
ನಾಯಕತ್ವ ತ್ಯಜಿಸುವ ಕೊಹ್ಲಿ ನಿರ್ಧಾರಕ್ಕೆ ಸುದೀಪ್ ಬೆಂಬಲ
ಇತ್ತೀಚಿಗಷ್ಟೇ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಪತ್ರವೊಂದನ್ನು ಹಂಚಿಕೊಂಡಿದ್ದ ವಿರಾಟ್ ಕೊಹ್ಲಿ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಣೆ ಮಾಡಿದ್ದರು. ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ನಟ ಕಿಚ್ಚ ಸುದೀಪ್ ವಿರಾಟ್ ಕೊಹ್ಲಿ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿಯೇ ಇರುತ್ತದೆ, ಅವರು ಆಟವನ್ನು ಮತ್ತಷ್ಟು ಬಲಪಡಿಸುವುದಕ್ಕೋಸ್ಕರ ಈ ನಿರ್ಧಾರ ಕೈಗೊಂಡಿರುವುದರಿಂದ ಅವರ ನಿರ್ಧಾರಕ್ಕೆ ಬೆಂಬಲ ಇದೆ ಎಂದು ಕಿಚ್ಚ ಸುದೀಪ್ ಹೇಳಿದರು.

ಈ ತಂಡದಲ್ಲಿ ಒಳ್ಳೊಳ್ಳೆ ಆಟಗಾರರಿದ್ದಾರೆ ಎಂದ ಸುದೀಪ್
ಇನ್ನು ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದರೆ ಹೆಚ್ಚೇನೂ ಚಿಂತಿಸುವ ಅಗತ್ಯವಿಲ್ಲ ಏಕೆಂದರೆ ಪ್ರಸ್ತುತ ಭಾರತ ತಂಡದಲ್ಲಿ ಇರುವ ಆಟಗಾರರೆಲ್ಲರೂ ಉತ್ತಮರೇ, ಅವರಲ್ಲಿ ಯಾರು ನಾಯಕರಾದರೂ ಉತ್ತಮ ಕಾರ್ಯವನ್ನು ನಿರ್ವಹಿಸಲಿದ್ದಾರೆ ಎಂದು ಕಿಚ್ಚ ಸುದೀಪ್ ವಿಶ್ವಾಸ ವ್ಯಕ್ತಪಡಿಸಿದರು.

ಕೊಲ್ಕತ್ತಾ ವಿರುದ್ಧದ ಬೆಂಗಳೂರು ಸೋಲಿನ ಕುರಿತು ಮಾತನಾಡಿದ ಸುದೀಪ್
ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ಕೇವಲ 92 ರನ್ಗಳಿಗೆ ಆಲ್ ಔಟ್ ಆಯಿತು, ಈ ಪಂದ್ಯದಲ್ಲಿ 10 ಓವರ್ಗಳಲ್ಲಿ 94 ರನ್ ಬಾರಿಸಿ 9 ವಿಕೆಟ್ಗಳ ಭರ್ಜರಿ ಜಯವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆಚರಿಸಿಕೊಂಡಿತು. ಹೀಗೆ ಕೋಲ್ಕತ್ತಾ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯವಾಗಿ ಸೋತ ಪಂದ್ಯವನ್ನು ಸ್ವತಃ ಕಿಚ್ಚ ಸುದೀಪ್ ಅವರೇ ಮೈದಾನಕ್ಕೆ ತೆರಳಿ ತಮ್ಮ ಪತ್ನಿ ಜೊತೆ ವೀಕ್ಷಿಸಿದ್ದರು. ಈ ಕುರಿತು ಮಾತನಾಡಿದ ಕಿಚ್ಚ ಸುದೀಪ್ ಪಂದ್ಯವೆಂದಮೇಲೆ ಸೋಲು ಗೆಲುವು ಮಾಮೂಲು, ಆ ದಿನದಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಉತ್ತಮ ಆಟವನ್ನಾಡಿದ ಕಾರಣ ಗೆಲುವನ್ನು ಸಾಧಿಸಿತು ಹಾಗೂ ಆ ತಂಡದಲ್ಲಿರುವ ಹಲವಾರು ಆಟಗಾರರು ನಮ್ಮ ಭಾರತೀಯರೇ ಆಗಿರುವ ಕಾರಣ ಪ್ರಶಂಸಿಸೋಣ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.


Click it and Unblock the Notifications
