
ನವದೆಹಲಿ: ಟೀಮ್ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ಅವರ ತಂದೆ ಕಿರಣ್ ಪಾಲ್ ಸಿಂಗ್ ಗುರುವಾರ (ಮೇ 20) ನಿಧನರಾಗಿದ್ದಾರೆ. 63ರ ಹರೆಯದ ಪಾಲ್ ಸುದೀರ್ಘ ಸಮಯದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಮೀರತ್ನ ತನ್ನ ನಿವಾಸದಲ್ಲಿ ಕಿರಣ್ ಸಾವನ್ನಪ್ಪಿದ್ದಾರೆ.
ಉತ್ತರಪ್ರದೇಶದಲ್ಲಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸಿದ್ದ ಕಿರಣ್ ಪಾಲ್ ಸಿಂಗ್, ನೋಯ್ಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ಅವರನ್ನು ಮನೆಗೆ ಕರೆತರಲಾಗಿತ್ತು. ಭುವನೇಶ್ವರ್ ಕುಮಾರ್ ಈಗ ಮನೆಯಲ್ಲಿದ್ದಾರೆ. ಐಪಿಎಲ್ನಲ್ಲಿ ಭುವಿ ಆಡುವ ಸನ್ ರೈಸರ್ಸ್ ಹೈದರಾಬಾದ್ ತಂಡ ಭುವಿ ತಂದೆ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದೆ.
'ತಂದೆಯನ್ನು ಕಳೆದುಕೊಂಡಿರುವ ಭುವನೇಶ್ವರ್ ಕುಮಾರ್ಗೆ ಮತ್ತು ಅವರ ಕುಟುಂಬಸ್ಥರಿಗೆ ನಮ್ಮ ಸಂತಾಪಗಳು. ಧೈರ್ಯವಾಗಿರು ಭುವಿ' ಎಂದು ಎಸ್ಆರ್ಎಚ್ ಟ್ವೀಟ್ ಮಾಡಿದೆ. ಅಮಾನತಾಗಿರುವ ಐಪಿಎಲ್ 2021ರ ಸೀಸನ್ನಲ್ಲಿ ಎಸ್ಆರ್ಎಚ್ ಕೆಟ್ಟ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೆಳ ಕುಸಿದಿತ್ತು.
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇತ್ತೀಚೆಗೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡ ಪ್ರಕಟಿಸಿತ್ತು. ಇದರಲ್ಲಿ ಭುವನೇಶ್ವರ್ ಕುಮಾರ್ ಇರಲಿಲ್ಲ.
ನೋಯ್ಡಾ ಆಸ್ಪತ್ರೆಗೆ ದಾಖಲಾಗಿದ್ದ ಕಿರಣ್ ಆಗಾಗ ಕೀಮೋ ತೆರಪಿ ಮಾಡಿಸಿಕೊಳ್ಳುತ್ತಿದ್ದರು. ಆ ಚಿಕಿತ್ಸೆಯಿಂದ ಸ್ವಲ್ಪ ಸುಧಾರಿಸಿದ್ದರು. ಆದರೆ ಕಳೆದ ಕೆಲ ವಾರಗಳಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.