ಆತ ಕೋಚ್ ಮಾಡಿದ ತಂಡವೆಲ್ಲಾ ಅವನತಿಯತ್ತ ಸಾಗುತ್ತಿದೆ: ಲಂಕಾ ಕೋಚ್ಗೆ ಕನೇರಿಯಾ ಚಾಟಿ

ಬೆಂಗಳೂರು, ಜುಲೈ 26: ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್ಗಳ ಸರಣಿಯಲ್ಲಿ ಶ್ರೀಲಂಕಾ ತಂಡದ ಕೋಚ್ ಮಿಕ್ಕಿ ಆರ್ಥರ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಶ್ರೀಲಂಕಾ ತಂಡ ಭಾರತದ ವಿರುದ್ಧ ಸೋಲಿನ ಮೇಲೆ ಸೋಲು ಕಾಣುತ್ತಿದ್ದಂತೆಯೇ ಕೋಚ್ ಆರ್ಥರ್ ಮಾರ್ಗದರ್ಶನ ಹಾಗೂ ಅವರ ವರ್ತನೆಗಳ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಭಾರತದ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸೋಲು ಕಂಡ ಬಳಿಕ ಮಿಕ್ಕಿ ಆರ್ಥರ್ ಅವರು ವರ್ತಿಸಿದ ರೀತಿಗೆ ಕಟು ಟೀಕೆಗಳು ವ್ಯಕ್ತವಾಗಿದ್ದವು. ಶ್ರೀಲಂಕಾ ಮಾಜಿ ಕ್ರಿಕೆಟಿಗರು ಕೂಡ ಈ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಈ ಸಾಲಿಗೆ ಈಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ದಾನೀಶ್ ಕನೇರಿಯಾ ಸೇರಿಕೊಂಡಿದ್ದಾರೆ. ಕೋಚ್ ಆಗಿ ಮಿಕ್ಕಿ ಆರ್ಥರ್ ಅವರ ಸಾಧನೆಯನ್ನೇ ಕನೇರಿಯಾ ಪ್ರಶ್ನಿಸಿದ್ದಾರೆ. ತಂಡವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಲ್ಲಿ ಆರ್ಥರ್ ಸತತವಾಗಿ ವಿಫಲವಾಗಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶ್ರೀಲಂಕಾ ಕೋಚ್ ವಿರುದ್ಧ ಚಾಟಿ ಬೀಸಿದ್ದಾರೆ.
ಕಟು ಮಾತುಗಳಲ್ಲಿ ದಾನಿಶ್ ಕನೇರಿಯಾ ಶ್ರೀಲಂಕಾ ಕೋಚ್ ವಿರುದ್ಧ ಹರಿಹಾಯ್ದಿದ್ದಾರೆ. ಹಾಗಾದರೆ ಕನೇರಿಯಾ ಹೇಳಿದ್ದೇನು ಮುಂದೆ ಓದಿ..

ಕಳಪೆ ನಿರ್ವಹಣೆ ಎಂದ ಕನೇರಿಯಾ
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ದಾನಿಶ್ ಕನೇರಿಯಾ ಪ್ರತಿಕ್ರಿಯೆ ನೀಡಿದ್ದು ಶ್ರೀಲಂಕಾ ಕೋಚ್ ಮಿಕ್ಕಿ ಆರ್ಥರ್ ಕಳಪೆ ಆಟಗಾರರ ನಿರ್ವಹಣೆ ಕೌಶಲ್ಯದಲ್ಲಿ ಕಳಪೆಯಾಗಿದ್ದಾರೆ ಎಂದು ವಿವರಿಸಿದ್ದಾರೆ. ಪಾಕಿಸ್ತಾಮ ತಂಡದ ಮಾಜಿ ಕೋಚ್ ಆಗಿರುವ ಮಿಕ್ಕಿ ಆರ್ಥರ್ಗೆ ಕನೇರಿಯಾ ಕ್ರಿಕೆಟ್ ಹೊರತಾದ ವಿಚಾರಗಳ ಬಗ್ಗೆ ಸಲಹೆಯನ್ನು ನೀಡುವುದನ್ನು ಬಿಟ್ಟು ಕೋಚಿಂಗ್ ವಿಚಾರವಾಗಿ ದೃಷ್ಟಿಹರಿಸುವಂತೆ ಹೇಳಿದ್ದಾರೆ.

