ಮಂಗಳೂರು, ಏ.1: : 'ನನ್ನ ತವರಲ್ಲಿ ಅಂದರೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡಬೇಕು, ಟೆಸ್ಟ್ ಸೆಂಚುರಿ ಬಾರಿಸಬೇಕು ಎಂಬ ಬಯಕೆ ನನ್ನದಾಗಿದೆ' ಎಂದು ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಕೆ. ಎಲ್. ರಾಹುಲ್ ತಮ್ಮ ಮನದಾಳ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಸೇರಿದಂತೆ ಕ್ರೀಡೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಆಶಯವನ್ನು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಪದಾಧಿಕಾರಿಗಳಲ್ಲಿ ರಾಹುಲ್ ವ್ಯಕ್ತಪಡಿಸಿದರು. [ರಾಹುಲ್ : ಮಂಗಳೂರಿನಿಂದ ಮೆಲ್ಬೋರ್ನ್ ತನಕ]
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ನ ಮಂಗಳೂರು ವಲಯದ ಆಶ್ರಯದಲ್ಲಿ ನಗರದ ಓಶಿಯನ್ಪರ್ಲ್ ಹೊಟೇಲ್ನಲ್ಲಿ ಆಯೋಜಿಸಲಾದ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕನಸು ನನಸಾಗಿದೆ: ಎಳೆಯ ವಯಸ್ಸಿನಲ್ಲಿ ನಾನು ಕಂಡ ಕನಸು ಇದೀಗ ನನಸಾಗಿದೆ. ಯಶಸ್ಸಿಗೆ ಕಠಿಣ ಪರಿಶ್ರಮವೇ ಮಾರ್ಗ. ಇದೀಗ ಅತ್ಯಂತ ಸಂತೋಷ ಮತ್ತು ಖುಷಿಯ ದಿನಗಳಾಗಿವೆ. ಹೆತ್ತವರು ಹಾಗೂ ಶಾಲಾ ದಿನದಲ್ಲಿ ಶಿಕ್ಷಕರ ಸಹಕಾರ ಮತ್ತು ದೈಹಿಕ ಶಿಕ್ಷಕರ ಮಾರ್ಗದರ್ಶನದ ಮೂಲಕ ನನ್ನ ಕ್ರಿಕೆಟ್ ಬದುಕು ಈ ಮಟ್ಟದಲ್ಲಿ ಗಮನಸೆಳೆದಿದೆ. [ರಾಹುಲ್ ಅತ್ಯಂತ ಪ್ರಬುದ್ಧ ಆಟಗಾರ: ಸ್ಯಾಮುಯಲ್]
ಚಿಕ್ಕಂದಿನಿಂದಲೇ ಕ್ರಿಕೆಟ್ ಕನಸು ಕಂಡಿದ್ದೆ. ನಿರಂತರ ಅಭ್ಯಾಸ, ಶ್ರಮ, ಆತ್ಮವಿಶ್ವಾಸದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಆಸ್ಟ್ರೇಲಿಯಾ ವಿರುದ್ದ ಮೊದಲ ಪಂದ್ಯದಲ್ಲಿ ನನಗೆ ಸ್ವಲ್ಪ ನಿರಾಶೆಯಾಗಿತ್ತು.
