ಬೆಂಗಳೂರು, ಮಾ.20: ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಹಾಗೂ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ ಮತ್ತೊಮ್ಮೆ ಇರಾನಿ ಕಪ್ ಎತ್ತಿದೆ. ನಾಲ್ಕನೇ ಹಾಗೂ ಕೊನೆ ದಿನವಾದ ಶುಕ್ರವಾರ ಇತರೆ ಭಾರತ ತಂಡವನ್ನು 246ರನ್ ಗಳ ಅಂತರದಿಂದ ಸೋಲಿಸಿದ ವಿನಯ್ ಕುಮಾರ್ ಪಡೆ ವಿಜಯೋತ್ಸವ ಆಚರಿಸಿದೆ.
ಇರಾನಿ ಕಪ್ ಇತಿಹಾಸದಲ್ಲೇ ಇದೇ ಎರಡನೇ ಬಾರಿ ರಣಜಿ ಚಾಂಪಿಯನ್ ತಂಡವೊಂದು ಸತತ ಎರಡನೇ ಬಾರಿಗೆ ಇರಾನಿ ಕಪ್ ಎತ್ತಿದೆ. ಈ ಮುಂಚೆ ಮುಂಬೈ ತಂಡ ಇರಾನಿ ಕಪ್ 1962-63 ಹಾಗೂ 1963-64ರಲ್ಲಿ, 1969-70 ಹಾಗೂ 1970-71ರಂದು, 1975-76 ಹಾಗೂ 1976-77ರಲ್ಲಿ ಗೆದ್ದಿದೆ. ವಿಜಯ್ ಹಜಾರೆ ಟ್ರೋಫಿ ಹಾಗೂ ರಣಜಿ ಟ್ರೋಫಿ ಗೆದ್ದಿದ್ದ ಕರ್ನಾಟಕ ಈಗ ಇರಾನಿ ಕಪ್ ತನ್ನದಾಗಿಸಿಕೊಂಡಿದೆ.

403 ರನ್ ಚೇಸ್ ಮಾಡಿದ ಇತರೆ ಭಾರತ ತಂಡಕ್ಕೆ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಹಾಗೂ ಅಭಿಮನ್ಯು ಮಿಥುನ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು.[ತಮಿಳುನಾಡು ಬಗ್ಗು ಬಡಿದು ರಣಜಿ ಟ್ರೋಫಿ ಗೆದ್ದ ಕರ್ನಾಟಕ]
ಶ್ರೇಯಸ್ ಗೋಪಾಲ್ 6 ಓವರ್ ಗಳಲ್ಲಿ 39ರನ್ನಿತ್ತು 4 ವಿಕೆಟ್ ಪಡೆದರು.ಕೇದಾರ್ ಜಾಧವ್(56), ಜಯಂತ್ ಯಾದವ್ (10), ರಿಷಿ ಧವನ್ (10), ಶಾರ್ದೂಲ್ ಠಾಕೂರ್ (10) ಪ್ರಮುಖ ವಿಕೆಟ್ ಗಳು ಶ್ರೇಯಸ್ ಪಾಲಾಯಿತು.
ಅಭಿಮನ್ಯು ಮಿಥುನ್ 10 ಓವರ್ ಗಳಲ್ಲಿ 40 ರನ್ನಿತ್ತು 3 ವಿಕೆಟ್ ಉದುರಿಸಿದರು. ಒಟ್ಟಾರೆ 43.3 ಓವರ್ಸ್ ಗಳಲ್ಲಿ 156ಸ್ಕೋರಿಗೆ ಆಲೌಟ್ ಆಗಿ ಸೊಲೊಪ್ಪಿಕೊಂಡಿತು. [ಕರ್ನಾಟಕದ ಮಡಿಲಿಗೆ ವಿಜಯ್ ಹಜಾರೆ ಟ್ರೋಫಿ]
ಇದಕ್ಕೂ ಮುನ್ನ ಎರಡನೇ ಇನ್ನಿಂಗ್ಸ್ ನಲ್ಲಿ 341/6 ಸ್ಕೋರಿನಿಂದ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೆ ಮನೀಶ್ ಪಾಂಡೆ ಶತಕದ ನೆರವು ಸಿಕ್ಕಿತು.

422 ಸ್ಕೋರಿಗೆ ಆಲೌಟ್ ಆದ ಕರ್ನಾಟಕ ಕೊನೆ ದಿನ 403ರನ್ ಚೇಸ್ ಮಾಡುವಂತೆ ಇತರೆ ಭಾರತ ತಂಡಕ್ಕೆ ಸವಾಲು ಎಸೆಯಿತು. ಮೊದಲ ಇನ್ನಿಂಗ್ಸ್ ನಲ್ಲಿ 20 ರನ್ ಲೀಡ್ ಪಡೆದುಕೊಂಡಿದ್ದ ಶೇಷ ಭಾರತ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ಕಳಪೆ ಮೊತ್ತಕ್ಕೆ ಆಲೌಟ್ ಆಗಿ ಸೋಲು ಕಂಡಿತು. [ವಿಜಯ್ ಹಜಾರೆ ದಾಖಲೆ ಸಮಗಟ್ಟಿದ ವಿನಯ್]
ಸಂಕ್ಷಿಪ್ತ ಸ್ಕೋರ್:
ಕರ್ನಾಟಕ : 244 ಹಾಗೂ 422 ಆಲೌಟ್ 110.3 ಓವರ್ಸ್
* ರವಿಕುಮಾರ್ ಸಮರ್ಥ್ 81, ಅಭಿಶೇಕ್ ರೆಡ್ಡಿ 31, ಕರುಣ್ ನಾಯರ್80, ಮನೀಶ್ ಪಾಂಡೆ 123 ನಾಟೌಟ್, ವಿನಯ್ ಕುಮಾರ್ 38, ವರುಣ್ ಅರೋನ್ 2/131, ಪ್ರಗ್ನಾನ್ ಓಜಾ 2/93, ಶಾರ್ದೂಲ್ ಠಾಕೂರ್ 5/86.
ಇತರೆ ಭಾರತ: 264 ಹಾಗೂ 156 ಆಲೌಟ್ 43.3 ಓವರ್ಸ್
ಜಿವನ್ಜೋತ್ ಸಿಂಗ್ 38, ಕೇದಾರ್ ಜಾಧವ್ 56, ಎ ಮಿಥುನ್ 3/40, ಶ್ರೇಯಸ್ ಗೋಪಾಲ್ 4/39.
ಒನ್ ಇಂಡಿಯಾ ಸುದ್ದಿ