
ನವದೆಹಲಿ, ಮಾರ್ಚ್ 14: 'ರಣಜಿ ಟ್ರೋಫಿ' ಟೂರ್ನಿಗಾಗಿ ತಂಡ ರಚಿಸುವಾಗಿ ನಮ್ಮನ್ನು ಆರಿಸುವುದಾಗಿ ನಂಬಿಸಿ 80 ಲಕ್ಷ ರೂ. ಪಡೆದು ವಂಚಿಸಲಾಗಿದೆ ಎಂದು ಮೂವರು ದೆಹಲಿ ಕ್ರಿಕೆಟಿಗರು ಆರೋಪಿಸಿದ್ದಾರೆ. ಇದರನ್ವಯ ಪೊಲೀಸರು ದೂರು ದಾಖಲಿಸಿಕೊಂಡಿರುವುದು ವರದಿಯಾಗಿದೆ.
ರಣಜಿ ಟ್ರೋಫಿಯಲ್ಲಿ ಕ್ರಮವಾಗಿ ನಾಗಲ್ಯಾಂಡ್, ಮಣಿಪುರ್ ಮತ್ತು ಝಾರ್ಖಂಡ್ ತಂಡಗಳಿಗೆ ಆರಿಸುವುದಾಗಿ ಹಣಪಡೆದು ತಮ್ಮನ್ನು ವಂಚಿಸಲಾಗಿದೆ ಎಂದು ದೆಹಲಿಯ ಆಟಗಾರರಾದ ಕನಿಷ್ಕ್ ಗೌರ್, ರೋಹಿಣಿಯ ಕಿಶನ್ ಅತ್ರಿ ಮತ್ತು ಗುರ್ಗಾಂವ್ನ ಶಿವಮ್ ಶರ್ಮಾ ಅವರು ಆರೋಪಿಸಿ ಬಿಸಿಸಿಐಗೆ ದೂರಿತ್ತಿದ್ದರು.
80 ಲಕ್ಷ ರೂ. ಪಡೆದು ತಂಡಗಳಿಗೆ ಆಯ್ಕೆ ನಡೆಸುವುದಾಗಿ ನಂಬಿಸಲಾಗಿತ್ತು. ನಕಲಿ ಆಯ್ಕೆ ಪತ್ರವನ್ನೂ ನೀಡಲಾಗಿತ್ತು ಎಂದು ಆಟಗಾರರು ಬಿಸಿಸಿಐಗೆ ದೂರಿತ್ತಿದ್ದರು. ಈ ಕುರಿತು ಬಿಸಿಸಿಐ ಪೊಲೀಸ್ ದೂರು ನೀಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಬಿಸಿಸಿಐ ಮೂಲ ತಿಳಿಸಿದೆ.