ಟೀಂ ಇಂಡಿಯಾವನ್ನು ಏಕಾಂಗಿಯಾಗಿ ಗೆಲುವಿನತ್ತ ಕೊಂಡೊಯ್ದ ಸೂರ್ಯ
ಶನಿವಾರ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಏಕಾಂಗಿಯಾಗಿ ಗೆಲುವಿನತ್ತ ಕೊಂಡೊಯ್ದ ಸೂರ್ಯಕುಮಾರ್ ಯಾದವ್, ಅವರ ಶಾಟ್ಗಳಲ್ಲಿನ ಸಾಮ್ಯತೆಗಳಿಂದಾಗಿ ದಕ್ಷಿಣ ಆಫ್ರಿಕಾದ ಲೆಜೆಂಡ್ ಎಬಿ ಡಿವಿಲಿಯರ್ಸ್ಗೆ ಹೋಲಿಸಲಾಗುತ್ತದೆ.
ಆದರೆ, ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಅವರು ಒಂದು ಹೆಜ್ಜೆ ಮುಂದೆ ಹೋಗಿ "ಯೂನಿವರ್ಸ್ ಬಾಸ್' ಎಂಬ ಹೆಸರಿನಿಂದ ಕರೆಯಲ್ಪಡುವ ವೆಸ್ಟ್ ಇಂಡೀಸ್ ಶ್ರೇಷ್ಠ ಕ್ರಿಕೆಟಿಗ ಕ್ರಿಸ್ ಗೇಲ್ ಅವರೊಂದಿಗೆ ಸೂರ್ಯಕುಮಾರ್ನನ್ನು ಹೋಲಿಸಿದ್ದಾರೆ.
ಇಬ್ಬರು ಕೂಡ ಸೂರ್ಯಕುಮಾರ್ನ ಮುಂದೆ ಸಣ್ಣದಾಗಿ ಕಾಣುತ್ತಾರೆ
"ಇದೀಗ ಹೊಸ ಯೂನಿವರ್ಸ್ ಬಾಸ್ ಸೂರ್ಯಕುಮಾರ್ ಯಾದವ್. ಈ ಹುಡುಗನ ಬಗ್ಗೆ ನಾನು ಏನು ಹೇಳಲಿ, ಸೂರ್ಯಕುಮಾರ್ ಅವರಂತಹ ಆಟಗಾರ ಜೀವನದಲ್ಲಿ ಒಮ್ಮೆ ಮಾತ್ರ ಬರುತ್ತಾನೆ," ಎಂದು ಪಾಕ್ ಮಾಜಿ ಕ್ರಿಕೆಟಿಗ ಹೇಳಿದರು.
"ನೀವು ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಬಗ್ಗೆ ಮಾತನಾಡಬಹುದು. ಆದರೆ ಈ ಇಬ್ಬರು ಕೂಡ ಸೂರ್ಯಕುಮಾರ್ನ ಮುಂದೆ ಸಣ್ಣದಾಗಿ ಕಾಣುತ್ತಾರೆ. ಸೂರ್ಯಕುಮಾರ್ ಈಗಾಗಲೇ ಅವರನ್ನು ಮರೆಮಾಚಿದ್ದಾರೆ ಮತ್ತು ಟಿ20 ಕ್ರಿಕೆಟ್ ಅನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ದಿದ್ದಾರೆ," ಎಂದು ದಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
ಸೂರ್ಯಕುಮಾರ್ ತಮ್ಮ ಟ್ರೇಡ್ಮಾರ್ಕ್ ಶಾಟ್ಗಳಿಂದ ಪ್ರಸಿದ್ಧಿ
ಶನಿವಾರದಂದು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾವನ್ನು 91 ರನ್ಗಳಿಂದ ಸೋಲಿಸಿ ಸ್ಮರಣೀಯ ಸರಣಿ ಜಯ ಸಾಧಿಸಿದರು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ತನಗೆ ಸರಿಸಾಟಿಯಿಲ್ಲದ ಶ್ರೇಷ್ಠ ಆಟವನ್ನು ಚುಟುಕು ಸ್ವರೂಪದಲ್ಲಿ ಮತ್ತೊಮ್ಮೆ ಪ್ರದರ್ಶಿಸಿದರು.
ಸೂರ್ಯಕುಮಾರ್ ಅವರ ಅಜೇಯ 112 ರನ್ಗಳ ನೆರವಿನಿಂದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ ಐದು ವಿಕೆಟ್ಗೆ 228 ರನ್ ಗಳಿಸಿತು. ಇದು ಭಾರತದ ಬೌಲರ್ಗಳಿಗೆ ಕೆಲಸವನ್ನು ಸುಲಭಗೊಳಿಸಿತು. ಸೂರ್ಯಕುಮಾರ್ ಯಾದವ್ ತಮ್ಮ ಟ್ರೇಡ್ಮಾರ್ಕ್ ಶಾಟ್ಗಳಿಂದ ಮೈದಾನದಾದ್ಯಂತ ಬಾಲ್ ಅನ್ನು ಕಳಿಸಿದರು ಮತ್ತು ಶ್ರೀಲಂಕಾ ಬೌಲರ್ಗಳ ಬೆವರಿಳಿಸಿದರು.
ನಂತರ ಭಾರತದ ಬೌಲರ್ಗಳು ಪ್ರಾಬಲ್ಯ ಮೆರೆದು, ಶ್ರೀಲಂಕಾ ತಂಡವನ್ನು 137 ರನ್ಗಳಿಗೆ ಕಟ್ಟಿಹಾಕಿದರು. ಅಂತಿಮವಾಗಿ ಭಾರತ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು. ರೋಹಿತ್ ಶರ್ಮಾ ನಾಯಕತ್ವದ ಭಾರತ ಮಂಗಳವಾರ (ಜನವರಿ 10) ಗುವಾಹಟಿಯಲ್ಲಿ ನಡೆಯಲಿರುವ ಏಕದಿನ ಸರಣಿಯ ಮೊದಲ ಪಂದ್ಯವನ್ನಾಡಲಿದೆ.