ಆದರೆ, ಕಠಿಣ ಅಭ್ಯಾಸದ ಮೂಲಕ ಮುಂದಿನ ಪಂದ್ಯದಲ್ಲಿ ಶತಕದ ಸಾಧನೆ ಮಾಡಲು ಸಾಧ್ಯವಾಯಿತು. ಇದೇ ವೇಳೆ 2014ರಲ್ಲಿ ನಡೆದ ವಿವಿಧ ಟೂರ್ನ್ಮೆಂಟ್ಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದರು. [ಚೊಚ್ಚಲ ಶತಕ ಸಿಡಿಸಿ, ಗವಾಸ್ಕರ್ ಸಮಕ್ಕೆ ನಿಂತ ರಾಹುಲ್]
ಕೆಪಿಎಲ್ ಮತ್ತೆ ಆರಂಭ: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಮಾತನಾಡಿ, ರಣಜಿ, ಇರಾನಿ ಟ್ರೋಫಿ ಸೇರಿದಂತೆ ಕರ್ನಾಟಕ ತಂಡವು ಉತ್ತಮ ಸಾಧನೆ ದಾಖಲಿಸಿದೆ. ಹೊಸ ಆಟಗಾರರು ದೇಶದ ಪರವಾಗಿ ಆಟವಾಡಲು ಆಯ್ಕೆಯಾಗುತ್ತಿದ್ದಾರೆ. ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಬಾರಿ ಕೆಪಿಎಲ್ ಪಂದ್ಯಾಟ ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದರು. [ತ್ರಿಶತಕ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್]
14 ವರ್ಷ ವಯೋಮಿತಿಯೊಳಗಿನ ಮಕ್ಕಳಲ್ಲಿ ಕ್ರಿಕೆಟ್ ಆಸಕ್ತಿ ಬೆಳೆಸಿಕೊಂಡು, ಅವರನ್ನು ಮುಂದೆ ಉತ್ತಮ ಕ್ರಿಕೆಟ್ಪಟು ಮಾಡಬೇಕಾದ ಉದ್ದೇಶದಿಂದ ಜೂನಿಯರ್ಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಗ್ರಾಮೀಣ ಭಾಗದ ಪ್ರತಿಭೆಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದರು.[ಪ್ರಥಮ ದರ್ಜೆ ಕ್ರಿಕೆಟ್ ಟಾಪ್ 10 ಪಟ್ಟಿಯಲ್ಲಿ ರಾಹುಲ್]
ಮಂಗಳೂರಿನಲ್ಲಿ ಸ್ಟೇಡಿಯಂ : ಮಂಗಳೂರಿನಲ್ಲಿ ಈ ಹಿಂದೆ ಕ್ರಿಕೆಟ್ ಸ್ಟೇಡಿಯಂಗೆಂದು ಜಾಗ ನಿಗದಿ ಮಾಡಲಾಗಿತ್ತು. ಆದರೆ ಅಂದು ಅದು ಸಾಧ್ಯವಾಗಲಿಲ್ಲ. ಈ ಬಾರಿ ಸ್ಟೇಡಿಯಂ ನಿರ್ಮಾಣ ಆಗಲಿದೆ. ಹೊಸ ಜಾಗದ ಹುಡುಕಾಟ ನಡೆಸುತ್ತಿದ್ದೇವೆ. ಬುಧವಾರ ಜಿಲ್ಲಾಧಿಕಾರಿಗಳ ಜತೆ ಸ್ಥಳ ಪರಿಶೀಲನೆ ಮಾಡಲಿದ್ದೇವೆ. ಕ್ರೀಡಾ ಸಚಿವರು, ಜಿಲ್ಲಾಧಿಕಾರಿ ಕೂಡ ಈ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ ಎಂದರು.[ತಮಿಳುನಾಡು ಬಗ್ಗು ಬಡಿದು ಟ್ರೋಫಿ ಎತ್ತಿದ ಕರ್ನಾಟಕ]
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಖಜಾಂಚಿ ಡಾ. ಪಿ. ದಯಾನಂದ ಪೈ ಮಾತನಾಡಿ, ದ.ಕ. ಜಿಲ್ಲೆ ಕ್ರಿಕೆಟ್ ಸೇರಿದಂತೆ ಎಲ್ಲ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿದೆ. ರಾಹುಲ್ ಭಾರತದ ತಂಡದಲ್ಲಿ ಆಡುತ್ತಿರುವುದು ಯುವ ಕ್ರೀಡಾಳುಗಳಿಗೆ ಸ್ಪೂರ್ತಿ ಎಂದರು.