ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ವಿಶ್ವ ದರ್ಜೆಯ ಕ್ರೀಡಾ ಸಂಕೀರ್ಣ ಪಡುಕೋಣೆ - ದ್ರಾವಿಡ್ ಕ್ರೀಡಾ ಶ್ರೇಷ್ಥತಾ ಕೇಂದ್ರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಇಲ್ಲಿನ ಸೌಲಭ್ಯತೆಗೆ ಮನಸೋತಿದ್ದಾರೆ. ಪಡುಕೋಣೆ - ದ್ರಾವಿಡ್ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಯುವ ಜನತೆ ಬಳಸಿಕೊಳ್ಳಲು ಸಚಿವರು ಕರೆ ನೀಡಿದ್ದಾರೆ.
ಯಲಹಂಕದಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಪಡುಕೋಣೆ - ದ್ರಾವಿಡ್ ಕ್ರೀಡಾ ಶ್ರೇಷ್ಠತಾ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಅನುರಾಗ್ ಠಾಕೂರ್ ವಿದ್ಯಾರ್ಥಿಗಳ ಜೊತೆ ಕೆಲ ಸಮಯ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಇಲ್ಲಿನ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದಿರುವ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಬೇಕಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಂತೆ ಪಡುಕೋಣೆ - ದ್ರಾವಿಡ್ ಕ್ರೀಡಾ ಶ್ರೇಷ್ಥತಾ ಕೇಂದ್ರದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಅನುರಾಗ್ ಠಾಕೂರ್ ಜೊತೆಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್, ಬ್ಯಾಡ್ಮಿಂಟನ್ ಅಕಾಡೆಮಿಯ ಮುಖ್ಯ ಕೋಚ್ ವಿಮಲ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇನ್ನು ಪಡುಕೋಣೆ - ದ್ರಾವಿಡ್ ಕ್ರೀಡಾ ಶ್ರೇಷ್ಥತಾ ಕೇಂದ್ರದಲ್ಲಿ ಬ್ಯಾಡ್ಮಿಂಟನ್, ಫುಟ್ಬಾಲ್, ಸ್ಕ್ವಾಷ್, ಈಜು, ಟೆನಿಸ್ ಹಾಗೂ ಬಾಸ್ಕೆಟ್ ಬಾಲ್ ಸೇರಿದಂತೆ ಇನ್ನೂ ಮುಂತಾದ ಕ್ರೀಡೆಗಳ ತರಬೇತಿಯನ್ನು ನೀಡಲಾಗುತ್ತದೆ. ಇತ್ತೀಚಿಗಷ್ಟೆ ಪಡುಕೋಣೆ - ದ್ರಾವಿಡ್ ಕ್ರೀಡಾ ಶ್ರೇಷ್ಥತಾ ಕೇಂದ್ರವನ್ನು ಭಾರತ ಕ್ರೀಡಾ ಪ್ರಾಧಿಕಾರವು ಈಜು ಮತ್ತು ಈಜು ಎರಡರಲ್ಲಿಯೂ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರ ಎಂದು ಪರಿಗಣಿಸಿದೆ.
ಇನ್ನು ಅನುರಾಗ್ ಠಾಕೂರ್ ಪಡುಕೋಣೆ - ದ್ರಾವಿಡ್ ಕ್ರೀಡಾ ಶ್ರೇಷ್ಥತಾ ಕೇಂದ್ರಕ್ಕೆ ಭೇಟಿ ನೀಡಿದ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಲ್ಲಿಗೆ ಭೇಟಿ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.