ಆರ್ಥರ್ ನಿರ್ಧಾರಕ್ಕೆ ಕನೇರಿಯಾ ಕಿಡಿ
"ಮಿಕ್ಕಿ ಆರ್ಥರ್ ತಮ್ಮ ಆಟಗಾರರಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಅವರು ಇವುಗಳ ಬದಲಿಗೆ ಎದುರಾಳಿಯ ವಿರುದ್ಧ ಸೂಕ್ತ ರಣತಂತ್ರದ ಬಗ್ಗೆ ಗಮನಹರಿಸಬೇಕಿದೆ. ಇದು ಸಾಮಾಜಿಕ ಜಾಲತಾಣಗಳ ಕಾಲ. ಬಯೋಬಬಲ್ನಲ್ಲಿ ಆಟಗಾರರು ಅದನ್ನು ಸಹಜವಾಗಿಯೇ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಾರೆ. ಅವುಗಳ ಮೇಲೆ ನಿಯಂತ್ರಣ ಸೂಕ್ತವಲ್ಲ" ಎಂದಿದ್ದಾರೆ ದಾನೀಶ್ ಕನೇರಿಯಾ.

ಆರ್ಥರ್ ಕೋಚ್ ಮಾಡಿದ ತಂಡಗಳು ಅವನತಿ
ಮುಂದುವರಿದು ಮಾತನಾಡಿದ ದಾನೀಶ್ ಕನೇರಿಯಾ ಕೋಚ್ ಆಗಿ ನಿಮ್ಮ ಸಾಧನೆಯೇನು ಎಂದು ಪ್ರಶ್ನಿಸಿದ್ದಾರೆ. "ಕೋಚ್ ಆಗಿ ನೀವು ಏನು ಸಾಧಿಸಿದ್ದೀರಿ? ನೀವು ಏನು ಮಾರ್ಗದರ್ಶನ ನೀಡಿದ್ದೀರಿ. ನೀವು ಯುವ ತಂಡವನ್ನು ಬೆಳೆಸಬೇಕಿದೆ. ಅದರ ಬದಲಿಗೆ ಸೋಲಿನ ನಂತರ ನಿಮ್ಮ ಕೋಪವನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸಿ. ಅನಗತ್ಯ ಸಲಹೆಗಳನ್ನು ನೀಡುವುದನ್ನು ನಿಲ್ಲಿಸಿ. ಆತ ಮಾರ್ಗದರ್ಶನ ನೀಡಿದ ತಂಡಗಳೆಲ್ಲಾ ಅವನತಿಯತ್ತ ಸಾಗಿದೆ" ಎಂದು ದಾನಿಶ್ ಕನೇರಿಯಾ ಕಿಡಿಕಾರಿದ್ದಾರೆ.

ಟೀಮ್ ಇಂಡಿಯಾ ಬಗ್ಗೆ ಕನೇರಿಯಾ ಮೆಚ್ಚುಗೆ
ಇನ್ನು ಇದೇ ಸಂದರ್ಭದಲ್ಲಿ ಭಾರತೀಯ ತಂಡದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ದಾನೀಶ್ ಕನೇರಿಯಾ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತ ತಂಡ ಹೊಂದಿರುವ ಅಪಾರ ಪ್ರಮಾಣದ ಯುವ ಪ್ರತಿಭೆಗಳ ಬಗ್ಗೆಯೂ ಕನೇರಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಭಾರತದ ಪ್ರಮುಖ ಆಟಗಾರರ ತಂಡ ಇಂಗ್ಲೆಂಡ್ನಲ್ಲಿರುವಂತೆಯೇ ಭಾರತದ ಈ ತಂಡ ನೀಡುತ್ತಿರುವ ಪ್ರದರ್ಶನ ತಮ್ಮ ಯೋಜನೆಗಳನ್ನು ಕಾರ್ಯನಿರ್ವಹಿಸುತ್ತಿರುವ ರೀತಿಯಿಂದಾಗಿ ಎದುರಾಳಿ ತಂಡಗಳು ಖಂಡಿತವಾಗಿಯೂ ಒತ್ತಡಕ್ಕೆ ಬೀಳುತ್ತಾರೆ. ಭಾರತ ತಂಡ ಟಿ20 ವಿಶ್ವಕಪ್ನಲ್ಲಿ ಅತ್ಯಂತ ಪ್ರಬಲ ಸ್ಪರ್ಧಿಯಾಗಿದೆ" ಎಂದು ದಾನೀಶ್ ಕನೇರಿಯಾ ಹೇಳಿಕೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications