
ದಕ್ಷಿಣ ಆಫ್ರಿಕಾ ಪ್ರವಾಸ ಮೊಟಕುಗೊಳಿಸಿದ ಆಸ್ಟ್ರೇಲಿಯಾ
ಕೋವಿಡ್-19 ಎರಡನೇ ಅಲೆಯ ಪರಿಣಾಮಗಳ ಜೊತೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಮಾರ್ಚ್ನಲ್ಲಿ ದಕ್ಷಿಣ ಆಫ್ರಿಕಾಗೆ ಕೈಗೊಳ್ಳಬೇಕಾಗಿದ್ದ ಪ್ರವಾಸವನ್ನ ಕೈ ಬಿಟ್ಟಿತು. ಸಾರ್ವಜನಿಕ ಆರೋಗ್ಯ ಹಿತಾಸಕ್ತಿ ದೃಷ್ಟಿಯಿಂದ ತಮ್ಮ ಆಟಗಾರರನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿತು.
ಕ್ರಿಕೆಟ್ ಆಸ್ಟ್ರೇಲಿಯಾದ ಈ ಒಂದು ನಿರ್ಧಾರದಿಂದಾಗಿ ಕ್ರಿಕೆಟ್ ಸೌತ್ ಆಫ್ರಿಕಾ ಕಷ್ಟದ ಸಮಯವನ್ನ ಎದುರಿಸಬೇಕಾಯಿತು. ಪೂರ್ವ ನಿಯೋಜಿತಗೊಂಡಿದ್ದ ಸರಣಿಯನ್ನ ಆಸ್ಟ್ರೇಲಿಯಾ ಕೈ ಬಿಟ್ಟ ಪರಿಣಾಮ 30 ಮಿಲಿಯನ್ ಡಾಲರ್ನಿಂದ 40 ಮಿಲಿಯನ್ ಡಾಲರ್ವರೆಗೆ ನಷ್ಟಗೊಂಡಿದೆ.
ಇದರ ಜೊತೆಗೆ ಆಸ್ಟ್ರೇಲಿಯಾ ತಂಡವು ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಲು ಕೂಡ ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಆಸೀಸ್ ಪಡೆ ಮೂರು ಟೆಸ್ಟ್ ಪಂದ್ಯಗಳನ್ನ ಆಡಬೇಕಿತ್ತು. ಆದ್ರೆ ಆಸ್ಟ್ರೇಲಿಯಾ ಆಡದ ಪರಿಣಾಮ ನ್ಯೂಜಿಲೆಂಡ್ಗೆ ಲಾಭವಾಗಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಿತು.
ICC ಮಹಿಳಾ ಏಕದಿನ ವಿಶ್ವಕಪ್ 2022ರ ವೇಳಾಪಟ್ಟಿ ಪ್ರಕಟ: ಏಪ್ರಿಲ್ 3ಕ್ಕೆ ಫೈನಲ್

ಐಪಿಎಲ್ 2021ರ ಸೀಸನ್ ಮಧ್ಯದಲ್ಲಿ ಕೋವಿಡ್ ಕಾಟ
2020ರ ಐಪಿಎಲ್ ಸೀಸನ್ ಅನ್ನು ಕೋವಿಡ್ ಕಾರಣಗಳಿಂದಾಗಿ ಯುಎಇನಲ್ಲಿ ಯಶಸ್ವಿಯಾಗಿ ನಡೆಸಿದ ಬಿಸಿಸಿಐ, 2021ರ ಐಪಿಎಲ್ ಸೀಸನ್ ಅನ್ನು ಭಾರತದಲ್ಲೇ ಹಮ್ಮಿಕೊಂಡಿತು. ಆರು ನಗರಗಳಲ್ಲಿ ಐಪಿಎಲ್ ನಡೆಸುವಲ್ಲಿ ಯಶಸ್ವಿಯಾಗಿತ್ತು. ಆದ್ರೆ ಅರ್ಧ ಸೀಸನ್ ಇರುವಂತೆ ಚೆನ್ನೈ ಸೂಪರ್ ಕಿಂಗ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದ್ರಾಬಾದ್ ತಂಡದ ಆಟಗಾರರಲ್ಲಿ ಕೋವಿಡ್-19 ಪಾಸಿಟಿವ್ ಕೇಸ್ ಹೆಚ್ಚಾದ ಹಿನ್ನಲೆಯಲ್ಲಿ ಟೂರ್ನಿಯನ್ನ ಅರ್ಧಕ್ಕೆ ನಿಲ್ಲಿಸಬೇಕಾಯ್ತು.
