
ನವದೆಹಲಿ, ಡಿಸೆಂಬರ್ 18: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ನಲ್ಲಿ ಭಾರತ 146 ರನ್ ಹೀನಾಯ ಸೋಲನುಭವಿಸಿದ್ದರಿಂದ ಸಹಜವಾಗೇ ಕೆಲ ಕ್ರಿಕೆಟ್ ಅಭಿಮಾನಿಗಳಿಗೆ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ಮೇಲೆ ಅಸಮಾಧಾನವಿದೆ. ಈ ನಡುವೆ ತಂಡದಲ್ಲಿ ಕೊಹ್ಲಿ, ರವಿ ಶಾಸ್ತ್ರಿಯ ಪಾತ್ರವನ್ನು ಮೌಲ್ಯ ಮಾಪನಕ್ಕೆ ಒಳಪಡಿಸಬೇಕು ಎಂದು ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
'ಐಪಿಎಲ್2019ರ ಆಟಗಾರರ ಹರಾಜು' ವಿಶೇಷ ಪುಟಕ್ಕಾಗಿ ಭೇಟಿಕೊಡಿ
ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು 31 ರನ್ನಿಂದ ಗೆದ್ದಿತ್ತು. ಆದರೆ ದ್ವಿತೀಯ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವನ್ನಾಚರಿಸಿತು. ಸರಣಿಯೀಗ 1-1ರ ಸಮಬಲದಲ್ಲಿದೆ. ಸರಣಿ ಗೆಲ್ಲಬೇಕಾದರೆ ಭಾರತ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಬೇಕು ಇಲ್ಲವೆ ಒಂದರಲ್ಲಿ ಗೆದ್ದು ಮತ್ತೊಂದರಲ್ಲಿ ಡ್ರಾ ಸಾಧಿಸಬೇಕು.
ಆಸ್ಟ್ರೇಲಿಯಾ ತಂಡ ಈ ಋತುವಿನ ಹೆಚ್ಚಿನ ಪಂದ್ಯಗಳನ್ನು ಸೋತು ದುರ್ಬಲ ತಂಡವಾಗಿ ಗುರುತಿಸಿಕೊಂಡಿತ್ತು. ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿಷೇಧಕ್ಕೊಳಗಾದ ನಂತರ ಆಸೀಸ್ ಬಲಗುಂದಿದ್ದು ನಿಜವೇ. ಹೀಗಾಗಿಯೇ ಭಾರತ ತಂಡ ಆಸೀಸ್ ಎದುರು ಸರಣಿ ಗೆದ್ದು ಇತಿಹಾಸ ನಿರ್ಮಿಸಲು ಅವಕಾಶವಿದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಸರಣಿ ಗೆಲುವು ಈಗ ಅನಿಶ್ಚಿತ ಎನ್ನುವಂತಿದೆ.
ತಂಡದ ಆಯ್ಕೆ ಸರಿಯಾಗಿಲ್ಲ. ಹೀಗಾಗಿಯೇ ಭಾರತ ಸೋತಿದೆ ಎಂಬುದು ಗವಾಸ್ಕರ್ ಅಭಿಪ್ರಾಯ. ಉಳಿದಿರುವ ಪಂದ್ಯಗಳಲ್ಲೂ ಭಾರತ ಸೋತರೆ, ಕೋಚ್ ರವಿ ಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿಯನ್ನು ಮೌಲ್ಯಮಾಪನಕ್ಕೊಳಪಡಿಸಲೇಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.