
ಇದೇ ತಿಂಗಳು ಸೌರವ್ ಗಂಗೂಲಿ, ಜಯ್ ಶಾ ಬಿಸಿಸಿಐ ಅಧಿಕಾರಾವಧಿ ಮುಕ್ತಾಯ
ಈ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರಾವಧಿ ಇದೇ ತಿಂಗಳಿಗೆ ಮುಕ್ತಾಯವಾಗಲಿರುವುದರಿಂದ ಬಿಸಿಸಿಐ ಚುನಾವಣಾ ಪ್ರಕ್ರಿಯೆ ಆರಂಭಿಸಿದೆ. ಚುನಾವಣೆಗೆ ಸ್ಪರ್ಧಿಸಲು ಬಯಸುವವರು ಅಕ್ಟೋಬರ್ 11 ಮತ್ತು 12 ರಂದು ನಾಮಪತ್ರ ಸಲ್ಲಿಸಬಹುದು ಎಂದು ಘೋಷಿಸಲಾಗಿತ್ತು.
ಮುಂಬರುವ ಅಕ್ಟೋಬರ್ 18 ರಂದು ಮುಂಬೈನಲ್ಲಿ ಬಿಸಿಸಿಐ ವಾರ್ಷಿಕ ಸಭೆ ನಡೆಯಲಿದೆ. ಅಂದೇ ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಪದಾಧಿಕಾರಿಗಳ ಚುನಾವಣೆಯೂ ನಡೆಯಲಿದೆ. ಜೊತೆಗೆ ಜಂಟಿ ಕಾರ್ಯದರ್ಶಿ ಮತ್ತು ಖಜಾಂಚಿ ಆಯ್ಕೆ ಕೂಡ ನಡೆಯಲಿದೆ.
ಬಿಸಿಸಿಐ ಈಗಾಗಲೇ ವಾರ್ಷಿಕ ಸಭೆಗಳ ನೋಟಿಸ್ಗಳನ್ನು ರಾಜ್ಯ ಸಂಸ್ಥೆಗಳಿಗೆ ಕಳುಹಿಸಿದೆ. ನೋಟೀಸ್ನಲ್ಲಿ ಚುನಾವಣೆಯ ಬಗ್ಗೆ ಉಲ್ಲೇಖಿಸಲಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಲ್ಲಿ ಬಿಸಿಸಿಐ ಅನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದನ್ನು ಈ ಸಭೆ ನಿರ್ಧರಿಸುತ್ತದೆ.
BCCI ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿಯನ್ನ ಬೆಂಬಲಿಸಿದ ರವಿಶಾಸ್ತ್ರಿ: ಇತಿಹಾಸದಲ್ಲಿ ಮೊದಲ ಬಾರಿಗೆ ಬೆಂಬಲ!

ಬಿಸಿಸಿಐ ಅಧ್ಯಕ್ಷ ಪಟ್ಟಕ್ಕೇರಲು ರೇಸ್ನಲ್ಲಿ ಮುಂದಿರುವ ರೋಜರ್ ಬಿನ್ನಿ
ಇದೇ ವೇಳೆ 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಆಲ್ ರೌಂಡರ್ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ಜಯ್ ಶಾ ಕೂಡ ಕಾರ್ಯದರ್ಶಿಯಾಗಿ ಮುಂದುವರಿಯಲು ನಿರ್ಧರಿಸಿ ನಾಮಪತ್ರ ಸಲ್ಲಿಸಿದ್ದಾರೆ. ಇವರನ್ನು ಬಿಟ್ಟು ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದಲ್ಲಿ ಅವಿರೋಧವಾಗಿ ರೋಜರ್ ಬಿನ್ನಿ ಹಾಗೂ ಜಯ್ ಶಾ ಆಯ್ಕೆಯಾಗುವ ಸಾಧ್ಯತೆ ಇದೆ.

