ಭಾರತ vs ಇಂಗ್ಲೆಂಡ್: ಅಂತಿಮ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 3 ಪ್ರಮುಖ ಬದಲಾವಣೆ ಸಂಭವ
ಬೆಂಗಳೂರು, ಸೆಪ್ಟೆಂಬರ್ 7: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಈಗ ಅಂತಿಮ ಘಟ್ಟವನ್ನು ತಲುಪಿದೆ. ಸುದೀರ್ಘ ಸರಣಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳು ಮುಕ್ತಾಯವಾಗಿದ್ದು ಅಂತಿಮ ಪಂದ್ಯದತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದ್ದು ಕೊನೆಯ ಪಂದ್ಯವನ್ನು ಗೆದ್ದು ಇಂಗ್ಲೆಂಡ್ ನೆಲದಲ್ಲಿಯೂ ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿ ಟೀಮ್ ಇಂಡಿಯಾ ಇದೆ.
ಸರಣಿಯಲ್ಲಿ ಹೆಡಿಂಗ್ಲೆ ಪಂದ್ಯವನ್ನು ಹೊರತು ಪಡಿಸಿ ಉಳಿದಂತೆ ಅಮೋಘ ಪ್ರದರ್ಶನ ನೀಡುರುವ ಟೀಮ್ ಇಂಡಿಯಾ ಕ್ರಿಕೆಟ್ ಜನಕರ ನಾಡಿನಲ್ಲಿಯೂ ತಾನು ಬಲಿಷ್ಠ ತಂಡ ಎಂಬುದನ್ನು ಸಾಬೀತು ಪಡಿಸಿದೆ. ಇಂಗ್ಲೆಂಡ್ ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿರುವ ಅಂತಿಮ ಪಂದ್ಯದಲ್ಲಿ ಭಾರತ ಕನಿಷ್ಠ ಡ್ರಾ ಮಾಡಿಕೊಂಡರೂ ಸರಣಿಯನ್ನು ವಶಕ್ಕೆ ಪಡೆದುಕೊಳ್ಳಲಿದೆ. 2-1 ಮುನ್ನಡೆಯಲ್ಲಿ ಟೀಮ್ ಇಂಡಿಯಾ ಇರುವ ಕಾರಣ ಸರಣಿಯನ್ನು ಕಳೆದುಕೊಳ್ಳುವ ಆತಂಕ ಭಾರತ ತಂಡಕ್ಕಿಲ್ಲ. ಆದರೆ ಇಂಗ್ಲೆಂಡ್ಗೆ ತವರಿನಲ್ಲಿ ಸರಣಿ ಕಳೆದುಕೊಳ್ಳುವ ಮುಖಭಂಗದಿಂದ ತಪ್ಪಿಸಿಕೊಳ್ಳಬೇಕಾದರೆ ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಿದೆ.
ಈ ಮಧ್ಯೆ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೂರು ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯುವ ಸಾಧ್ಯತೆಯಿದೆ. ಯಾರೆಲ್ಲಾ ಆಟಗಾರರು ಅಂತಿಮ ಪಂದ್ಯಕ್ಕೆ ಸೇರ್ಪಡೆಯಾಗಬಹುದು ಎಂಬುದನ್ನು ನೋಡೋಣ..
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಜಿಂಕ್ಯಾ ರಹಾನೆ ಪ್ರದರ್ಶನ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಸರಣಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ರಹಾನೆ ಪ್ರದರ್ಶನ ಅತ್ಯಂತ ಕಳಪೆಯಾಗಿರುವುದೇ ಇದಕ್ಕೆ ಕಾರಣ. ಆಡಿದ ನಾಲ್ಕು ಪಂದ್ಯಗಳ ಪೈಕಿ ರಹಾನೆ ಕೇವಲ ಒಂದು ಅರ್ಧ ಶತಕವನ್ನು ಮಾತ್ರವೇ ಗಳಿಸಲು ಸಾಧ್ಯವಾಗಿದೆ. ಈ ಸರಣಿಗೂ ಮುನ್ನವೇ ರಹಾನೆ ತಮ್ಮ ಲಯವನ್ನು ಕಳೆದುಕೊಂಡಿದ್ದರು. ಆದರೆ ಈ ಸರಣಿಯಲ್ಲಿ ರಹಾನೆ ಸಂಪೂರ್ಣ ವಿಫಲವಾಗಿವ ಮೂಲಕ ನಿರಾಸೆ ಮೂಡಿಸಿದ್ದಾರೆ. ತಂಡದ ಮ್ಯಾನೇಜ್ಮೆಂಟ್ ರಹಾನೆಗೆ ಬೆಂಬಲಕ್ಕೆ ನಿಂತಿದೆ. ಆದರೆ ಸರಣಿಯ ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ವಶಕ್ಕೆ ಪಡೆಯುವ ಗುರಿಯನ್ನು ಹೊಂದಿರುವ ಭಾರತ ಮತ್ತೊಂದು ಅವಕಾಶ ರಹಾನೆಗೆ ನೀಡುವ ಬದಲು ಮತ್ತೋರ್ವ ಪ್ರತಿಭಾನ್ವಿತ ಆಟಗಾರ ಹನುಮ ವಿಹಾರಿಗೆ ನೀಡುವ ಸಾಧ್ಯತೆಯಿದೆ. ಟೆಸ್ಟ್ ಮಾದರಿಗೆ ಹೇಳಿ ಮಾಡಿಸಿದಂತಿರುವ ವಿಹಾರಿ ಇಂಗ್ಲೆಂಡ್ ಸರಣಿಗೂ ಮುನ್ನ ಕೌಂಟಿ ಕ್ರಿಕೆಟ್ನಲ್ಲಿಯೂ ಭಾಗವಹಿಸಿದ್ದರು. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿಹಾರಿ ನೀಡಿದ ಪ್ರದರ್ಶನ ತಂಡದ ಐತಿಗಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು.
