ಹೈದರಾಬಾದ್ ಕ್ರಿಕೆಟ್ ಸಂಸ್ಥೆಯಲ್ಲಿ ಹಣಕಾಸು ಅವ್ಯವಹಾರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಆಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಕಾಂಗ್ರೆಸ್ ಮುಖಂಡ ಮೊಹಮ್ಮದ್ ಅಜರುದ್ದೀನ್ ಅವರಿಗೆ ಗುರುವಾರ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿಗೊಳಿಸಿದೆ.
ಮೊಹಮ್ಮದ್ ಅಜರುದ್ದೀನ್ ಅವರಿಗೆ ಸಂಬಂಧಿಸಿದ ಒಟ್ಟು 9 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದ್ದು, ನಂತರ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಅಜರುದ್ದೀನ್ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ತಮ್ಮ ಅಧಿಕಾರಾವಧಿಯಲ್ಲಿ ಸುಮಾರು 20 ಕೋಟಿ ರೂ.ಗಳ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕನಾಗಿಯೂ ಗುರುತಿಸಿಕೊಂಡಿರುವ ಅಜರುದ್ದೀನ್ ಅವರಿ ಇಡಿ ನೀಡಿದ ಮೊದಲ ಸಮನ್ಸ್ ಇದಾಗಿದ್ದು, ಇಂದು ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕಿದೆ.

ಹೈದರಾಬಾದ್ನ ಉಪ್ಪಲ್ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗಾಗಿ ಡೀಸೆಲ್ ಜನರೇಟರ್, ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳಿಗೆ ಮಂಜೂರ ಮಾಡಿದ 20 ಕೋಟಿ ರೂಪಾಯಿಯನ್ನು ದುರುಪಯೋಗಪಡಿಸಿಕೊಂಡ ಆರೋಪ ಮೊಹಮ್ಮದ್ ಅಜರುದ್ದೀನ್ ಮೇಲಿದೆ. ಆದರೆ, ಅವರು ತನ್ನ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಈಗ ಇಡಿ ತನಿಖೆಯಿಂದ ಈ ಪ್ರಕರಣದ ಸತ್ಯಾಂಶ ಹೊರ ಬೀಳಲಿದೆ.
ಭಾರತ ತಂಡದ ಪರ ಅಜರುದ್ದೀನ್ 1984 ರಿಂದ 2000 ರವರೆಗೆ ಆಡಿದ್ದಾರೆ. ಅವರು 1989 ರಿಂದ 1999 ರವರೆಗೆ ತಂಡದ ನಾಯಕರಾಗಿದ್ದರು. ಅವರು ನಾಯತ್ವದಲ್ಲಿ ಭಾರತ 47 ಟೆಸ್ಟ್ ಪಂದ್ಯಗಳಲ್ಲಿ 14 ರಲ್ಲಿ ಗೆಲುವು ಸಾಧಿಸಿದೆ. 19 ಟೆಸ್ಟ್ ಡ್ರಾಗಳು ಮತ್ತು 10 ಪಂದ್ಯಗಳಲ್ಲಿ ಸೋಲು ಎದುರಿಸಲಾಗಿದೆ.
ಏಕದಿನ ಕ್ರಿಕೆಟ್ನಲ್ಲಿ ಅಜರುದ್ದೀನ್ 174 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಅವರು ನಾಯಕನಾಗಿ 90 ಪಂದ್ಯಗಳನ್ನು ಗೆದ್ದರೆ, 76 ಬಾರಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ ನಾಯಕರಾಗಿರುವ ಅಜರುದ್ದೀನ್ ಅವರು ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆದರೆ ಮತದಾರರು ಅವರನ್ನು ಕೈ ಹಿಡಿಯಲಿಲ್ಲ.