ತೀವ್ರ ಟೀಕೆಗೆ ಗುರಿಯಾಗಿದ್ದ ಸೌರವ್ ಗಂಗೂಲಿ
ಸೌರವ್ ಗಂಗೂಲಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದೇಶದಲ್ಲಿ ಮಹಿಳಾ ಕ್ರಿಕೆಟ್ ಅನ್ನು ನಿಭಾಯಿಸಿದ ರೀತಿಗೆ ತೀವ್ರ ಟೀಕೆಗೆ ಗುರಿಯಾಗಿದ್ದರು. ಅವರ ಅಧಿಕಾರಾವಧಿಯು ಕೆಲವು ಅರ್ಹತೆಗಳು ಮತ್ತು ಕೆಲವು ನ್ಯೂನತೆಗಳಿಂದ ಗುರುತಿಸಲ್ಪಟ್ಟಿದೆ.
ಇದ್ರ ಜೊತೆಗೆ ಭಾರತದ ಮಾಜಿ ಕೋಚ್ ಹಾಗೂ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಬದಲಾವಣೆ ಅಗತ್ಯವಿತ್ತು ಎಂದು ಪರೋಕ್ಷವಾಗಿ ಗಂಗೂಲಿಯನ್ನ ಕುಟುಕಿದ್ರು. ಇತಿಹಾಸದಲ್ಲಿ ಎಂದಿಗೂ ರೋಜರ್ ಬಿನ್ನಿಗೆ ಬೆಂಬಲಿಸದ ರವಿಶಾಸ್ತ್ರಿ ಇದೀಗ ಬಿನ್ನಿ ಉತ್ತಮ ಆಯ್ಕೆ ಎಂದು ಬೆಂಬಲಿಸಿದ್ದಾರೆ.
ಆಸಿಸ್ ನಾಯಕತ್ವದ ಸ್ಥಾನಕ್ಕೆ ವಾರ್ನರ್ ಹತ್ತಿರ: ನಾಯಕತ್ವದ ನಿಷೇಧ ತೆರವಿಗೆ ಒಲವು

ಜೀವನದಲ್ಲಿ ಯಾವುದು ಶಾಶ್ವತವಲ್ಲ ಎಂದು ಗಂಗೂಲಿಯನ್ನ ಕುಟುಕಿದ ರವಿಶಾಸ್ತ್ರಿ
ಸೌರವ್ ಗಂಗೂಲಿ ಮತ್ತು ರವಿಶಾಸ್ತ್ರಿ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಈ ಹಿಂದೆ ಕೋಚ್ ಆಯ್ಕೆ ವಿಚಾರದಲ್ಲಿ ಜಗಜ್ಜಾಹಿರಾಗಿದೆ. ಇದೀಗ ಸೌರವ್ ಅಧ್ಯಕ್ಷ ಸ್ಥಾನದಿಂದ ಹೊರನಡೆಯುವ ಕಾಲ ಸನಿಹವಾದಾಗ ರವಿಶಾಸ್ತ್ರಿ ಕೂಡ ತನ್ನ ಮನಸ್ಸಲ್ಲಿದ್ದ ಮಾತನ್ನ ಹೊರಹಾಕಿದ್ದಾರೆ.
''ಬಿಸಿಸಿಐ ಅಧ್ಯಕ್ಷರ ಚುನಾವಣೆಗೆ ರೋಜರ್ ಹೆಸರು ಕೇಳಿ ಬಂದಿರುವುದು ಖುಷಿ ತಂದಿದೆ. 1983ರ ವಿಶ್ವಕಪ್ನಲ್ಲಿ ಅವರು ನನ್ನ ಸಹ ಆಟಗಾರರಾಗಿದ್ದರು. ಅವರು ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡುವ ಉತ್ತಮ ಅವಕಾಶವಿದೆ. ಈಗ ಅವರು ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡರೆ ಬಿಸಿಸಿಐ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್ ವಿಜೇತ ತಂಡದ ಆಟಗಾರನನ್ನು ಹೊಂದಲು ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಮುಂಬೈ ಪ್ರೆಸ್ ಕ್ಲಬ್ನಲ್ಲಿ ಬುಧವಾರ ನಡೆದ ಸ್ಟಾರ್ ಸ್ಪೋರ್ಟ್ಸ್ ಸಂವಾದದಲ್ಲಿ ರವಿಶಾಸ್ತ್ರಿ ಅವರು ಈ ವಿಷಯಗಳ ಕುರಿತು ಮಾತನಾಡಿದರು.
''ಬಿಸಿಸಿಐ ಅಧ್ಯಕ್ಷರು ಯಾರೂ ಎರಡನೇ ಬಾರಿಗೆ ಅಧ್ಯಕ್ಷರಾಗಲಿಲ್ಲ. ಹಾಗಾಗಿ ಗಂಗೂಲಿ ಸ್ಥಾನವನ್ನ ಬಿನ್ನಿಗೆ ನೀಡುವುದು ಬಹುತೇಕ ಔಪಚಾರಿಕವಾಗಿದ್ದು, ಇದು ಒಳ್ಳೆಯದಿದೆ. ಏಕೆಂದರೆ ಆ ಸ್ಥಾನದಲ್ಲಿ ಕೆಲಸ ಮಾಡುವ ಅವಕಾಶ ಮತ್ತೊಬ್ಬ ಕ್ರಿಕೆಟಿಗನಿಗೆ ಸಿಗಲಿದೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ'' ಎಂದು ರವಿಶಾಸ್ತ್ರಿ ಹೇಳಿದರು.
ಬೌಲಿಂಗ್ ಅಲ್ಲ: ಭಾರತದ ದೊಡ್ಡ ತಲೆನೋವು ಇದು ಎಂದ ಮಾಜಿ ಕೋಚ್ ರವಿ ಶಾಸ್ತ್ರಿ!