ತುರ್ತಾಗಿ ಸಭೆ ಸೇರಿದೆ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಐಪಿಎಲ್ 2021ರ ಸೀಸನ್ ಮುಂದೂಡಲು ತೀರ್ಮಾನಿಸಲಾಯಿತು. ಸೆಪ್ಟೆಂಬರ್ ತಿಂಗಳಿನಲ್ಲಿ ಮತ್ತೆ ಯುಎಇಲ್ಲಿ ಉಳಿದ ಪಂದ್ಯಗಳ ಆಯೋಜಿಸಲಾಯಿತು. ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮಹಿಳಾ ಕ್ರೀಡೆಯನ್ನ ನಿಷೇಧಗೊಳಿಸಿದ ತಾಲಿಬಾನ್
ಅಫ್ಘಾನಿಸ್ತಾನವನ್ನ ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಂಡ ತಾಲಿಬಾನ್ನಿಂದಾಗಿ ಇಡೀ ದೇಶ ಸಂಕಷ್ಟಕ್ಕೆ ಸಿಲುಕಿದ್ದಲ್ಲದೆ, ಕ್ರೀಡೆ ಕೂಡ ಕಮರಿ ಹೋಗಿದೆ. ಅದ್ರಲ್ಲೂ ವಿಶೇಷವಾಗಿ ಐಪಿಎಲ್ ಪ್ರಸಾರವನ್ನ ಅಫ್ಘಾನಿಸ್ತಾನದಲ್ಲಿ ಸ್ಥಗಿತಗೊಳಿಸಲಾಯಿತು. ಐಪಿಎಲ್ನಲ್ಲಿ ಮಹಿಳಾ ವೀಕ್ಷಕರು ಇರುವುದು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾದುದೆಂದು ಐಪಿಎಲ್ ಪ್ರಸಾರವೇ ನಿಂತು ಹೋಯಿತು.
ಇದರ ಜೊತೆಗೆ ಅನೇಕ ವರದಿಗಳ ಪ್ರಕಾರ ಮಹಿಳೆಯರು ಕ್ರೀಡೆಯಲ್ಲಿ ಭಾಗಿಯಾಗುವುದನ್ನ ತಾಲಿಬಾನ್ ಸರ್ಕಾರ ನಿಷೇಧಗೊಳಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಅಫ್ಘಾನಿಸ್ತಾನದ ಜೊತೆಗೆ ಆಡಬೇಕಿದ್ದ ಐತಿಹಾಸಿಕ ಚೊಚ್ಚಲ ಟೆಸ್ಟ್ ಪಂದ್ಯವನ್ನೂ ಸಹ ಮುಂದೂಡಿದೆ.

ಪಾಕಿಸ್ತಾನದಲ್ಲಿ ಆಡಲು ತಂಡಗಳ ಹಿಂದೇಟು!
ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಆಯೋಜನೆಗೊಂಡಾಗ ಭಾಗಿಯಾಗಲು ಈ ಹಿಂದೆ ಕೆಲವು ರಾಷ್ಟ್ರಗಳು ಹಿಂದೇಟು ಹಾಕಿವೆ. ಭದ್ರತಾ ಕಾಳಜಿಯ ಕಾರಣದಿಂದಾಗಿ ನ್ಯೂಜಿಲೆಂಡ್, ಮೊದಲ ಪಂದ್ಯದ ಟಾಸ್ ಆಗುವ ಕೆಲವು ನಿಮಿಷಗಳ ಮೊದಲು ತಮ್ಮ ಪ್ರವಾಸವನ್ನು ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಅಲ್ಲೇ ಕೈ ಬಿಟ್ಟರು. ಇದಾದ ಬೆನ್ನಲ್ಲೇ ಪ್ರವಾಸ ಕೈಗೊಳ್ಳಬೇಕಿದ್ದ ಇಂಗ್ಲೆಂಡ್ ಕೂಡ ಭದ್ರತಾ ಸಮಸ್ಯೆಯಿಂದ ಪ್ರವಾಸವನ್ನು ರದ್ದುಗೊಳಿಸಿತ್ತು.

