ಪುಣೆ, ಏ.16: ಕರ್ನಾಟಕದ ರಣಜಿ ಆಟಗಾರ, ಡೆಲ್ಲಿ ಡೇರ್ ಡೆವಿಲ್ಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಮಾಯಾಂಕ್ ಅಗರವಾಲ್ ಅವರನ್ನು ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಹಾಡಿ ಹೊಗಳಿದ್ದಾರೆ. ಟೀಂ ಇಂಡಿಯಾಗೆ ಸೇರಲು ಮಾಯಾಂಕ್ ಗೆ ಎಲ್ಲಾ ಅರ್ಹತೆ ಇದೆ. ಆತ ಅದ್ಭುತ ಆರಂಭಿಕ ಆಟಗಾರ ಎಂದು ಯುವಿ ಹೇಳಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್ 8 ಟೂರ್ನಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಬುಧವಾರ ರಾತ್ರಿ ತನ್ನ ಮೊದಲ ಗೆಲುವಿನ ರುಚಿ ಕಂಡಿತು. ಕಿಂಗ್ಸ್ XI ಪಂಜಾಬ್ ವಿರುದ್ಧ ಡೆಲ್ಲಿ ಗೆಲುವಿನ ಬಾವುಟ ಹಿಡಿಯಲು ಮಾಯಾಂಕ್ ಆಗರವಾಲ್ ಹಾಗೂ ಯುವರಾಜ್ ಕಾರಣರಾದರು.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಐಪಿಎಲ್ 2015ರ 10ನೇ ಪಂದ್ಯದಲ್ಲಿ ಪಂಜಾಬ್ ಒಡ್ಡಿದ್ದ 166 ರನ್ ಗುರಿಯನ್ನು 19.5 ಓವರ್ಸ್ ನಲ್ಲಿ ತಲುಪಿ 5 ವಿಕೆಟ್ ಗಳ ಜಯ ದಾಖಲಿಸಿತು. ಮೂರನೇ ವಿಕೆಟ್ ಯುವರಾಜ್ ಹಾಗೂ ಅಗರವಾಲ್ 106 ರನ್ ಜೊತೆಯಾಟ ಸಾಧಿಸಿತು ಪಂದ್ಯದ ಹಣೆಬರಹ ಬದಲಾಯಿಸಿತು.

ಪಂದ್ಯದ ನಂತರ ಐಪಿಎಲ್ ಟಿ20.ಕಾಂ ಜೊತೆ ಮಾತನಾಡಿದ ಯುವರಾಜ್, ಮಾಯಾಂಕ್ ಉತ್ತಮ ಆಟಗಾರ ಒಳ್ಳೆ ಭವಿಷ್ಯವಿದೆ. ಟೀಂ ಇಂಡಿಯಾಗೆ ಒಳ್ಳೆ ಓಪನರ್ ಆಗುವ ಎಲ್ಲಾ ಪ್ರತಿಭೆ ಆತನಲ್ಲಿದೆ. ಐಪಿಎಲ್ ಆರಂಭದಿಂದಲೂ ನಾನು ಆತನ ಜೊತೆ ಮಾತುಕತೆ ನಡೆಸುತ್ತಿದ್ದೇನೆ. ಪಂಜಾಬ್ ವಿರುದ್ಧ ಆತನ ಬ್ಯಾಟಿಂಗ್ ಎಲ್ಲರನ್ನು ರಂಜಿಸಿದೆ. ಮಾಯಾಂಕ್ ಅವರ ಬ್ಯಾಟಿಂಗ್ ಶೈಲಿ ಟ್ವೆಂಟಿ20 ಕ್ರಿಕೆಟ್ ಗೆ ಹೇಳಿ ಮಾಡಿಸಿದ ಹಾಗೆ ಇದೆ ಎಂದಿದ್ದಾರೆ.
ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೊದಲಿಗೆ ಬ್ಯಾಟ್ ಬೀಸುತ್ತಿದ್ದ ಮಾಯಾಂಕ್ ಅವರು ಕಳೆದ ಋತುವಿನಿಂದ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಿದ್ದಾರೆ. ಕರ್ನಾಟಕದ ಪರ ಆಡುವ ಮಾಯಾಂಕ್ 13 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. (ಒನ್ ಇಂಡಿಯಾ ಸುದ್ದಿ)