ದಾದಾಗೆ ಗಾಳ ಹಾಕಲು ಪ್ರಯತ್ನಿಸಿತ್ತಾ ಬಿಜೆಪಿ?
ಈ ಪರಿಸ್ಥಿತಿಯಲ್ಲಿ ಗಂಗೂಲಿ ಅವರು ಬಿಜೆಪಿಗೆ ಸೇರದ ಕಾರಣ ಎರಡನೇ ಬಾರಿಗೆ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ನೀಡದೆ ಪಕ್ಷವು ಅವಮಾನ ಮಾಡಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಕುನಾಲ್ ಘೋಷ್ ಮಾತನಾಡಿ, ಕಳೆದ ವರ್ಷ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಸೌರವ್ ಗಂಗೂಲಿ ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿಯನ್ನು ಜನರಲ್ಲಿ ಹರಡಲು ಬಿಜೆಪಿ ಯತ್ನಿಸಿತ್ತು.
ಕಳೆದ ಮೇ ತಿಂಗಳಲ್ಲಿ ಗಂಗೂಲಿ ಅವರ ಮನೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಔತಣಕೂಟವನ್ನು ಉಲ್ಲೇಖಿಸಿದ ಕುನಾಲ್ ಘೋಷ್, ಗಂಗೂಲಿ ಅವರು ಪಕ್ಷಕ್ಕೆ ಸೇರದ ಕಾರಣ ಪಕ್ಷವು ರಾಜಕೀಯವಾಗಿ ಅವರನ್ನು ಅವಮಾನಿಸಲು ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು. ಜಯಶಾ ಎರಡನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾದಾಗ ಗಂಗೂಲಿಯನ್ನು ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆ ಮಾಡಲು ಏಕೆ ಸಾಧ್ಯವಾಗಲಿಲ್ಲ ಎಂದು ಕುನಾಲ್ ಘೋಷ್ ಪ್ರಶ್ನಿಸಿದ್ದಾರೆ.

ಟಿಎಂಸಿ ದಾಳಿಗೆ ಬಿಜೆಪಿ ಪ್ರತಿದಾಳಿ
ಇನ್ನು ಈ ಟೀಕೆಗಳಿಗೆ ಉತ್ತರಿಸಿದ ಬಿಜೆಪಿ, ತೃಣಮೂಲ ಕಾಂಗ್ರೆಸ್ ಪಕ್ಷದ ಆರೋಪಗಳು ಆಧಾರರಹಿತವಾಗಿವೆ. ಸೌರವ್ ಗಂಗೂಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಎಂದಿಗೂ ಪ್ರಯತ್ನಿಸಲಿಲ್ಲ ಎಂದು ವಿವರಿಸಲಾಗಿದೆ. ಏತನ್ಮಧ್ಯೆ, ಶೀಘ್ರದಲ್ಲೇ ಐಸಿಸಿ ಅಧ್ಯಕ್ಷರ ಚುನಾವಣೆ ನಡೆಯಲಿರುವ ಕಾರಣ, ಗಂಗೂಲಿ ಬಿಸಿಸಿಐ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತೆ ಮುಂದಾಗಲಿಲ್ಲ ಎಂದು ಸಮರ್ಥಿತಿಸಿಕೊಂಡಿದೆ.


Click it and Unblock the Notifications












