ ಒಪ್ಪಿಸಿದರು.ಇದರಿಂದ 90 ರನ್ಗೆ ಐದು ವಿಕೆಟ್ ಕಳೆದುಕೊಂಡ ತಂಡ ಸಂಕಷ್ಟದಲ್ಲಿ ಸಿಲುಕಿತ್ತು.
ಮತ್ತೆ ಮಿಂಚಿದ ಹನುಮ
ಮೊದಲ ಪಂದ್ಯದಲ್ಲಿ ಅಜೇಯ 87 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದ ಹನುಮ ವಿಹಾರಿ ತಂಡಕ್ಕೆ ಮತ್ತೆ ಆಸರೆಯಾದರು. ವಿಕೆಟ್ ಕೀಪರ್ ಅಂಕುಶ್ ಬೈಯ್ನ್ಸ್ ಅವರೊಂದಿಗೆ ಅರ್ಧಶತಕದ ಜತೆಯಾಟ ನೀಡಿ ತಂಡಕ್ಕೆ ತುಸು ಚೇತರಿಕೆ ನೀಡಿದರು. ಹೋರಾಟ ಮುಂದುವರಿಸಿದ ಹನುಮ ವಿಹಾರಿ 76 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಕೆ. ಗೌತಮ್, ಜಯದೇವ್ ಉನದ್ಕತ್ ಮತ್ತು ಶಹಬಾಜ್ ನದೀಮ್ ಅವರ ಅಲ್ಪ ಕಾಣಿಕೆಯಿಂದಾಗಿ 231 ರನ್ ಗಳಿಸಿತು.
ಭಾರತೀಯ ಕ್ರಿಕೆಟ್ಗೆ ಬರುತ್ತಿದ್ದಾರೆ ಮೊದಲ ಮಹಿಳಾ ಅಂಪೈರ್

ನಿಧಾನಗತಿಯ ಆರಂಭ
232 ರನ್ ಬೆನ್ನತ್ತಿದ ಭಾರತ ಸಿ ತಂಡಕ್ಕೆ ತೀರಾ ನಿಧಾನಗತಿಯ ಆರಂಭ ದೊರಕಿತು. ಕನ್ನಡಿಗ ಆರ್. ಸಮರ್ಥ್ 19 ಎಸೆತಗಳನ್ನು ಎದುರಿಸಿ ಕೇವಲ ಐದು ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಅಜಿಂಕ್ಯ ರಹಾನೆ ಮತ್ತು ಶುಭ್ಮನ್ ಗಿಲ್ ಜತೆಯಾಟದಿಂದ ಭರವಸೆ ಮೂಡಿತ್ತು. ಆದರೆ, ಕನ್ನಡಿಗ ಕೆ. ಗೌತಮ್ ರಹಾನೆ ಮತ್ತು ಸುರೇಶ್ ರೈನಾ ಅವರ ವಿಕೆಟ್ ಕಿತ್ತು ಸಿ ತಂಡದ ಪತನಕ್ಕೆ ನಾಂದಿ ಹಾಡಿದರು.
ಬಳಿಕ ಸೂರ್ಯಕುಮಾರ್ ಯಾದವ್ ಮತ್ತು ವಿಜಯ್ ಶಂಕರ್ ಹೋರಾಟದ ಸೂಚನೆ ನೀಡಿದರೂ ಅದು ಗುರಿ ಮುಟ್ಟಿಸುವಲ್ಲಿ ಸಫಲವಾಗಲಿಲ್ಲ.

ಸ್ಪಿನ್ನರ್ಗಳ ಕರಾಮತ್ತು
ಸಿ ತಂಡದ ವಿರುದ್ಧ ಬಿ ತಂಡದ ಬೌಲಿಂಗ್ ಪಡೆ ತನ್ನ ಬಲಪ್ರದರ್ಶಿಸಿತು. ಮುಖ್ಯವಾಗಿ ಸ್ಪಿನ್ನರ್ಗಳ ದಾಳಿ ನಿಖರವಾಗಿತ್ತು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್ ವಿಕೆಟ್ ಪಡೆಯದಿದ್ದರೂ 10 ಓವರ್ಗಳಲ್ಲಿ ಕೇವಲ 29 ರನ್ ನೀಡಿ ರನ್ ಗತಿಗೆ ಕಡಿವಾಣ ಹಾಕಿದರು. ಗೌತಮ್ ಪ್ರಮುಖ ವಿಕೆಟ್ಗಳನ್ನು ಕಬಳಿಸಿದರೆ, ಪಾರ್ಟ್ ಟೈಂ ಸ್ಪಿನ್ನರ್ಗಳಾದ ಮನೋಜ್ ತಿವಾರಿ ಮತ್ತು ಶ್ರೇಯಸ್ ಅಯ್ಯರ್ ಕೂಡ ವಿಕೆಟ್ ಕಿತ್ತು ಅಚ್ಚರಿ ಮೂಡಿಸಿದರು.
ಹಲವು ದಾಖಲೆಗಳನ್ನು ಸೃಷ್ಟಿಸಿದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜೋಡಿ

ಸಂಕ್ಷಿಪ್ತ ಸ್ಕೋರ್ ವಿವರ
ಭಾರತ ಬಿ: 231/9 (50) ಹನುಮ ವಿಹಾರಿ 76, ಅಂಕುಶ್ ಬೈಯ್ನ್ಸ್ 25, ಮಯಾಂಕ್ ಅಗರವಾಲ್ 24, ರಜನೀಶ್ ಗರ್ಬಾನಿ 38/3, ಪಪ್ಪು ರಾಯ್ 45/3, ವಿಜಯ್ ಶಂಕರ್ 44/2
ಭಾರತ ಸಿ: 201/10 (48.2) ಸೂರ್ಯಕುಮಾರ್ ಯಾದವ್ 39, ವಿಜಯ್ ಶಂಕರ್ 35, ಶುಭ್ಮನ್ ಗಿಲ್ 36, ಅಜಿಂಕ್ಯ ರಹಾನೆ 32, ಕೆ. ಗೌತಮ್ 40/3, ಮನೋಜ್ ತಿವಾರಿ 44/3, ದೀಪಕ್ ಚಾಹರ್ 36/2
ಫಲಿತಾಂಶ: ಭಾರತ ಬಿ ತಂಡಕ್ಕೆ 30 ರನ್ ಗೆಲುವು, ಫೈನಲ್ ಪ್ರವೇಶ

ಕೊನೆಯ ಪಂದ್ಯದ ವಿವರ
ತಂಡಗಳು: ಭಾರತ ಎ Vs ಭಾರತ ಸಿ
ಸ್ಥಳ: ಫಿರೋಜ್ ಶಾ ಕೋಟ್ಲಾ, ದೆಹಲಿ.
ಸಮಯ: ಅಕ್ಟೋಬರ್ 24. ಬೆಳಿಗ್ಗೆ 9
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2
ದೇವಧರ್ ಟ್ರೋಫಿ: ದಿನೇಶ್ ಕಾರ್ತಿಕ್ ಹೋರಾಟ ವ್ಯರ್ಥ, ಭಾರತ ಬಿ ತಂಡಕ್ಕೆ ಜಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications