ಐಪಿಎಲ್ನಲ್ಲಿ ಅವಕಾಶ ಸಿಗದೇ ನೊಂದಿದ್ದಾಗ ನೆರವಾಗಿದ್ದು ದ್ರಾವಿಡ್: ಅವೇಶ್ ಖಾನ್

2015ರಿಂದ ಟೀಮ್ ಇಂಡಿಯಾ ಎ ಮತ್ತು ಅಂಡರ್-19 ತಂಡಗಳಿಗೆ ತರಬೇತಿಯನ್ನು ನೀಡುತ್ತಿರುವ ರಾಹುಲ್ ದ್ರಾವಿಡ್ ಈಗಾಗಲೇ ಹಲವಾರು ಪ್ರತಿಭೆಗಳನ್ನು ಟೀಮ್ ಇಂಡಿಯಾಗೆ ನೀಡಿದ್ದಾರೆ. ದ್ರಾವಿಡ್ ಗರಡಿಯಲ್ಲಿ ಬೆಳೆದಿರುವ ಹಲವಾರು ಕ್ರಿಕೆಟಿಗರು ಪ್ರಸ್ತುತ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದರೆ, ಇನ್ನೂ ಕೆಲವರು ಐಪಿಎಲ್ ಟೂರ್ನಿಗಳಲ್ಲಿ ಮಿಂಚಿದ್ದಾರೆ. ಅಂತಹ ಪ್ರತಿಭೆಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಅವೇಶ್ ಖಾನ್ ಕೂಡ ಒಬ್ಬರು.
2016ರ ಅಂಡರ್-19 ವಿಶ್ವಕಪ್ ಸಮಯದಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದ ಅವೇಶ್ ಖಾನ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದರು. ಆ ಟೂರ್ನಿ ನಡೆಯುವ ವೇಳೆ ಐಪಿಎಲ್ ಹರಾಜು ಕೂಡ ಇತ್ತು, ಆದರೆ ಅವೇಶ್ ಖಾನ್ ಆ ಹರಾಜಿನಲ್ಲಿ ಮಾರಾಟವಾಗದೆ ಉಳಿದುಬಿಟ್ಟರು. ಹೀಗೆ 2016ರ ಐಪಿಎಲ್ ಹರಾಜಿನಲ್ಲಿ ಯಾರಿಂದಲೂ ಖರೀದಿಸಲ್ಪಡದೇ ನೊಂದ ಅವೇಶ್ ಖಾನ್ಗೆ ರಾಹುಲ್ ದ್ರಾವಿಡ್ ಯಾವ ರೀತಿ ಉತ್ತೇಜಿಸಿದರು ಎಂಬುದನ್ನು ಸ್ವತಃ ಅವೇಶ್ ಖಾನ್ ಬಿಚ್ಚಿಟ್ಟಿದ್ದಾರೆ.
'ನಾನು 2016ರ ಅಂಡರ್-19 ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ 3 ಪಂದ್ಯಗಳನ್ನಾಡಿ 9 ವಿಕೆಟ್ಗಳನ್ನು ಪಡೆದಿದ್ದೆ. ಆ ಟೂರ್ನಿಯಲ್ಲಿ ನಮೀಬಿಯಾ ತಂಡದ ವಿರುದ್ಧ ನಾವು ಕ್ವಾರ್ಟರ್ ಫೈನಲ್ ಆಡಿದ್ದೆವು, ಅದೇ ದಿನ ಐಪಿಎಲ್ ಹರಾಜು ಕೂಡ ಇತ್ತು. ಪಂದ್ಯ ಮುಗಿದ ಬಳಿಕ ಐಪಿಎಲ್ ಹರಾಜಿನಲ್ಲಿ ನನ್ನನ್ನು ಯಾರೂ ಕೂಡ ಖರೀದಿಸಿಲ್ಲ ಎಂಬ ವಿಷಯ ನನಗೆ ತಿಳಿಯಿತು, ಆ ಕ್ಷಣವೇ ನಾನು ಕುಸಿದು ನೋವಿಗೊಳಗಾಗಿದ್ದೆ' ಎಂದು ಅವೇಶ್ ಖಾನ್ ಹೇಳಿಕೊಂಡರು.
ಇನ್ನೂ ಮುಂದುವರೆದು ಮಾತನಾಡಿದ ಅವೇಶ್ ಖಾನ್ 'ಆ ಸಂದರ್ಭದಲ್ಲಿ ನನ್ನ ಬಳಿ ಬಂದ ರಾಹುಲ್ ದ್ರಾವಿಡ್ ಸರ್ ದೇಶಕ್ಕಾಗಿ ಆಡುವುದು ಐಪಿಎಲ್ಗಿಂತ ಮುಖ್ಯ, ಐಪಿಎಲ್ ನಿನ್ನ ಕೈನಲ್ಲಿಲ್ಲ ಆದರೆ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡುವುದು ನಿನ್ನ ಕೈನಲ್ಲಿದೆ. ಪ್ರಸ್ತುತ ನಡೆಯುತ್ತಿರುವ ಅಂಡರ್-19 ವಿಶ್ವಕಪ್ ನಲ್ಲಿ ನೀನು ಉತ್ತಮ ಪ್ರದರ್ಶನ ತೋರಿದರೆ ಟೀಮ್ ಇಂಡಿಯಾ ಎ ತಂಡಕ್ಕೆ ಆಯ್ಕೆಯಾಗುತ್ತೀಯ, ಹೀಗಾಗಿ ನೀನು ಭಾರತ ತಂಡದ ಪರ ಉತ್ತಮವಾಗಿ ಆಡಬೇಕಿದೆ ಎಂದು ನನ್ನನ್ನು ಹುರಿದುಂಬಿಸಿದರು' ಎನ್ನುತ್ತಾ ದ್ರಾವಿಡ್ ನೀಡಿದ್ದ ಮಹತ್ವದ ಸಲಹೆಯನ್ನು ಅವೇಶ್ ಖಾನ್ ನೆನಪಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications