ಬೆಂಗಳೂರು, ಜುಲೈ 5: ವೇಗದ ಬೌಲರ್ಗಳು ಫಿಟ್ ಆಗಿದ್ದು, ಉತ್ತಮ ಪ್ರದರ್ಶನ ನೀಡಿದ್ದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗೆಲ್ಲಲು ಭಾರತಕ್ಕೆ ಅವಕಾಶವಿದೆ ಎಂದು ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಗೆಲುವು ಬೌಲಿಂಗ್ ಮೇಲೆ ಅವಲಂಬಿತ. ಗೆಲ್ಲಲು 20 ವಿಕೆಟ್ ಅಗತ್ಯವಿರುತ್ತದೆ. 140 ಓವರ್ ಫೀಲ್ಡಿಂಗ್ ಮಾಡುವಂತಾದರೆ ಅದು ಸಾಕಷ್ಟು ನೆರವಾಗುತ್ತದೆ. 2007ರಲ್ಲಿ ನಮ್ಮ ಬಳಿ ಉತ್ತಮ ಸೀಮರ್ಗಳಿದ್ದರು. ಅವರು ಫಿಟ್ ಆಗಿರುವಂತೆ ನೋಡಿಕೊಳ್ಳಲಾಗಿತ್ತು.
ಈಗ ಭಾರತ ಮತ್ತಷ್ಟು ಉತ್ತಮ ಸೀಮರ್ಗಳನ್ನು ಹೊಂದಿದೆ. ಅವರು ಫಿಟ್ ಆಗಿದ್ದರೆ ಅವರಿಗೆ ಉತ್ತಮ ಅವಕಾಶ ದೊರಕಲಿದೆ ಎಂದು ದ್ರಾವಿಡ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
2007ರ ಪ್ರವಾಸದಲ್ಲಿ ಸ್ಮರಣೀಯ ಗೆಲುವನ್ನು ಸಾಧಿಸಿದ್ದ ಭಾರತವು, ಅಲ್ಲಿಂದೀಚೆಗೆ ಇಂಗ್ಲೆಂಡ್ ನೆಲದಲ್ಲಿ ಹೀನಾಯ ಪ್ರದರ್ಶನ ನೀಡಿದೆ. 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 4-0ರ ಸೋಲು ಕಂಡಿತ್ತು.
ಇಡೀ ಸರಣಿಯಲ್ಲಿ ರಾಹುಲ್ ದ್ರಾವಿಡ್ ಮಾತ್ರ ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ್ದರು. 2014ರಲ್ಲಿ ಭಾರತ 3-1ರಿಂದ ಸರಣಿ ಸೋತಿತ್ತು. ಲಾರ್ಡ್ಸ್ ಮೈದಾನದಲ್ಲಿ ಗೆಲುವು ಕಂಡಿದ್ದು ಭಾರತದ ಸಾಧನೆಯಾಗಿತ್ತು.
ಹಾಲಿ ನಾಯಕ ವಿರಾಟ್ ಕೊಹ್ಲಿ ಅವರ 2014ರ ಇಂಗ್ಲೆಂಡ್ ಪ್ರವಾಸ ಅವರ ಪಾಲಿಗೆ ಕಹಿಯಾಗಿತ್ತು. ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಅವರ ಸ್ವಿಂಗ್ ದಾಳಿ ಎದುರು ಕೊಹ್ಲಿ ಮಂಕಾಗಿದ್ದರು.
ಆದರೆ, ಈ ಇಬ್ಬರೂ ಬೌಲರ್ಗಳು ನಾಲ್ಕು ವರ್ಷದ ಹಿಂದೆ ಹೊಂದಿದ್ದ ಮೊನಚು ಉಳಿಸಿಕೊಂಡಿಲ್ಲ. ಈ ಬೌಲರ್ಗಳು ಯಶಸ್ಸು ಕಾಣಬೇಕೆಂದರೆ ಅವರಿಗೆ ಪಿಚ್ ಸಹಕಾರ ಬೇಕು ಎಂದು ದ್ರಾವಿಡ್ ಅಭಿಪ್ರಾಯಪಡುತ್ತಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಸಾಕಷ್ಟು ಅನುಭವದ ಕೊರತೆ ಹೊಂದಿರುವ ಇಂಗ್ಲೆಂಡ್ ಬ್ಯಾಟಿಂಗ್ ಸ್ವಲ್ಪ ಅಸ್ಥಿರತೆ ಹೊಂದಿದೆ ಎಂದು ಸಹ ದ್ರಾವಿಡ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ಯಾವ ರೀತಿಯ ಪಿಚ್ಗಳನ್ನು ತಯಾರಿಸುತ್ತದೆ ಎನ್ನುವುದನ್ನು ನೋಡುವುದು ಆಸಕ್ತಿಕರವಾಗಿದೆ. ಏಕೆಂದರೆ ಆಂಡರ್ಸನ್ ಮತ್ತು ಬ್ರಾಡ್ ಇಬ್ಬರೂ ಹಳೆಯ ಸಾಮರ್ಥ್ಯ ಹೊಂದಿಲ್ಲ. ಅವರಿಗೆ ಪಿಚ್ನಿಂದ ನೆರವು ಬೇಕಾಗಿದೆ.
ಅದೇ ರೀತಿ ಇಂಗ್ಲೆಂಡ್ ಬ್ಯಾಟಿಂಗ್ ಹಿಂದಿನಂತಿಲ್ಲ. ಹೀಗಾಗಿ ಈ ಸರಣಿ ಹೆಚ್ಚು ಕುತೂಹಲ ಮೂಡಿಸಿದೆ ಎಂದು ದ್ರಾವಿಡ್ ತಿಳಿಸಿದ್ದಾರೆ.
ಕ್ರಿಕೆಟ್ ತಮ್ಮ ಕಾಲಘಟ್ಟಕ್ಕಿಂತಲೂ ಹೆಚ್ಚು ಆಕ್ರಮಣಕಾರಿ ಆಟವಾಗಿ ಪರಿವರ್ತನೆಯಾಗಿದೆ ಎಂದು ಭಾರತ 'ಎ' ತಂಡದ ಕೋಚ್ ಕೂಡ ಆಗಿರುವ ದ್ರಾವಿಡ್ ಹೇಳಿದ್ದಾರೆ.
It's huddle time!#ENGvIND pic.twitter.com/32wBP2JAAY
— BCCI (@BCCI) 3 July 2018
ಈಗ ಇದು ಆಕ್ರಮಣಕಾರಿ ಆಟವಾಗಿರುವುದು ನಿಜ. ಈಗಿನ ಆಟದಲ್ಲಿ ಜಗತ್ತಿನ ಎಲ್ಲ ಕಡೆಯೂ ಹಸಿರು ಪಿಚ್ನ ಸೀಮ್ ಕಂಡಿಷನ್ನಲ್ಲಿ ಬೌಲಿಂಗ್ ಮಾಡುವುದು ಕಷ್ಟಕರ. ಅದಕ್ಕಿಂತಲೂ ಚೆಂಡನ್ನು ಬಾರಿಸುವ ಸಾಮರ್ಥ್ಯ ಆಟಗಾರರಲ್ಲಿ ಹೆಚ್ಚಾಗಿದೆ.
ನಾವು ಆಫ್ಸ್ಟಂಪ್ನಿಂದ ಆಚೆ ಹೋಗುವ ಚೆಂಡನ್ನು ಹೊರಬಿಡುವ ಸಾಮರ್ಥ್ಯ ಹೊಂದುವುದು ನಮ್ಮ ವೃತ್ತಿ ಬದುಕನ್ನು ನಿರ್ಧರಿಸುತ್ತಿತ್ತು. ಆದರೆ ಈಗ ಹಾಗಿಲ್ಲ.
Set!#ENGvIND pic.twitter.com/3hjxipy0uK
— BCCI (@BCCI) 3 July 2018
ಈ ಕಾರಣದಿಂದಲೇ ನಾವು ನಮ್ಮ ಎ ತಂಡದ ಸರಣಿಯನ್ನು ವಿಸ್ತರಿಸಿರುವುದು. ಅವರಿಗೆ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳ ಅನುಭವ ಹೆಚ್ಚಾಗಬೇಕು ಎನ್ನುವುದು ನಮ್ಮ ಉದ್ದೇಶ ಎಂದು ದ್ರಾವಿಡ್ ವಿವರಿಸಿದ್ದಾರೆ.