ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮತ್ತೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರ ವರ್ತನೆಯ ವಿರುದ್ಧ ಕೆಂಡ ಕಾರಿದ್ದಾರೆ. ಪಿಚ್ ಬಗ್ಗೆ ಟೀಕೆಯನ್ನು ಮಾಡಿದ್ದ ಹಿರಿಯ ಆಟಗಾರರ ನಿಲುವಿಗೆ ಕಠಿಣ ಮಾತುಗಳಲ್ಲಿ ಅವರು ಚಾಟಿ ಬೀಸಿದ್ದಾರೆ. ಹಾಗೆ ಮಾತನಾಡುವ ಮಾತುಗಳಿಗೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ. ಅವರು ಪ್ರಚಾರಕ್ಕಾಗಿ ಈ ರೀತಿಯ ಮಾತುಗಳನ್ನು ಆಡುತ್ತಿದ್ದಾರೆ ಎಂದಿದ್ದಾರೆ ಸುನಿಲ್ ಗವಾಸ್ಕರ್.
"ಬೌಲಿಂಗ್ ಹಾಗೂ ಬ್ಯಾಟಿಂಗ್ ಬಗ್ಗೆ ನಾವು ಚರ್ಚೆಯನ್ನು ನಡೆಸಬೇಕು. ಬ್ಯಾಟ್ಸ್ಮನ್ ಬೌಲ್ಡ್ ಆದರೆ ಅಥವಾ ಎಲ್ಬಿಡ್ಬ್ಯು ಆದರೆ ಅದನ್ನು ನಾವು ಕೆಟ್ಟ ಪಿಚ್ ಎಂದು ಹೇಳಲು ಹೇಗೆ ಸಾಧ್ಯ. ನಾವ್ಯಾಕೆ ವಿದೇಶಿ ಆಟಗಾರರಿಗೆ ಇಷ್ಟು ಪ್ರಮಾಣದಲ್ಲಿ ಪ್ರಾಮುಖ್ಯತೆಯನ್ನು ನೀಡುತ್ತಿದ್ದೇವೆ. ಅವರು ಏನೋ ಹೇಳಿದ್ದನ್ನು ನಾವ್ಯಾಗೆ ಚರ್ಚಿಸಬೇಕು?" ಎಂದು ಸುನಿಲ್ ಗವಾಸ್ಕರ್ ಅಧಿಕೃತ ಪ್ರಸಾರಕರಾದ ಸ್ಟಾರ್ಸ್ಪೋರ್ಟ್ಸ್ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಭಾರತ vs ಇಂಗ್ಲೆಂಡ್: ಅಂತಿಮ ಟೆಸ್ಟ್, 2ನೇ ದಿನ, Live ಸ್ಕೋರ್ ಮಾಹಿತಿ
"ಭಾರತ 36 ರನ್ಗಳಿಗೆ ಆಲೌಟ್ ಆಗಿದ್ದಾಗ ಕಪಿಲ್ದೇವ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿರೇಂದ್ರ ಸೆಹ್ವಾಗ್ ನೀಡಿದ್ದ ಪ್ರತಿಕ್ರಿಯೆಗಳಿಗೆ ಆ ದೇಶದ ಮಾಧ್ಯಗಳು ಪ್ರಾಮುಖ್ಯತೆಯನ್ನು ನೀಡಿದ್ದವಾ? ಖಂಡಿತಾ ಇಲ್ಲ. ಹಾಗಿದ್ದಾಗ ನಾವ್ಯಾಕೆ ವಿದೇಶಿಯರ ಹೇಳಿಕೆಗಳುಗೆ ಪ್ರಾಮುಖ್ಯತೆಯನ್ನು ನೀಡಬೇಕು. ನಾವು ಯಾವಾಗ ಅವರ ಹೇಳಿಕೆಗಳಿಗೆ ಪ್ರಾಮುಖ್ಯತೆಯನ್ನು ನೀಡುವುದಿಲ್ಲವೋ ಆಗ ಅವರು ಪಾಠ ಕಲಿಯುತ್ತಾರೆ" ಎಂದು ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.
"ತಮ್ಮ ಮಾತುಗಳಿಗೆ ಪ್ರಾಮುಖ್ಯತೆ ಪ್ರಚಾರ ದೊರೆಯುತ್ತಿದ್ದರೆ ಅವರು ಮತ್ತೆ ಮತ್ತೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಇಂಗ್ಲೆಂಡ್ ತಂಡ ಈ ಬಗ್ಗೆ ದೂರು ನೀಡಿಲ್ಲ. ಇಂಗ್ಲೆಂಡ್ ತಂಡದ ನಾಯಕನೂ ಪಿಚ್ ಬಗ್ಗೆ ದೂರಿಲ್ಲ" ಎಂದು ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಆ್ಯಂಡ್ರೋ ಸ್ಟ್ರಾಸ್, ಡೇವಿಡ್ ಲಾಯ್ಡ್ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರು ಮೂರನೇ ಪಂದ್ಯದ ಬಳಿಕ ಪಿಚ್ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಮೈಕಲ್ ವಾನ್ ಅಂತೂ ಇದು ಐದು ದಿನಗಳ ಟೆಸ್ಟ್ ನಡೆಯಲು ಪೂರಕವಾದ ಪಿಚ್ ಅಲ್ಲವೇ ಅಲ್ಲ ಇದು ಎಂದು ಹೇಳಿದ್ದರು. ಇದಕ್ಕೆ ಸಾಕಷ್ಟು ಟೀಕೆಯನ್ನು ಕೂಡ ಎದುರಿಸಿದ್ದಾರೆ ಮೈಕಲ್ ವಾನ್.