
ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಮೂರನೇ ಅಂತಾರಾಷ್ಟ್ರೀಯ ಟಿ20 ಶತಕದ ಸಹಾಯದಿಂದ ಭಾರತ ತಂಡವನ್ನು 91 ರನ್ಗಳ ಅಂತರದಿಂದ ಗೆಲ್ಲಿಸುವಲ್ಲಿ ನೆರವಾದರು. ಇದೇ ವೇಳೆ ಶ್ರೀಲಂಕಾ ಬೌಲರ್ಗಳ ಮೇಲೆ ಸವಾರಿ ಮಾಡುವ ಮೂಲಕ ಬಿರುಸಿನ ಶತಕ ಬಾರಿಸಿದರು.
ಕೇವಲ 51 ಎಸೆತಗಳಲ್ಲಿ ಅಜೇಯ 112 ರನ್ ಗಳಿಸಿದ ಸೂರ್ಯಕುಮಾರ್ ಯಾದವ್, ಕ್ರಿಕೆಟ್ನ ಕಡಿಮೆ ಸ್ವರೂಪದಲ್ಲಿ ಅವರ ಮೂರನೇ ಶತಕ ದಾಖಲಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಜಂಟೀ ಎರಡನೇ ಸ್ಥಾನ ಪಡೆದರು. ಇದಲ್ಲದೆ, ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾದರು.
ಇನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯನ್ನು ಗುರಿಯಾಗಿಟ್ಟುಕೊಂಡು, ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನದಲ್ಲಿದ್ದಿದ್ದರೆ ತಮ್ಮ 33ರ ಹರೆಯದಲ್ಲಿ ರಾಷ್ಟ್ರೀಯ ತಂಡಕ್ಕಾಗಿ ಆಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
33ನೇ ವಯಸ್ಸಿನಲ್ಲಿ ಸೂರ್ಯಕುಮಾರ್ ಯಾದವ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿನ ಅತ್ಯುತ್ತಮ ಪ್ರದರ್ಶನದ ಪರಿಣಾಮವಾಗಿ 2021ರಲ್ಲಿ ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಚೊಚ್ಚಲ ಪ್ರವೇಶ ಪಡೆದರು.

"ಸೂರ್ಯಕುಮಾರ್ ಯಾದವ್ 30 ವರ್ಷದವರಾಗಿದ್ದಾಗ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಬಂದರು ಎಂದು ನಾನು ಎಲ್ಲೆಡೆ ಓದಿದೆ. ಅವನು ಭಾರತೀಯನಾಗಿರುವುದು ಅದೃಷ್ಟ ಎಂದು ನಾನು ಭಾವಿಸಿದ್ದೇನೆ. ಸೂರ್ಯಕುಮಾರ್ ಪಾಕಿಸ್ತಾನದಲ್ಲಿದ್ದಿದ್ದರೆ, 30 ವರ್ಷಕ್ಕಿಂತ ಮೇಲ್ಪಟ್ಟ ನೀತಿಗೆ ಬಲಿಯಾಗುತ್ತಿದ್ದನು," ಎಂದು ತಮ್ಮದೇ ದೇಶದ ಕ್ರಿಕೆಟ್ ನೀತಿಯನ್ನು ಸಲ್ಮಾನ್ ಬಟ್ ಟೀಕಿಸಿದರು.
"ರಮೀಜ್ ರಾಜಾ ನೇತೃತ್ವದ ಪಿಸಿಬಿ 30 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಸೇರಲು ಅನುಮತಿಸಲಿಲ್ಲ ಎಂದು ವರದಿ ಮಾಡಿದೆ," ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಉಲ್ಲೇಖಿಸಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಲು ಸಜ್ಜಾದ ವಿಶ್ವದ ನಂ.1 ಬ್ಯಾಟರ್ ಸೂರ್ಯಕುಮಾರ್!
"ಭಾರತ ತಂಡದಲ್ಲಿರುವವರು ಚೆನ್ನಾಗಿದ್ದಾರೆ, ತಂಡದಲ್ಲಿ ಇಲ್ಲದವರಿಗೆ ಅವಕಾಶವಿಲ್ಲ. ಆದರೆ, ಸೂರ್ಯಕುಮಾರ್ ಯಾದವ್ ಅವರು ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ 30 ವರ್ಷ ವಯಸ್ಸಿನಲ್ಲಿ ತಂಡಕ್ಕೆ ನುಗ್ಗಿದರು. ಹಾಗಾಗಿ ಅವರ ಪ್ರಕರಣ ವಿಭಿನ್ನವಾಗಿದೆ," ಎಂದು ಸಲ್ಮಾನ್ ಬಟ್ ಹೇಳಿದರು.
"ಫಿಟ್ನೆಸ್, ಬ್ಯಾಟಿಂಗ್ ರಿಫ್ಲೆಕ್ಸ್ ಮತ್ತು ಬ್ಯಾಟಿಂಗ್ ಪ್ರಬುದ್ಧತೆಯು ಬೌಲರ್ಗಳು ಏನು ಬೌಲ್ ಮಾಡುತ್ತಾರೆ ಎಂಬುದು ಸೂರ್ಯಕುಮಾರ್ ಯಾದವ್ಗೆ ಈಗಾಗಲೇ ತಿಳಿದಿರುವಂತಿದೆ," ಎಂದು ಪಾಕ್ ಮಾಜಿ ನಾಯಕ ಸಲ್ಮಾನ್ ಬಟ್ ಅವರು ಭಾರತದ ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.