ಅತಿ ಶೀಘ್ರದಲ್ಲೇ ಬೆಂಗಳೂರು ತಂಡದ ನಾಯಕತ್ವ ತ್ಯಜಿಸಲಿದ್ದಾರೆ ಕೊಹ್ಲಿ
ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದರ ಕುರಿತಾಗಿ ತೆಗೆದುಕೊಂಡಿರುವ ನಿರ್ಣಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುವ ವೇಳೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ತ್ಯಜಿಸಲಿದ್ದಾರೆ ಎಂಬುದರ ಕುರಿತು ಕೂಡ ಕೊಹ್ಲಿ ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮಾ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕತ್ವದ ಕುರಿತು ಹೆಚ್ಚಿನ ಗಮನ ಹರಿಸುವ ಸಲುವಾಗಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ವಿದಾಯ ಹೇಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಜ್ಕುಮಾರ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಹೌದು, ವಿರಾಟ್ ಕೊಹ್ಲಿ ಆದಷ್ಟು ಬೇಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿದು ಓರ್ವ ಬ್ಯಾಟ್ಸ್ಮನ್ ಆಗಿ ಬೆಂಗಳೂರು ತಂಡದ ಪರ ಆಡಲಿದ್ದಾರೆ ಎಂದು ರಾಜ್ಕುಮಾರ್ ಶರ್ಮಾ ಹೇಳಿಕೆ ನೀಡಿದ್ದಾರೆ.
ನಾಯಕನಾಗಿ ಕೊಹ್ಲಿ ಯಶಸ್ವಿ
ವಿರಾಟ್ ಕೊಹ್ಲಿ ಭಾರತದ ಟಿ ಟ್ವೆಂಟಿ ನಾಯಕನಾಗಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದು ಅತಿ ಯಶಸ್ವಿಯಾದ ನಾಯಕ ಎನಿಸಿಕೊಂಡಿದ್ದಾರೆ. ಐಸಿಸಿ ಟ್ರೋಫಿಯನ್ನು ನಾಯಕನಾಗಿ ಗೆಲ್ಲಿಸಿಲ್ಲ ಎಂಬುದನ್ನು ಬಿಟ್ಟರೆ ಓರ್ವ ನಾಯಕನಾಗಿ ಪ್ರತಿ ಪಂದ್ಯಗಳಲ್ಲಿಯೂ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಯಶಸ್ವಿಯಾಗಿದ್ದಾರೆ ಎಂದು ರಾಜ್ಕುಮಾರ್ ಶರ್ಮಾ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ.
ನಾಯಕನಾಗಿ ಟಿ ಟ್ವೆಂಟಿಯಲ್ಲಿ ಕೊಹ್ಲಿ ಸಾಧನೆ
ಇನ್ನು ವಿರಾಟ್ ಕೊಹ್ಲಿ ನಾಯಕನಾಗಿ ಭಾರತ ತಂಡವನ್ನು 45 ಪಂದ್ಯಗಳಲ್ಲಿ ಮುನ್ನಡೆಸಿದ್ದು, 27 ಪಂದ್ಯಗಳಲ್ಲಿ ಭಾರತ ಜಯ ಗಳಿಸಿದೆ, 14 ಪಂದ್ಯಗಳಲ್ಲಿ ಸೋಲುಂಡಿದೆ, 2 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ ಮತ್ತು ಉಳಿದೆರಡು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ. ಹೀಗೆ ಟಿ ಟ್ವೆಂಟಿ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಎಂಎಸ್ ಧೋನಿ ನಂತರ ಅತಿ ಹೆಚ್ಚು ಯಶಸ್ಸು ಗಳಿಸಿದ ಭಾರತದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.