ಪಾಕ್ ಕ್ರಿಕೆಟ್ ಬೋರ್ಡ್ನಲ್ಲಿ ಇದಕ್ಕಿದ್ದಂತೆ ಗೊಂದಲ!
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಇದ್ದಕ್ಕಿದ್ದಂತೆ ಮಾಜಿ ಕ್ರಿಕೆಟಿಗ ರಮೀಜ್ ರಾಜಾರನ್ನು ಪಿಸಿಬಿ ಕ್ರಿಕೆಟ್ ಬೋರ್ಡ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇದರ ಬೆನ್ನಲ್ಲೇ ಪಾಕಿಸ್ತಾನದ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಮತ್ತು ಮತ್ತು ಬೌಲಿಂಗ್ ಕೋಚ್ ವಕಾರ್ ಯೂನಿಸ್ ಟಿ20 ವಿಶ್ವಕಪ್ಗೆ ಒಂದು ತಿಂಗಳ ಇರುವಂತೆ ರಾಜೀನಾಮೆ ನೀಡಿದರು. ಆದ್ರೆ ಇವರ ರಾಜೀನಾಮೆ ಕುರಿತಾಗಿ ಏನೂ ಹೇಳದೆ, ಬಯೋ ಬಬಲ್ ಕಾರಣ ನೀಡಿದ್ರು.
ಆಶಸ್ ಸರಣಿ, ಇಂಗ್ಲೆಂಡ್ vs ಆಸ್ಟ್ರೇಲಿಯಾ 2ನೇ ಪಂದ್ಯ: ದಿನಾಂಕ, ಸಮಯ, ಪಿಚ್ ರಿಪೋರ್ಟ್

ಆಸ್ಟ್ರೇಲಿಯಾ ತಂಡದ ಟೆಸ್ಟ್ ನಾಯಕತ್ವ ಟಿಮ್ ಪೈನ್ ರಾಜೀನಾಮೆ
ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಗೂ ಮುನ್ನ ಸೆಕ್ಸ್ಟಿಂಗ್ ವಿವಾದದ ಮೂಲಕ ನಾಯಕತ್ವದಿಂದ ಇದ್ದಕ್ಕಿದ್ದಂತೆ ನಾಯಕ ಟಿಮ್ ಪೈನ್ ಕೆಳಗಿಳಿದಿದ್ದು ಕ್ರಿಕೆಟ್ ಲೋಕದ ಹಾಟ್ ವಿಷಯಗಳಲ್ಲಿ ಒಂದಾಗಿದೆ. ಆಲ್ರೌಂಡರ್ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾದ ನೂತನ ಟೆಸ್ಟ್ ನಾಯಕನಾಗಿ ಆಯ್ಕೆಯಾಗಿದ್ದು ಕೂಡ ಆಶ್ಚರ್ಯಕ್ಕೆ ಕಾರಣವಾಗಿತ್ತು.
2017-18ರ ಆ್ಯಷಸ್ ಸರಣಿ ಆರಂಭಕ್ಕೂ ಮುನ್ನ ಕ್ರಿಕೆಟ್ ಆಸ್ಟ್ರೇಲಿಯಾದ ಮಾಜಿ ಸಹದ್ಯೋಗಿಗೆ ಅಶ್ಲೀಲ ಚಿತ್ರಗಳ ಸಂದೇಶ ರವಾನೆ ಮತ್ತು ಸೆಕ್ಸ್ಟಿಂಗ್ ಸಂದೇಶದ ಆರೋಪ ಟಿಮ್ ಪೇನ್ ಮೇಲೆ ಕೇಳಿ ಬಂದಿತ್ತು. ಆದರೆ ಈ ಪ್ರಕರಣವು ತಡವಾಗಿ ಹೊರಬಂದಿದ್ದು, ಈ ಪ್ರಕರಣದ ಬಗ್ಗೆ ತನಿಖೆಗೆ ನಡೆಯುತ್ತಿರುವ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ಘೋಷಿಸಿದ್ದರು. ಸದ್ಯ ಮಾನಸಿಕ ಆರೋಗ್ಯ ಸುಧಾರಣೆಗೆ ಕ್ರಿಕೆಟ್ನಿಂದ ಕೊಂಚ ವಿರಾಮ ಪಡೆದುಕೊಳ್ಳುವುದಾಗಿ ಹೇಳಿದ್ದಾರೆ.

ಕೊಹ್ಲಿಯನ್ನ ನಾಯಕತ್ವದಿಂದ ವಜಾಗೊಳಿಸಿದ ಬಿಸಿಸಿಐ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಆದ್ರೆ ಆ ಬಳಿಕ ಇವರು ಏಕದಿನ ನಾಯಕತ್ವವನ್ನು ಕಳೆದುಕೊಳ್ಳುತ್ತಾರೆ ಎಂದು ಯಾರೂ ಕೂಡ ಊಹಿಸಿರ್ಲಿಲ್ಲ.
ಬಿಸಿಸಿಐ ಹಿಂದೂ ಮುಂದು ಯೋಚಿಸದೆ, ಲಿಮಿಟೆಡ್ ಓವರ್ ಕ್ರಿಕೆಟ್ಗೆ ಒಬ್ಬನೇ ನಾಯಕನಿರಬೇಕು ಎಂದು ರೋಹಿತ್ ಶರ್ಮಾರನ್ನ ನಾಯಕನಾಗಿ ಆಯ್ಕೆಮಾಡಿತು. ವಿರಾಟ್ ಕೊಹ್ಲಿ ಏಕದಿನ ನಾಯಕತ್ವವನ್ನ ತಾವಾಗಿಯೇ ಬಿಟ್ಟುಕೊಡುವಂತೆ ಬಿಸಿಸಿಐ ಎರಡು ದಿನಗಳ ಅವಕಾಶ ನೀಡಿತ್ತು ಎನ್ನಲಾಗಿದೆ. ಆದ್ರೆ ವಿರಾಟ್ ಇದಕ್ಕೆ ಒಪ್ಪದ ಕಾರಣ ವಿಶ್ವದ ಕ್ರಿಕೆಟ್ ದೊಡ್ಡಣ್ಣ ಈ ಕಠಿಣ ನಿರ್ಧಾರವನ್ನ ತೆಗೆದುಕೊಂಡಿತು. ಟಿ20 ವಿಶ್ವಕಪ್ ನಾಯಕತ್ವ ಬಿಟ್ಟುಕೊಟ್ಟ ಪರಿಣಾಮ ಲಿಮಿಟೆಡ್ ಓವರ್ ಕ್ರಿಕೆಟ್ಗೆ ಒಬ್ಬನೇ ನಾಯಕನಿರಬೇಕು ಎಂಬ ಉದ್ದೇಶದಿಂದ ಬಿಸಿಸಿಐ ಈ ದೊಡ್ಡ ನಿರ್ಧಾರ ತೆಗೆದುಕೊಂಡಿತು.
ಆದ್ರೆ ವಿರಾಟ್ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಆಶ್ಚರ್ಯಕರ ಹೇಳಿಕೆ ನೀಡುವ ಮೂಲಕ ಬಿಸಿಸಿಐಗೆ ಬಿಸಿ ಮುಟ್ಟಿಸಿದರು. ಟೆಸ್ಟ್ ತಂಡವನ್ನು ಪ್ರಕಟಿಸುವ ಒಂದೂವರೆ ಗಂಟೆ ಮುಂಚಿತವಾಗಿ ನನಗೆ ಕರೆ ಮಾಡಿ ತಂಡದ ಕುರಿತು ಚರ್ಚಿಸಿದರು. ಇದರ ಜೊತೆಗೆ ಏಕದಿನ ನಾಯಕತ್ವದಲ್ಲಿ ನೀವು ಮುಂದುವರಿಯುವುದಿಲ್ಲ ಎಂದು ತಿಳಿಸಿದ್ರು ಎಂದು ಕೊಹ್ಲಿ ಮತ್ತೊಂದು ವಿವಾದದ ಬಾಂಬ್ ಸ್ಫೋಟಿಸಿದ್ದಾರೆ. ಇದಕ್ಕೆ ಬಿಸಿಸಿಐ ಯಾವ ರೀತಿಯಲ್ಲಿ ಉತ್ತರ ನೀಡುತ್ತದೋ ಕಾದು ನೋಡಬೇಕು.


Click it and Unblock the Notifications