ಈ ಬಾರಿಯ ಇಂಗ್ಲೆಂಡ್ ಸರಣಿಯಲ್ಲಿ ಅತಿ ಹೆಚ್ಚು ಚರ್ಚೆಯಾಗಿರುವ ಹೆಸರು ಆರ್ ಅಶ್ವಿನ್. ಕಳೆದ ನಾಲ್ಕು ಪಂದ್ಯಗಳಲ್ಲಿಯೂ ಆರ್ ಅಶ್ವಿನ್ಗೆ ಒಂದೇ ಒಂದು ಅವಕಾಶ ನೀಡದೆ ಬೆಂಚ್ ಕಾಯುವಂತಾಗಿದೆ. ಇದು ಕ್ರಿಕೆಟ್ ಪಂಡಿತರನ್ನು ಕೂಡ ಅಚ್ಚರಿಗೆ ದೂಡಿದೆ. ಆರ್ ಅಶ್ವಿನ್ ವಿಚಾರದಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಹಠಮಾರಿ ಧೋರಣೆ ತಾಳುತ್ತಿದೆ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗಿದೆ. ಈಗ ಸರಣಿಯ ಕೊನೆಯ ಪಂದ್ಯ ಮಾತ್ರವೇ ಬಾಕಿಯಿರುವ ಕಾರಣ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾದ ಈ ಪ್ರಮುಖ ಬೌಲರ್ಗೆ ಅವಕಾಶ ದೊರೆಯುವ ಸಾಧ್ಯತೆಯಿದೆ.
ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್ ಜೊತೆಗೆ ಕಣಕ್ಕಿಳಿಯಲು ನಿರ್ಧಾರ ಮಾಡಿತ್ತು. ಹೀಗಾಗಿ ಓರ್ವ ಸ್ಪಿನ್ನರ್ ಸ್ಥಾನದಲ್ಲಿ ರವೀಂದ್ರ ಜಡೇಜಾ ಸೂಕ್ತ ಎಂಬ ನಿರ್ಧಾರವನ್ನು ತಂಡ ತೆಗೆದುಕೊಂಡಿತ್ತು. ಇಂಗ್ಲೆಂಡ್ ತಂಡದ ಅಗ್ರ ಕ್ರಮಾಂಕದಲ್ಲಿ ಎಡಗೈ ಆಟಗಾರರು ಹೆಚ್ಚಿರುವ ಕಾರಣದಿಂದಾಗಿ ಜಡೇಜಾ ಸೂಕ್ತ ಎಂಬ ನಿರ್ಧಾರ ಮಾಡಲಾಗಿದೆ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಆರ್ ಅಶ್ವಿನ್ಗೆ ಅವಕಾಶ ನಿಡುವ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಅತ್ಯಂತ ಕುತೂಹಲದ ಸಂಗತಿಯಾಗಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊಹಮ್ಮದ್ ಶಮಿಗೆ ವಿಶ್ರಾಂತಿಯನ್ನು ನೀಡಿತ್ತು. ಶಮಿ ಬದಲಿಗೆ ಉಮೇಶ್ ಯಾದವ್ಗೆ ಅವಕಾಶ ನೀಡಲಾಗಿತ್ತು. ಈ ಅವಕಾಶವನ್ನು ಉಮೇಶ್ ಯಾದವ್ ಅದ್ಭುತವಾಗಿ ಬಳಸಿಕೊಂಡಿದ್ದು ಓವಲ್ ಮೈದಾನದಲ್ಲಿ ಅಬ್ಬರಿಸಿದರು. ಎರಡು ಇನ್ನಿಂಗ್ಸ್ನಲ್ಲಿಯೂ ಯಾದವ್ ತಲಾ ಮೂರು ವಿಕೆಟ್ ಕಿತ್ತು ಮಿಂಚಿದ್ದಾರೆ. ಈ ಮಧ್ಯೆ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ಮತ್ತೋರ್ವ ವೇಗಿಗೆ ವಿಶ್ರಾಂತಿ ನಿಡುವ ಸಾಧ್ಯತೆಯಿದೆ. ಜಸ್ಪ್ರೀತ್ ಬೂಮ್ರಾಗೆ ನಾಲ್ಕನೇ ಪಂದ್ಯದಲ್ಲಿ ವಿಶ್ರಾಂತಿ ನೀಡಿ ಮೊಹಮ್ಮದ್ ಶಮಿಯನ್ನು ಆಡುವ ಬಳಗಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ. ಈ ಮೂಲಕ ಬೌಲರ್ಗಳ ಮೇಲಿರುವ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಲಿದೆ.